
ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್ ಟೀಮ್ ಇಂಡಿಯಾ ಆಡುವ ಬಳಗದ ಆಯ್ಕೆಯ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಬದಲಿಗೆ ವೃದ್ಧಿಮಾನ್ ಸಾಹಾ ಅವರನ್ನು ಆಯ್ಕೆಮಾಡಿದ್ದು ತಪ್ಪು ನಿರ್ಧಾರ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಎಂಎಸ್ಕೆ ಪ್ರಸಾದ್ ಈ ಹಿಂದಿನ ಆಯ್ಕೆ ಸಮಿತಿ ರಿಷಭ್ ಪಂತ್ ಹಾಗೂ ವೃದ್ಧಿನಾನ್ ಸಾಹಾ ಅವರ ನಡುವಿನ ಆಯ್ಕೆಯಲ್ಲಿ ಸಾಕಷ್ಟು ಸ್ಪಷ್ಟವಾಗಿತ್ತು. ಭಾರತೀಯ ಉಪಖಂಡದಲ್ಲಿ ವೃದ್ಧಿಮಾನ್ ಸಾಹಾ ಅವರು ಈ ಹಿಂದಿನ ಆಯ್ಕೆ ಸಮಿತಿಯ ಮೊದಲ ಆಯ್ಕೆಯಾಗಿದ್ದರು. ಆದರೆ ವಿದೇಶಿ ಅಂಗಳದ ವಿಚಾರದಲ್ಲಿ ಪಂತ್ಗೆ ಆದ್ಯತೆ ನೀಡುತ್ತಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಸ್ಪೋರ್ಟ್ಸ್ಟುಡೇ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಎಂಎಸ್ಕೆ ಪ್ರಸಾದ್ ಉಪಖಂಡದ ಹೊರಗಡೆ ರಿಷಭ್ ಪಂತ್ ಅವರ ಸೇವೆಯನ್ನು ಬಳಸಿಕೊಳ್ಳಲು ಉತ್ಸುಕವಾಗಿತ್ತು. ಯಾಕೆಂದರೆ ಯುವ ಆಟಗಾರ ಭಾರತೀಯ ಬ್ಯಾಟಿಂಗ್ ಲೈನ್ಅಪ್ಗೆ ಹೆಚ್ಚಿನ ಬಲವನ್ನು ತುಂಬಬಲ್ಲವರಾಗಿದ್ದಾರೆ ಎಂದು ಎಂಎಸ್ಕೆ ಪ್ರಸಾದ್ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಎಂಎಸ್ಕೆ ಪ್ರಸಾದ್ ರಿಷಭ್ ಪಂತ್ ಇನ್ನು ಕೂಡ ಭಾರತೀಯ ತಂಡದಲ್ಲಿ ಆಡಲು ಸಮರ್ಥರಾಗಿಲ್ಲ ಎಂದು ಭಾವಿಸಿದ್ದೆ, ಆದರೆ ಅವರು ಆಸ್ಟ್ರೇಲಿಯಾ ಎ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶತಕವನ್ನು ಬಾರಿಸಿ ಮಿಂಚಿದ್ದರು. ಇದು ರಿಷಭ್ ಪಂತ್ ಆಡುವ ಬಳಗದಲ್ಲಿ ಸ್ಥಾನವನ್ನು ಸಂಪಾದಿಸಲು ಕಾರಣವಾಗಬಹುದಾಗಿತ್ತು ಎಂದಿದ್ದಾರೆ.
ರಿಷಭ್ ಪಂತ್ಗೆ ಈ ಹಿಂದೆಯೂ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯಲ್ಲಿ ಪಾಲ್ಗೊಂಡ ಅನುಭವವಿದ್ದು ಸರಣಿಯಲ್ಲಿ ಪಂತ್ ಶ್ರೇಷ್ಠ ಪ್ರದರ್ಶನವನ್ನು ನೀಡಿದ್ದರು. 2018-19ರ ಚೊಚ್ಚಲ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪಂತ್ ಭಾರತೀಯ ಬ್ಯಾಟ್ಸ್ಮನ್ಗಳ ಪೈಕಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗುದ್ದರು. ಅಂದು ನಾಲ್ಕು ಪಂದ್ಯಗಳಲ್ಲಿ ಪಂತ್ ಒಂದು ಶತಕ ಸೇರಿದಂತೆ 350 ರನ್ಗಳ ಕೊಡುಗೆಯನ್ನು ನೀಡಿದ್ದರು. ಎರಡನೇ ಟೆಸ್ಟ್ಗೆ ಪಂತ್ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆಯುವ ಸಾಧ್ಯತೆ ದಟ್ಟವಾಗಿದೆ.