ಟೀಮ್ ಇಂಡಿಯಾ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಆಸ್ಟ್ರೇಲಿಯಾ ತಂಡದ ವಿರುದ್ಧ ರೋಮಾಂಚನಕಾರಿ ಗೆಲುವನ್ನು ಸಾಧಿಸಿರುವ ಟೀಮ್ ಇಂಡಿಯಾ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಸಂಕಷ್ಟದ ಸ್ಥಿತಿಯಿಂದ ಅದ್ಭುತವಾಗಿ ಕಮ್ಬ್ಯಾಕ್ ಮಾಡಿದ ಟೀಮ್ ಇಂಡಿಯಾದ ಸಾಹಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಈ ಪ್ರದರ್ಶನ ನಾಯಕ ರೋಹಿತ್ ಶರ್ಮಾಗೂ ಸಹಜವಾಗಿಯೇ ದೊಡ್ಡ ನಿರಾಳತೆಯನ್ನುಂಟು ಮಾಡಿದೆ.
ಈ ಗೆಲುವಿನ ಬಳಿಕ ತಂಡದ ಪ್ರದರ್ಶನದ ಬಗ್ಗೆ ನಾಯಕ ರೋಹಿತ್ ಶರ್ಮಾ ಸಂತಸವನ್ನು ವ್ಯಕ್ತಪಡಿಸಿದ್ದು ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಈ ವಿಶ್ವಕಪ್ ಟೂರ್ನಿಯಲ್ಲಿ ತಂಡದ ಮುಂದಿರುವ ಸವಾಲುಗಳ ಬಗ್ಗೆಯೂ ಹಂಚಿಕೊಂಡಿದ್ದಾರೆ.

ಈ ಬಾರಿಯ ವಿಶ್ವಕಪ್ ಹತ್ತು ತಾಣಗಳಲ್ಲಿ ಆಯೋಜನಜೆಯಾಗಲಿದ್ದು ಎಲ್ಲಾ ಹತ್ತು ತಾಣಗಳಲ್ಲಿಯೂ ಭಾರತ ಆಡಲಿದೆ. ಹೀಗಾಗಿ ವಿಭಿನ್ನ ವಾತಾವರಣ, ಪರಿಸ್ಥಿತಿಗಳನ್ನು ಭಾರತ ಎದುರಿಸಬೇಕಿದ್ದು ಇದು ತಂಡಕ್ಕೆ ಸವಾಲಾಗಿರಲಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ನಾಯಕ ರೋಹಿತ್ ಶರ್ಮಾ ತಮ್ಮ ಚಿಂತನೆಯನ್ನು ಹಂಚಿಕೊಂಡಿದ್ದಾರೆ. ವಿಭಿನ್ನ ತಾಣಗಳಲ್ಲಿ ಪಂದ್ಯಗಳು ಆಯೋಜನೆಯಾಗುತ್ತಿರುವ ಕಾರಣ ತಂಡದ ಸಂಯೋಜನೆಯಲ್ಲಿ ಹಾಗೂ ಕ್ರಮಾಂಕದಲ್ಲಿ ಬದದಲಾವಣೆ ಮಾಡಿಕೊಳ್ಳುವ ಬಗ್ಗೆ ಸುಳಿವು ನೀಡಿದ್ದಾರೆ.
"ಬೇರೆ ಬೇರೆ ತಾಣಗಳಲ್ಲಿ ಆಡುತ್ತಿರುವುದು ನಮಗೆ ಟೂರ್ನಿ ಮುಂದುವರಿಯುತ್ತಿದ್ದಂತೆಯೇ ದೊಡ್ಡ ಸವಾಲಾಗಲಿದೆ. ನಾವು ಅದಕ್ಕೆ ಸೂಕ್ತ ರೀತಿಯಲ್ಲಿ ಸಿದ್ಧವಾಗಬೇಕಿದ್ದರೆ ನಮ್ಮ ಸಂಯೋಜನೆಯಲ್ಲಿಯೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ" ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ.
ಇನ್ನು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 200 ರನ್ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ ತಂಡ 5 ರನ್ಗಳನ್ನು ಗಳಿಸುವಷ್ಟರಲ್ಲಿ 3 ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ತಾನು ಆತಂಕಗೊಂಡಿದ್ದೆ ಎಂದು ಸ್ವತಃ ನಾಯಕ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ. "ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ನರ್ವಸ್ ಆಗಿದ್ದೆ. ಗುರಿಯನ್ನು ಬೆನ್ನಟ್ಟುವಾದ ಅಂಥಾ ಸ್ಥಿತಿಯಲ್ಲಿರಲು ಯಾರೂ ಬಯಸುವುದಿಲ್ಲ. ಅದಕ್ಕಾಗಿ ಆಸ್ಟ್ರೇಲಿಯಾಗೆ ಶ್ಲಾಘಿಸಬೇಕು ಆದರೆ ಕೆಲ ಕೆಟ್ಟ ಹೊಡೆತಗಳು ಕೂಡ ಇದ್ದವು. ಪವರ್ಪ್ಲೇನಲ್ಲಿ ಹೆಚ್ಚಿನ ರನ್ಗಳಿಸಬೇಕು ಎನ್ನುವ ಧಾವಂತದಲ್ಲಿ ಅದು ಆಗುತ್ತದೆ" ಎಂದಿದ್ದಾರೆ ರೋಹಿತ್ ಶರ್ಮಾ.