ನವದೆಹಲಿ, ಸೆಪ್ಟೆಂಬರ್ 20: ಕ್ರೀಡೆಗೂ ಗಾಯಕ್ಕೂ ಅವಿನಾಭಾವ ಸಂಬಂಧವೋ ಏನೋ. ಗಾಯಕ್ಕೀಡಾಗದ ಕ್ರೀಡಾಪಟುವಿಲ್ಲ. ಕ್ರೀಡಾಪಟುಗಳನ್ನು ಕಾಡುವ ಮಹಾಮಾರಿ ಗಾಯ. ಗಾಯಕ್ಕೀಡಾಗಿ ಪಂದ್ಯದಿಂದ ಸಾಲು ಸಾಲಾಗಿ ಹೊರಬೀಳುವ ಸರದಿಯೀಗ ಕ್ರಿಕೆಟ್ ಆಟಗಾರರದ್ದು.
ವಿರಾಟ್ ಕೊಹ್ಲಿ, ವೇಟ್ ಲಿಫ್ಟರ್ ಮೀರಾಬಾಯಿ ಚಾನುಗೆ ಖೇಲ್ ರತ್ನ ಪ್ರಶಸ್ತಿ
ಏಷ್ಯಾ ಕಪ್ ಕ್ರಿಕೆಟ್ ನ ಭಾರತ-ಪಾಕಿಸ್ತಾನದ ಸೆಪ್ಟೆಂಬರ್ 19ರ ಪಂದ್ಯದ ವೇಳೆ ಬೌಲಿಂಗ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯ ಸೊಂಟದ ಸ್ನಾಯು ಸೆಳೆತದಿಂದಾಗಿ ಕುಸಿದರು. ಅನಂತರ ಅವರನ್ನು ಏಷ್ಯಾಕಪ್ ಟೂರ್ನಿಂದಲೇ ಹೊರಗಿಡಲಾಯಿತು.
ಪಾಂಡ್ಯ ಹೊರ ಬಿದ್ದಲ್ಲಿಗೆ ಮುಗಿಯಲಿಲ್ಲ, ಮರುದಿನಕ್ಕೆ ಅಂದರೆ ಸೆಪ್ಟೆಂಬರ್ 20ಕ್ಕೆ ಗಾಯಾಳುಗಳ ಸಂಖ್ಯೆ ಮೂರಕ್ಕೇರಿತು. ಶಾರ್ದೂಲ್ ಠಾಕೂರ್ ಮತ್ತು ಅಕ್ಸರ್ ಪಟೇಲ್ ಕೂಡ ಪಾಂಡ್ಯ ಅವರ ಬೆನ್ನು ಹಿಡಿದಿದ್ದರು. ಹೊರ ಬಿದ್ದ ಈ ಮೂವರ ಜಾಗಕ್ಕೆ ದೀಪಕ್ ಚಾಹರ್, ರವೀಂದ್ರ ಜಡೇಜಾ ಮತ್ತು ಸಿದ್ಧಾರ್ಥ್ ಕೌಲ್ ಅವರನ್ನು ಕರೆತರಲಾಯಿತು.
ಟೀಮ್ ಇಂಡಿಯಾದಲ್ಲಿ ಗಾಯಕ್ಕೀಡಾದವರ ಇತ್ತೀಚಿನ ಪಟ್ಟಿ ತೆಗೆದರೆ ಜೂನ್ ತಿಂಗಳಲ್ಲಿ ಗಾಯಕ್ಕೀಡಾಗಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್-ಭಾರತ ಟೆಸ್ಟ್ ಸರಣಿ ವೇಳೆ ಪಂದ್ಯದಲ್ಲಿ ನೋವನುಭವಿಸಿದ್ದು ಕಂಡುಬಂದಿತ್ತು. ಹೀಗಾಗಿ ಅವರನ್ನು ಈ ಏಷ್ಯಾಕಪ್ ಪಂದ್ಯಾವಳಿಯಿಂದ ಹೊರಗಿಟ್ಟು ವಿಶ್ರಾಂತಿ ನೀಡಲಾಗಿದೆ.
ಜುಲೈ ತಿಂಗಳಲ್ಲಿ ಗಾಯಕ್ಕೆ ತುತ್ತಾದ ಬೌಲರ್ ಭುವನೇಶ್ವರ್ ಕುಮಾರ್ ಅವರು ಇಂಗ್ಲೆಂಡ್-ಭಾರತ ಟೆಸ್ಟ್ ಸರಣಿಯಿಂದ ಹೊರಬೀಳುವಂತಾಯ್ತು. ರವಿಚಂದ್ರನ್ ಅಶ್ವಿನ್ ಅವರನ್ನೂ ಗಾಯ ಬಿಡಲಿಲ್ಲ. ಆಗಸ್ಟ್ ನಲ್ಲಿ ಸೊಂಟ ನೋವಿಗೀಡಾದ ಅಶ್ವಿನ್ ಓವಲ್ ನಲ್ಲಿ ನಡೆದಿದ್ದ ಇಂಗ್ಲೆಂಡ್ ಎದುರಿನ 5ನೇ ಟೆಸ್ಟ್ ನಿಂದ ಹೊರ ನಡೆದಿದ್ದರು.
ಅನಂತರ ಸೆಪ್ಟೆಂಬರ್ ತಿಂಗಳಲ್ಲಿ ಪಾಂಡ್ಯ, ಶಾರ್ದೂಲ್, ಅಕ್ಸರ್ ಹೊರ ಬಿದ್ದಿದ್ದಾರೆ. ಹೆಚ್ಚಿನ ಆಟಗಾರರು ಸೊಂಟದ ಭಾಗದ ಗಾಯಕ್ಕೆ (ಅಂದರೆ ಹಿಪ್, ತೊಡೆ ಸ್ನಾಯು ನೋವು) ತುತ್ತಾದವರೇ ಹೆಚ್ಚು. ಅದು ಬಿಟ್ಟರೆ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದು ಕಂಡುಬಂದಿದೆ.