ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಖಾತೆ ತೆರೆಯುವ ಮುನ್ನವೇ ಎರಡೂ ಪಂದ್ಯಗಳಲ್ಲಿ ಪೆವಿಲಿಯನ್ಗೆ ಮರಳಿದ್ಧಾರೆ. ಇವರ ಆಟದ ಧಾಟಿಗೆ ಟೀಕೆಗಳು ಕೇಳಿ ಬಂದಿವೆ. ಮಾಜಿ ಕ್ರಿಕೆಟಿಗ ಹಾಗೂ ತಜ್ಞ ಆಕಾಶ್ ಚೋಪ್ರಾ ರೋಹಿತ್ ಶರ್ಮಾ ಮೇಲೆ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ ಆಕ್ರಮಣಕಾರಿ ಕ್ರಿಕೆಟ್ ಆಡಿದಾಗಲೆಲ್ಲಾ ಆತ್ಮವಿಶ್ವಾಸದಿಂದಲೇ ಕಂಡು ಬಂದಿದ್ದಾರೆ. ಇದರಿಂದ ಅವರಿಗೂ ಹಾಗೂ ತಂಡಕ್ಕೂ ಅನುಕೂಲವಾಗಿದೆ. ರೋಹಿತ್ ಶರ್ಮಾ 14 ತಿಂಗಳ ಸುದೀರ್ಘ ಅಂತರದ ನಂತರ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ಮರಳಿದ್ದಾರೆ. ಬಹು ತಿಂಗಳ ಬಳಿಕ ಮೈದಾನಕ್ಕೆ ಮರಳಿರುವ ರೋಹಿತ್ ಸ್ಮರಣೀಯ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದಾರೆ.

ಹಿಟ್ ಮ್ಯಾನ್ಗೆ ತನ್ನನ್ನು ತಾನು ಸಾಬೀತುಪಡಿಸಲು ಮತ್ತೊಂದು ಅವಕಾಶವಿದೆ. ಜನವರಿ 17 ರಂದು ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಸರಣಿಯ ಕೊನೆಯ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾದರೆ ಟಿ20 ವಿಶ್ವಕಪ್ ನಲ್ಲಿ ಆಡುವ ಸಾಧ್ಯತೆ ಗಣನೀಯವಾಗಿ ಹೆಚ್ಚಲಿದೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅತಿಯಾದ ಆಕ್ರಮಣಕಾರಿ ಪ್ರವೃತ್ತಿ ತೋರಿಸಿದರು. ಅದು ಅವರಿಗೆ ದುಬಾರಿಯಾಗಿದೆ ಎಂದು ಆಕಾಶ್ ಚೋಪ್ರಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೊದಲೆರಡು ಪಂದ್ಯಗಳಲ್ಲಿ ರೋಹಿತ್ ಶರ್ಮಾ ಆಡಿದ ರೀತಿ ನೋಡಿದರೆ ರೋಹಿತ್ ಶರ್ಮಾ ಅತಿ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿದರು ಎಂದು ಹೇಳಬಹುದು ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ. ರೋಹಿತ್ ಶರ್ಮಾ ಚೆಂಡನ್ನು ಸೆಟ್ ಆಗದೆ ಹೊಡೆಯಲು ಯತ್ನಿಸುತ್ತಿದ್ದಾರೆ. ಈ ಕಾರಣಕ್ಕೆ ಮೊದಲ ಪಂದ್ಯದಲ್ಲಿ ರನೌಟ್ ಆಗಿದ್ದ ಅವರು ಎರಡನೇ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ಬೌಲ್ಡ್ ಆದರು.
ರೋಹಿತ್ ಶರ್ಮಾ ಬೆಂಗಳೂರಿನಲ್ಲಿ ತಮ್ಮ ನೈಜ ಆಟವನ್ನು ಆಡಬೇಕು. ರೋಹಿತ್ ಶರ್ಮಾ ಸೆಟ್ ಆಗಿ ಆಡಲು ಪ್ರಯತ್ನಿಸಬೇಕು. ಆಕ್ರಮಣಕಾರಿ ಆಟವಾಡುವಾಗ ರೋಹಿತ್ ಶರ್ಮಾ ಅವರ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಈ ಕಾರಣಕ್ಕಾಗಿಯೇ ರೋಹಿತ್ ಶರ್ಮಾ ವಿಶ್ವಕಪ್ನಲ್ಲಿ ಯಶಸ್ವಿಯಾಗಿದ್ದರು ಎಂದು ಚೋಪ್ರಾ ತಿಳಿಸಿದ್ದಾರೆ.
ರೋಹಿತ್ ಶರ್ಮಾ ವಿಶ್ವಕಪ್ನಲ್ಲಿ ಆಡಲು ಬಯಸಿದರೆ, ಅವರು ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು. ಐಪಿಎಲ್ ಸೀಸನ್ನಲ್ಲಿ ರೋಹಿತ್ ಶರ್ಮಾ ಉತ್ತಮವಾಗಿ ಆಡಿದರೆ ವಿಶ್ವಕಪ್ ನಲ್ಲಿ ತಂಡವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ.