ಪಾಕಿಸ್ತಾನದ ಆಶ್ರಯದಲ್ಲಿ ಮುಂದಿನ ತಿಂಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಅಯೋಜನೆ ಆಗಲಿದೆ. ಈ ಟೂರ್ನಿಗೆ ಆಯ್ಕೆಯಾದ ತಂಡಗಳು ತಮ್ಮ ತಮ್ಮ ತಂಡವನ್ನು ಪ್ರಕಟಿಸಿವೆ. ಆದರೆ ಭಾರತ ಮಾತ್ರ ಇನ್ನು ಈ ಟೂರ್ನಿಗೆ ತನ್ನ ತಂಡವನ್ನು ಪ್ರಕಟಿಸಿಲ್ಲ. ಜನವರಿ 12 ರಂದು ಭಾರತ ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಪ್ರಕಟಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಭಾರತ ಜನವರಿ 11 ರಂದು ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿ ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗುತ್ತದೆ ಎಂಬುದೇ ಕುತೂಹಲ ಮೂಡಿಸಿದೆ.
ಟೀಮ್ ಇಂಡಿಯಾ ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಪ್ರಕಟಿಸಲಿದೆ. ಈ ವೇಳೆ ಯುವ ಹಾಗೂ ಕೆಲವು ದಿನಗಳಿಂದ ತಂಡದಿಂದ ಹೊರಗುಳಿದ ಆಟಗಾರರಿಗೆ ಚಾನ್ಸ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೀಮ್ ಇಂಡಿಯಾದ ಪಾಲಿಗೆ ಭಾರೀ ಮಹತ್ವವವನ್ನು ಪಡೆದಿದೆ. ಈ ಬಾರಿ ಚಾಂಪಿಯನ್ಸ್ ಟ್ರೋಫಿಯ ತಂಡದಲ್ಲಿ ತಮ್ಮನ್ನು ಪರಿಗಣಿಸಿ ಎಂದು ಬಿಸಿಸಿಐ ಆಯ್ಕೆ ಸಮಿತಿಗೆ ಇಬ್ಬರು ಆಟಗಾರರು ಪದೇ ಪದೇ ತಿಳಿಸುತ್ತಿದ್ದಾರೆ.

ದೇಶೀಯ ಟೂರ್ನಿ ವಿಜಯ್ ಹಜಾರೆಯಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡದ ಜಯದಲ್ಲಿ ಮಿಂಚಿರುವ ಇಬ್ಬರೂ ಆಟಗಾರರು ಭರ್ಜರಿ ಪ್ರದರ್ಶನ ಬಿಸಿಸಿಐ ಆಯ್ಕೆ ಸಮಿತಿಯ ಮನವೊಲಿಸುತ್ತದಾ ಎಂಬುದನ್ನು ಕಾದು ನೋಡಬೇಕಿದೆ. ವಡೋಧರಾದಲ್ಲಿ ಇಂದು ರಾಜಸ್ಥಾನ ಹಾಗೂ ತಮಿಳುನಾಡು ತಂಡಗಳ ನಡುವೆ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 47.3 ಓವರ್ಗಳಲ್ಲಿ 267 ರನ್ಗಳಿಗೆ ಆಲೌಟ್ ಆಯಿತು. ರಾಜಸ್ಥಾನ ತಂಡಕ್ಕೆ ಕಾಟ ನೀಡಿದ್ದು, ತಮಿಳು ನಾಡು ಬೌಲರ್ ವರುಣ್ ಚಕ್ರವರ್ತಿ.
ವರುಣ್ ಚಕ್ರವರ್ತಿ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದರು. ಇವರು 9 ಓವರ್ ಬೌಲಿಂಗ್ ನಡೆಸಿ 52 ರನ್ ನೀಡಿ 5 ವಿಕೆಟ್ ಕಬಳಿಸಿದರು. ಈ ಮೂಲಕ ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಕಟ್ಟುವಾಗಿ ತಮ್ಮನ್ನು ಸಹ ಪರಿಗಣಿಸಿ ಎಂದು ಆಯ್ಕೆದಾರರಿಗೆ ಸಂದೇಶ ರವಾನಿಸಿದರು. ಈಗಾಗಲೇ ಟೀಮ್ ಇಂಡಿಯಾದ ಪರ ಟಿ20 ಕ್ರಿಕೆಟ್ನಲ್ಲಿ ಆಡಿ ಸೈ ಎನಿಸಿಕೊಂಡಿರುಬ ವರುಣ್ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಕನಸು ಕಾಣುತ್ತಿದ್ದಾರೆ.

ಟೀಮ್ ಇಂಡಿಯಾದ ಸ್ವಿಂಗ್ ಬೌಲರ್ ಮೊಹಮ್ಮದ್ ಶಮಿ ಟೀಮ್ ಇಂಡಿಯಾಕ್ಕೆ ಮತ್ತೆ ಕಂ ಬ್ಯಾಕ್ ಮಾಡುತ್ತಾರಾ ಎಂಬ ಪ್ರಶ್ನೆ ಎಲ್ಲರಲೂ ಮೂಡಿದೆ. ವಿಜಯ್ ಹಜಾರೆ ಕ್ರಿಕೆಟ್ನಲ್ಲಿ ಇವರು ನೀಡಿರುವ ಪ್ರದರ್ಶನ ಇವರು ತಂಡಕ್ಕೆ ಮರಳುವುದು ಫಿಕ್ಸ್ ಎಂಬಂತೆ ಕಾಣುತ್ತಿದೆ. ವಡೋಧರಾದಲ್ಲಿ ನಡೆದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹರಿಯಾಣ ಹಾಗೂ ಬಂಗಾಳ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹರಿಯಾಣ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 298 ರನ್ ಕಲೆ ಹಾಕಿತು. ಈ ವೇಳೆ ಮೊಹಮ್ಮದ್ ಶಮಿ ಮನಮೋಹಕ ದಾಳಿ ಸಂಘಟಿಸಿ ಮೂರು ವಿಕೆಟ್ ಕಬಳಿಸಿದರು. ಈ ಮೂಲಕ ತಾವು ಫಿಟ್ ಆಗಿರುವುದಾಗಿ ಸಾಬೀತು ಪಡಿಸಿದರು.