ಎಂಟು ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಲಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿವೆ. ಭಾರತ ಸಹ ಈ ಟೂರ್ನಿಯಲ್ಲಿ ಭಾಗವಹಿಸಲಿದೆ. ಈಗಾಗಲೆ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ, ಮತ್ತೊಮ್ಮೆ ಐಸಿಸಿ ಟ್ರೋಫಿ ಗೆಲ್ಲುವ ಕನಸಿನೊಂದಿಗೆ, ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಟೂರ್ನಿಗಾಗಿ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಬಲಿಷ್ಠ ಟೀಮ್ ಇಂಡಿಯಾದ ಮುಂದೆ ಹಲವು ಸವಾಲುಗಳು ಎದುರಾಗಿವೆ.
ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಈಗಾಗಲೇ ಭಾರತ ಪ್ರಕಟಿಸಿದೆ. ಒಂದು ವೇಳೆ ಪ್ರಕಟಿತ ತಂಡದಲ್ಲಿ ಏನಾದ್ರೂ ಬದಲಾವಣೆ ಮಾಡುವುದಿದ್ದರೆ, ಮಾಡಿಕೊಳ್ಳಲು ಫೆಬ್ರವರಿ 11ರ ವರೆಗೆ ಸಮಯಾಕಾಶವನ್ನು ನೀಡಲಾಗುತ್ತಿದೆ. ಹೀಗಾಗಿ ಭಾರತ ತಂಡದಲ್ಲಿ ಮೂರು ಬದಲಾವಣೆ ಕಂಡು ಬರುವ ಸಾಧ್ಯತೆ ಇದೆ. ಹಾಗಿದ್ದರೆ ಯಾವೆಲ್ಲಾ ಆಟಗಾರರು ತಂಡ ಸೇರಲಿದ್ದಾರೆ ಎಂಬ ಬಗ್ಗೆ ಇಂಟ್ರಸ್ಟಿಂಗ್ ರಿಪೋರ್ಟ್ ಇಲ್ಲಿದೆ.

ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಅವರು ಚಾಂಪಿಯನ್ಸ್ ಟ್ರೋಫಿ ಆಡುವುದು ಡೌಟ್ ಎಂದು ಹೇಳಲಾಗುತ್ತಿದೆ. ಇವರು ಇನ್ನು ಗಾಯದಿಂದ ಚೇತರಿಸಿಕೊಳ್ಳದ ಕಾರಣ ಈ ಸುದ್ದಿಗಳು ಹರಿದಾಡುತ್ತಿವೆ. ಒಂದು ವೇಳೆ ಇವರು ದುಬೈ ಫ್ಲೈಟ್ ಹತ್ತದೇ ಇದ್ದಲ್ಲಿ ಈ ಸ್ಥಾನವನ್ನು ತುಂಬಲ ಮೊಹಮ್ಮದ್ ಸಿರಾಜ್ ರೆಡಿ ಇದ್ದಾರೆ. ಇವರು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ನಲ್ಲಿ ಅಮೋಘ ದಾಳಿ ಸಂಘಟಿಸಿ ತಂಡದ ಗೆಲುವಿನಲ್ಲಿ ಮಿಂಚಿದ್ದಾರೆ. ಒಂದು ವೇಳೆ ಬುಮ್ರಾ ಗಾಯದಿಂದಾಗಿ ದೂರ ಸರಿದರೆ, ಸಿರಾಜ್ಗೆ ಚಾನ್ಸ್ ಪಕ್ಕಾ ಎಂದು ಹೇಳಲಾಗುತ್ತಿದೆ.
ಸದ್ಯ ಟೀಮ್ ಇಂಡಿಯಾದಲ್ಲಿರುವ ಟಾಪ್ ಆರ್ಡರ್ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಇವರೆಲ್ಲರೂ ಸಹ ರೈಟ್ ಹ್ಯಾಂಡ್ ಬ್ಯಾಟರ್ಗಳು ಇವರಲ್ಲಿ ಒಬ್ಬರೂ ಲೆಫ್ಟ್ ಹ್ಯಾಂಡ್ ಬ್ಯಾಟರ್ ಇಲ್ಲ. ಹೀಗಾಗಿ ಬೌಲರ್ ಲೈನ್ ಹಾಳು ಮಾಡಲು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ತಿಲಕ್ ವರ್ಮಾ ಅವರಿಗೆ ಅವಕಾಶ ನೀಡಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಇವರು ಟಿ20 ಕ್ರಿಕೆಟ್ನಲ್ಲಿ ನೀಡುತ್ತಿರುವ ಪ್ರದರ್ಶನ ಇವರನ್ನು ದುಬೈ ಮೈದಾನಕ್ಕೆ ಕೊಂಡೊಯ್ದು ನಿಲ್ಲಿಸಬಹುದು.

ಸದ್ಯ ಇಂಗ್ಲೆಂಡ್ ತಂಡವನ್ನು ಬಹುವಾಗಿ ಕಾಡುತ್ತಿರುವ ಬೌಲರ್ಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವ ಬೌಲರ್ ವರುಣ್ ಚಕ್ರವರ್ತಿ. ಇವರನ್ನು ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಆಯ್ಕೆ ಮಾಡಿಲ್ಲ. ಮಿಸ್ಟ್ರೀ ಸ್ಪಿನ್ ಬೌಲರ್ ಅವರನ್ನು ಕೈ ಬಿಡುವುದು ಎಷ್ಟು ಸೂಕ್ತ ಎಂಬ ಪ್ರಶ್ನೆಗಳು ಎದ್ದಿವೆ. ಅಂದಹಾಗೆ ಟೀಮ್ ಇಂಡಿಯಾದಲ್ಲಿ ಸದ್ಯ ಇರುವ ನಾಲ್ಕು ಸ್ಪಿನ್ ಬೌಲರ್ಗಳಲ್ಲಿ ಮೂವರು ಎಡಗೈ ಸ್ಪಿನ್ ಬೌಲರ್ಗಳು. ಎದುರಾಳಿ ಬ್ಯಾಟರ್ಗಳನ್ನು ಕಾಡಲು ಮಿಸ್ಟ್ರಿ ಎಲಿಮೆಂಟ್ ಬೇಕಾಗುತ್ತದೆ. ಹೀಗಾಗಿ ವರುಣ್ಗೆ ಅವಕಾಶ ನೀಡಿದರೆ ಬೆಸ್ಟ್ ಎಂಬ ಮಾತುಗಳು ಕೇಳಿ ಬರುತ್ತಿವೆ.