
ಏಷ್ಯಾಕಪ್ ಟೂರ್ನಿಯ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿಯಿದೆ. ಇದೀಗ ಬಿಸಿಸಿಐ ಆಯ್ಕೆ ಸಮಿತಿ ಟೀಮ್ ಇಂಡಿಯಾದ ಸ್ಕ್ವಾಡ್ ಪ್ರಕಟಿಸಿದೆ. ರೋಹಿತ್ ಶರ್ಮಾ ನೇತೃತ್ವದಲ್ಲಿ 17 ಆಟಗಾರರ ಬಳಗವನ್ನು ಅಂತಿಮಗೊಳಿಸಲಾಗಿದ್ದು ನಂತರ ತಂಡವನ್ನು ಪ್ರಕಟಿಸಲಾಗಿದೆ. ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್, ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ಜೊತೆಗೆ ಬಿಸಿಸಿಐ ಕಾರ್ಯದರ್ಶಿ ಕೂಡ ಆಯ್ಕೆ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಮಾಹಿತಿ ಲಭ್ಯವಾಗಿದೆ.
ಇನ್ನು ಏಷ್ಯಾಕಪ್ಗೆ ಆಯ್ಕೆ ಮಾಡಿರುವ ತಂಡದಲ್ಲಿ ಸಂಜು ಸ್ಯಾಮ್ಸನ್ಗೆ ಅವಕಾಶ ದೊರೆತಿಲ್ಲ. ಯುವ ಆಟಗಾರ ತಿಲಕ್ ವರ್ಮಾಗೆ ಈ ತಂಡದಲ್ಲಿ ಸ್ಥಾನ ದೊರೆತಿದೆ. ಇನ್ನು ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಐಯ್ಯರ್ ಇಬ್ಬರು ಕೂಡ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಐಯ್ಯರ್ ರಾಹುಲ್ ಕಮ್ಬ್ಯಾಕ್
ಇನ್ನು ಟೀಮ್ ಇಂಡಿಯಾ ಆಯ್ಕೆಯಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಪ್ರಶ್ನೆಯೆಂದರೆ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಐಯ್ಯರ್ ಕಮ್ಬ್ಯಾಕ್. ಇಬ್ಬರು ಆಟಗಾರರು ಗಾಯಗೊಂಡು ಚೇತರಿಸಿಕೊಂಡಿದ್ದರೂ ಮ್ಯಾಚ್ ಫಿಟ್ನೆಸ್ ಬಗ್ಗೆ ಅನುಮಾನಗಳು ಮೂಡಿದ್ದವು. ಇದೀಗ ಎಲ್ಲಾ ಈ ಇಬ್ಬರು ಆಟಗಾರರು ಆಯ್ಕೆಯಾಗುವ ಮೂಲಕ ತಂಡಕ್ಕೆ ಬಲಬಂದಂತಾಗಿದೆ. ಈ ಮೂಲಕ ನಾಲ್ಕನೇ ಕ್ರಮಾಂಕದ ಪ್ರಶ್ನೆಗೂ ಉತ್ತರ ದೊರೆತಿದೆ
ತಿಲಕ್ ವರ್ಮಾಗೆ ಕುಲಾಯಿಸಿದ ಅದೃಷ್ಟ
ಇನ್ನು ಈ ತಂಡದಲ್ಲಿ ತಿಲಕ್ ವರ್ಮಾ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಟಿ20 ತಂಡಕ್ಕೆ ಆಯ್ಕೆಯಾಗಿ ಗಮನಸೆಳೆಯುವ ಪ್ರದರ್ಶನ ನೀಡಿದ್ದ ತಿಲಕ್ ವರ್ಮಾ ಏಕದಿನ ಮಾದರಿಗೆ ಇನ್ನು ಕೂಡ ಪದಾರ್ಪಣೆ ಮಾಡಿಲ್ಲ. ಇದೀಗ ಏಷ್ಯಾಕಪ್ನಂಥಾ ಮಹತ್ವದ ವೇದಿಕೆಯಲ್ಲಿ ಭಾರತ ತಂಡದಲ್ಲಿ ಅವರಿಗೆ ಅವಕಾಶ ದೊರೆತಿರುವುದು ಭಾರತೀಯ ಅಭಿಮಾನಿಗಳಿಗೆ ಅಚ್ಚರಿಯುಂಟು ಮಾಡಿದೆ.
ಪ್ರಾಥಮಿಕ ತಂಡದಲ್ಲಿ ಸಂಜುಗಿಲ್ಲ ಸ್ಥಾನ
ಇನ್ನು ಏಷ್ಯಾಕಪ್ಗೆ ಹೆಸರಿಸಿರುವ ಪ್ರಾಥಮಿಕ 17 ಆಟಗಾರರ ಬಳಗದಲ್ಲಿ ಸಂಜು ಸ್ಯಾಮ್ಸನ್ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ವಿಫಲವಾಗಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ಗೆ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಇದರಲ್ಲಿ ಸಂಜುಗೆ ಹಿನ್ನಡೆಯಾಗಿದೆ. ಆದರೆ ಮೀಸಲು ಆಟಗಾರನಾಗಿ ಸಂಜು ಸ್ಯಾಮ್ಸನ್ ಭಾರತ ತಂಡದೊಂದಿಗೆ ಪ್ರಯಾಣಿಸಲಿದ್ದಾರೆ.
ಟೀಮ್ ಇಂಡಿಯಾ ಸ್ಕ್ವಾಡ್
ರೋಹಿತ್ ಶರ್ಮಾ, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.
(ಮಾಹಿತಿ ಅಪ್ಡೇಟ್ ಆಗುತ್ತಿದೆ)