
ಸಿಡ್ನಿ: ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿರುವ ಟೀಮ್ ಇಂಡಿಯಾ ಅಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಸುದೀರ್ಘ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಸುಮಾರು 2 ತಿಂಗಳ ಕಾಲ ಇತ್ತಂಡಗಳ ಕದನ ನಡೆಯಲಿದೆ. ಸರಣಿಯು 3 ಏಕದಿನ, 3 ಟಿ20ಐ ಮತ್ತು 4 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ.
ಕಳೆದ ವರ್ಷ ಆಸ್ಟ್ರೇಲಿಯಾಕ್ಕೆ ಪ್ರವಾಸ ಹೋಗಿದ್ದ ವಿರಾಟ್ ಕೊಹ್ಲಿ ಪಡೆ ಟೆಸ್ಟ್ ಸರಣಿ ಗೆಲ್ಲುವಲ್ಲಿ ಸಫಲವಾಗಿತ್ತು. ಆದರೆ ಆಗ ಆಸ್ಟ್ರೇಲಿಯಾ ತಂಡದಲ್ಲಿ ಆಸೀಸ್ ಪ್ರಮುಖ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಇರಲಿಲ್ಲ. ಇಬ್ಬರೂ ನಿಷೇಧಕ್ಕೀಡಾಗಿದ್ದರಿಂದ ಭಾರತ ಗೆಲ್ಲಲು ಅನುಕೂಲವಾಗಿತ್ತು.
ನಿಷೇಧ ಮುಗಿಸಿರುವ ಸ್ಮಿತ್-ವಾರ್ನರ್ ಮತ್ತೀಗ ಆಸ್ಟ್ರೇಲಿಯಾ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಸದ್ಯದ ಬದ್ಧ ಎದುರಾಳಿಗಳೆನಿಸಿರುವ ಭಾರತ-ಆಸ್ಟ್ರೇಲಿಯಾ ಕದನ ಕುತೂಹಲ ಮೂಡಿಸಿದೆ. ಭಾರತದಲ್ಲಿ ಅಪಾಯಕಾರಿ ವೇಗಿಗಳಿದ್ದಾರೆ. ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ ಇಂಥ ಬೌಲರ್ಗಳಿದ್ದಾರೆ. ಆದರೆ ಭಾರತೀಯ ವೇಗಿಗಳಿಗೆ ತಾನು ಹೆದರಲಾರೆ ಎಂದು ಸ್ಮಿತ್ ಹೇಳಿದ್ದಾರೆ.
'ಇದು ನನ್ನ ಪಾಲಿಗೆ ನಾಟಕವಲ್ಲ. ನಾನು ಒಂದಿಷ್ಟು ಪಂದ್ಯಗಳನ್ನು ಆಡಿದ್ದೇನೆ. ಪರಿಸ್ಥಿತಿಗಳಿಗೆ ಹೊಂದಿಕೊಂಡ ಅನುಭವವಿದೆ. ಅವರು ಹೇಗೆ ನನ್ನನ್ನು ಔಟ್ ಮಾಡಲು ಯತ್ನಿಸುತ್ತಾರೋ ಹಾಗೇನೆ ನಾನೂ ಅದಕ್ಕೆ ಎದುರೇಟು ಕೊಡಲು ಶಕ್ತನಾಗಿದ್ದೇನೆ,' ಎಂದು ನ್ಯೂಸ್ ಕಾರ್ಪ್ ಜೊತೆ ಮಾತನಾಡಿದ ಸ್ಮಿತ್ ಹೇಳಿದ್ದಾರೆ.