
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾರನ್ನು ಹೊರಗಿಡಲಾಯಿತು. ಕಳೆದ 6 ತಿಂಗಳಿನಿಂದ ಕ್ರಿಕೆಟ್ನಿಂದ ದೂರವೇ ಉಳಿದಿದ್ದ ಬುಮ್ರಾ ಶ್ರೀಲಂಕಾ ವಿರುದ್ಧದ ಸರಣಿಗೆ ಫಿಟ್ ಆಗಿದ್ದಾರೆ ಎಂದು ತಂಡಕ್ಕೆ ಸೇರ್ಪಡೆ ಮಾಡಲಾಗಿತ್ತು. ಅಭ್ಯಾಸದ ವೇಳೆ ಅವರು ನೋವಿಗೆ ತುತ್ತಾದ ಕಾರಣ ಅವರನ್ನು ಸರಣಿಯಿಂದ ಹೊರಗಿಡಲು ನಿರ್ಧಾರ ಮಾಡಲಾಯಿತು.
ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಇನ್ನು ಟೀಂ ಇಂಡಿಯಾ ಬುಮ್ರಾ ಮೇಲೆ ಅವಲಂಬನೆಯಾಗದೆ, ತಂಡವನ್ನು ನಿರ್ಮಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
"2022ರ ಸೆಪ್ಟೆಂಬರ್ನಿಂದ ಅವರು ಕ್ರಿಕೆಟ್ ಆಡದೇ ಇರುವುದು ಚಿಂತೆಗೀಡು ಮಾಡಿದೆ. ಬುಮ್ರಾ ಇಲ್ಲದೆ ಆಡಲು ತಯಾರಾಗುವ ಸಮಯ ಬಂದಿದೆ. ಅವರು ಸೆಪ್ಟೆಂಬರ್ ನಲ್ಲಿ ಒಂದು ಪಂದ್ಯ ಆಡಿದ ನಂತರ ಮತ್ತೆ ಗಾಯಕ್ಕೆ ತುತ್ತಾದರು" ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
"ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಘಷಿಸಿದ ಕೆಲವು ದಿನಗಳ ನಂತರ ಬುಮ್ರಾ ಅವರ ಹೆಸರನ್ನು ಸೇರಿಸಲಾಯಿತು. ಆದರೆ, ಪಂದ್ಯದ ಆರಂಭಕ್ಕೆ ಹಿಂದಿನ ದಿನ ಅವರನ್ನು ಸರಣಿಯಿಂದ ಹೊರಗಿಡಲಾಯಿತು. ಇದು ಉತ್ತಮ ಬೆಳವಣಿಗೆಯಲ್ಲ, ಇದು ಏಕದಿನ ವಿಶ್ವಕಪ್ ನಡೆಯುವ ವರ್ಷವಾಗಿದೆ. 2022ರ ಟಿ20 ವಿಶ್ವಕಪ್ ಅನ್ನು ನಾವು ಕಳೆದುಕೊಂಡಿದ್ದೇವೆ" ಎಂದು ಆಕಾಶ್ ಚೋಪ್ರಾ ಹೇಳಿದರು.

ಬುಮ್ರಾ ಅತ್ಯುತ್ತಮ ಬೌಲರ್
ಸದ್ಯ ಇರುವ ಭಾರತ ತಂಡದಲ್ಲಿ ಬುಮ್ರಾ ಅವರಂತಹ ಬೌಲರ್ ಯಾರೂ ಇಲ್ಲ ಎನ್ನುವುದನ್ನು ಆಕಾಶ್ ಚೋಪ್ರಾ ಒಪ್ಪಿಕೊಂಡರು. ಆದರೂ, ಭಾರತ ತಂಡದಲ್ಲಿ ಇರುವ ವೇಗಿಗಳು ಈ ಕೊರತೆಯನ್ನು ನೀಗಿಸಲಿದ್ದಾರೆ ಎಂದು ಆಕಾಶ್ ಚೋಪ್ರಾ ಭರವಸೆ ವ್ಯಕ್ತಪಡಿಸಿದ್ದಾರೆ.
"ಬುಮ್ರಾ ಅವರಂತ ಬೌಲರ್ ಯಾರೂ ಇಲ್ಲದಿದ್ದರೂ, ತಂಡದಲ್ಲಿ ಉತ್ತಮ ವೇಗದ ಬೌಲರ್ ಗಳು ಇದ್ದಾರೆ. ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ಅದ್ಭುತವಾಗಿದೆ. ಉಮ್ರಾನ್ ಮಲಿಕ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮೊಹಮ್ಮದ್ ಶಮಿ ಉತ್ತಮ ಬೌಲರ್, ಅರ್ಶದೀಪ್ ಸಿಂಗ್ ಸಿದ್ಧವಾಗಿದ್ದಾರೆ, ಪ್ರಸಿದ್ಧ ಕೃಷ್ಣ ಗಾಯದ ಬಗ್ಗೆ ಮಾಹಿತಿ ಇಲ್ಲವಾದರೂ ಅವರೂ ಕೂಡ ಉತ್ತಮ ಬೌಲರ್" ಎಂದು ಆಕಾಶ್ ಚೋಪ್ರಾ ಹೇಳಿದರು.

ಬುಮ್ರಾ ಮೇಲಿನ ಅವಲಂಬನೆ ಕಡಿಮೆಯಾಗಬೇಕು
"ಬುಮ್ರಾ ಇದ್ದರೆ ಮಾತ್ರ ಭಾರತ ವಿಶ್ವಕಪ್ ಗೆಲ್ಲುತ್ತದೆ ಎನ್ನುವ ಭರವಸೆ ನಾನು ಇಟ್ಟುಕೊಂಡಿಲ್ಲ. ಅವರು ಇದ್ದರೆ ತಂಡಕ್ಕೆ ಅನುಕೂಲ, ವೇಗದ ಬೌಲಿಂಗ್ ಉತ್ತಮವಾಗಿರುತ್ತದೆ. ಆದರೆ, ಅವರು ಇಲ್ಲದಿದ್ದಾಗ ಏನು ಮಾಡಬೇಕು ಎನ್ನುವ ಬಗ್ಗೆ ಚಿಂತಿಸಬೇಕಾಗುತ್ತದೆ. ಬುಮ್ರಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು" ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿರುವ ಬುಮ್ರಾ, ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಅಲಭ್ಯರಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲೂ ಅವರು ಆಡುವುದು ಅನುಮಾನ ಎನ್ನಲಾಗಿದೆ.