
ಆಸ್ಟ್ರೇಲಿಯಾದ ವೇಗದ ಪಿಚ್ಗಳಲ್ಲಿ ಸ್ಪಿನ್ ಬೌಲರ್ ಗಳಿಗೆ ಮಿಂಚಲು ಹಚ್ಚಿನ ಅವಕಾಶಗಳು ಇರುವುದಿಲ್ಲ. ಆದರೂ ಟೀಂ ಇಂಡಿಯಾ, ಈ ಬಾರಿ ವಿಶ್ವಕಪ್ ತಂಡದಲ್ಲಿ ಮೂವರು ಸ್ಪಿನ್ ಬೌಲರ್ ಗಳನ್ನು ಒಳಗೊಂಡಿದೆ. ಮೇಲ್ನೋಟಕ್ಕೆ ಭಾರತ ತಂಡ ಬಲಿಷ್ಠವಾಗಿ ಕಂಡರೂ ಕೂಡ, ಹಲವು ಮಾಜಿ ಕ್ರಿಕೆಟಿಗರು, ಹೆಚ್ಚಿನ ಸ್ಪಿನ್ನರ್ ಗಳನ್ನು ಆಯ್ಕೆ ಮಾಡುವ ಅಗತ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಈಗ ಭಾರತದ ಮಾಜಿ ಕೋಚ್ ಭರತ್ ಅರುಣ್ ಕೂಡ ಮೂವರು ಸ್ಪಿನ್ನರ್ಗಳು 'ತುಂಬಾ ಹೆಚ್ಚು' ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶ್ವಕಪ್ ಪಂದ್ಯಗಳಲ್ಲಿ ಓರ್ವ ಸ್ಪಿನ್ನರ್ ಮಾತ್ರ ಆಡಲಿದ್ದಾರೆ. ಆದ್ದರಿಂದ, ಸ್ಪಿನ್ನರ್ ಬದಲಾಗಿ ಎಕ್ಸ್ಪ್ರೆಸ್ ವೇಗಿ ಉಮ್ರಾನ್ ಮಲಿಕ್ ಆಸ್ಟ್ರೇಲಿಯಾ ಟಿ20 ವಿಶ್ವಕಪ್ಗೆ ಆಯ್ಕೆಯಾಗಬೇಕಿತ್ತು ಎಂದು ಅವರು ಹೇಳಿದ್ದಾರೆ.
ಭಾರತದ ವೇಗದ ಬೌಲಿಂಗ್ ಘಟಕದ ಕುರಿತು ಮಾತನಾಡುತ್ತಾ, ಉತ್ತಮ ಅವಕಾಶಗಳು ಸಿಕ್ಕರೆ ಉಮ್ರಾನ ಮಲಿಕ್ ಟಿ20 ಮಾದರಿ ಕ್ರಿಕೆಟ್ನಲ್ಲಿ ಪ್ರಮುಖ ಬೌಲರ್ ಆಗುವ ಸಾಧ್ಯತೆ ಇದೆ ಎಂದು ಅರುಣ್ ಹೇಳಿದ್ದಾರೆ. ವಿಶೇಷವಾಗಿ ಆಸ್ಟ್ರೇಲಿಯಾದಲ್ಲಿ ಭಾರತಕ್ಕಿಂತ ಮೈದಾನಗಳು ದೊಡ್ಡದಾಗಿದೆ.

ಐಪಿಎಲ್ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ
"ಉಮ್ರಾನ್ ಮಲಿಕ್ ರೋಮಾಂಚನಕಾರಿ, ಅವರು ಉತ್ತಮ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ. ಸರಿಯಾದ ರೀತಿಯ ಅವಕಾಶಗಳನ್ನು ನೀಡಿದರೆ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಐಪಿಎಲ್ನಲ್ಲಿ ಉಮ್ರಾನ್ ಮಲಿಕ್ ಸಾಕಷ್ಟು ಚೆನ್ನಾಗಿ ಮಾಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ವಿಕೆಟ್ಗಳನ್ನು ಪರಿಗಣಿಸಿ ಭಾರತ ತಂಡ ಅಗತ್ಯಕ್ಕಿಂತ ಹೆಚ್ಚಿನ ಸ್ಪಿನ್ನರ್ಗಳನ್ನು ಆಯ್ಕೆ ಮಾಡಿದೆ ಎಂದು ನಾನು ಭಾವಿಸುತ್ತೇನೆ. ಉಮ್ರಾನ್ ಮಲಿಕ್ನಂತಹ ಯಾರಾದರೂ ತಂಡಕ್ಕೆ ಆಯ್ಕೆಯಾಗಿದ್ದರೆ ಉತ್ತಮವಾಗಿರುತ್ತಿತ್ತು" ಎಂದು ಅರುಣ್ ಹೇಳಿದರು.

