
ನವದೆಹಲಿ, ಜೂನ್ 12: ಶ್ರೀಲಂಕಾಕ್ಕೆ ಪ್ರವಾಸ ಕೈಗೊಳ್ಳಲಿದ್ದ ವಿರಾಟ್ ಕೊಹ್ಲಿ ಪಡೆ ಅಲ್ಲಿ ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಏಕದಿನ ಮತ್ತು ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20ಯನ್ನಾಡುವುದರಲ್ಲಿತ್ತು. ಆದರೆ ಕೊರೊನಾವೈರಸ್ ಕಾರಣದಿಂದಾಗಿ ಈ ಪ್ರವಾಸ ಸರಣಿ ಮುಂದೂಡಲ್ಪಟ್ಟಿದೆ.
ಜೂನ್ ತಿಂಗಳಾಂತ್ಯಕ್ಕೆ ಏಕದಿನ ಪಂದ್ಯಗಳ ಸರಣಿ ಮತ್ತು ಜುಲೈ ಆರಂಭಕ್ಕೆ ಟಿ20 ಪಂದ್ಯಗಳ ಸರಣಿ ಆರಂಭವಾಗಬೇಕಿತ್ತು. ಪಂದ್ಯಗಳಿಗೆ ದಿನಾಂಕ ಇನ್ನೂ ಅಂತಿಮಗೊಂಡಿರಲಿಲ್ಲ. ಆದರೆ ಆಟದತ್ತ ಮುಂದುವರಿಯಲು ಇದು ಸರಿಯಾದ ಸಂದರ್ಭವಲ್ಲ ಎಂದು ಹೇಳಿರುವ ಬೋರ್ಡ್ ಪ್ರವಾಸ ರದ್ದುಗೊಳಿಸಿದ.
'ಜೂನ್-ಜುಲೈನಲ್ಲಿ ಶ್ರೀಲಂಕಾಕ್ಕೆ ಪ್ರವಾಸ ಕೈಗೊಳ್ಳಲಾಗುತ್ತಿಲ್ಲ. ನಾವಿದನ್ನು ಶ್ರೀಲಂಕಾ ಕ್ರಿಕೆಟ್ ಬೋರ್ಡ್ಗೂ (ಎಸ್ಸಿಎಲ್) ಅರ್ಥ ಮಾಡಿಸಿದ್ದೇವೆ. ಏನೇ ಇರಲಿ, ಮುಂದಿನ ದಿನಗಳಲ್ಲಿ ಈ ಸರಣಿ ನಡೆಸಲು ಬದ್ಧರಾಗಿದ್ದೇವೆ,' ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾದ (ಬಿಸಿಸಿಐ) ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.
ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಆತಂಕಕಾರಿಯಾಗಿ ಏರುತ್ತಲೇ ಇದೆ. ಇತ್ತ ಭಾರತೀಯ ಆಟಗಾರರು ಇನ್ನೂ ಅಭ್ಯಾಸ ಆರಂಭಿಸಲ್ಲ. ಇದೇ ಕಾರಣದಿಂದ ಶ್ರೀಲಂಕಾ ಸರಣಿಯಿಂದ ಭಾರತ ಹಿಂದೆ ಸರಿದಿದೆ ಎನ್ನಲಾಗಿದೆ. ಅಂದ್ಹಾಗೆ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದ್ದು, ಮೃತರ ಸಂಖ್ಯೆ 8 ಸಾವಿರ ದಾಟಿದೆ.