ಸ್ಪಿನ್ನರ್ ಬದಲಿಗೆ ಉಮ್ರಾನ್ ಮಲಿಕ್ ಆಯ್ಕೆ ಮಾಡಬೇಕಿತ್ತು
ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗಾಗಿ ಭಾರತೀಯ ತಂಡದಲ್ಲಿ ಸ್ಪಿನ್ನರ್ಗಳ ಪ್ರಾಮುಖ್ಯತೆಗೆ ಬಗ್ಗೆ ಮಾತನಾಡಿರು ಅರುಣ್, 15 ಜನರ ಪಟ್ಟಿಯಲ್ಲಿ ಕೇವಲ ಇಬ್ಬರು ಸ್ಪಿನ್ನರ್ಗಳನ್ನು ಮಾತ್ರ ಆಯ್ಕೆ ಮಾಡಬೇಕಿತ್ತು ಮತ್ತು ಮೂರನೇ ಸ್ಪಿನ್ನರ್ ಬದಲಿಗೆ ಉಮ್ರಾನ್ ಅವರನ್ನು ಆಯ್ಕೆ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
"ಆಸ್ಟ್ರೇಲಿಯಾ ಪಿಚ್ನಲ್ಲಿ ಬೌನ್ಸ್ ಇದೆ, ಮೈದಾನಗಳು ಸಾಕಷ್ಟು ದೊಡ್ಡದಾಗಿರುತ್ತವೆ. ಸ್ಪಿನ್ನರ್ ಬಹಳ ಮುಖ್ಯವಾದ ಪಾತ್ರವನ್ನು ಹೊಂದಿದ್ದಾರೆ. ಆದರೆ, ಮೂವರು ಸ್ಪಿನ್ನರ್ಗಳು ತುಂಬಾ ಹೆಚ್ಚು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಯಾವುದೇ ಹಂತದಲ್ಲಿ ನೀವು ತಂಡದಲ್ಲಿ ಕೇವಲ ಒಬ್ಬ ಸ್ಪಿನ್ನರ್ ಅನ್ನು ಆಡುತ್ತೀರಿ ಮತ್ತು ನಿಮಗೆ ಇಬ್ಬರು ಸ್ಪಿನ್ನರ್ಗಳ ಆಯ್ಕೆ ಇರುತ್ತದೆ. ಮೂರು ಸ್ಪಿನ್ನರ್ಗಳ ಅಗತ್ಯ ಇರಲಿಲ್ಲ, ಅದಕ್ಕಾಗಿಯೇ ನಾನು ಒಬ್ಬ ಸ್ಪಿನ್ನರ್ ಬದಲಿಗೆ ಉಮ್ರಾನ್ ಮಲಿಕ್ ಎಂದು ಹೇಳಿದ್ದು" ಎಂದು ಅವರು ಹೇಳಿದರು.
ಗಾಯದ ಸಮಸ್ಯೆಯಿಂದಾಗಿ ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್ನಿಂದ ಹೊರಗುಳಿದಿರುವುದು ತಂಡದ ಬೌಲಿಂಗ್ ವಿಭಾಗದ ಮೇಲೆ ಪರಿಣಾಮ ಬೀರಲಿದೆ. ಬುಮ್ರಾ ಬದಲಿಗೆ ಮೊಹಮ್ಮದ್ ಶಮಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅನುಭವಿ ಶಮಿ, ಬುಮ್ರಾ ಸ್ಥಾನವನ್ನು ಸಮರ್ಥವಾಗಿ ತುಂಬುವ ಬಗ್ಗೆ ಹಲವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.