
ಇಂದು ಆಸ್ಟ್ರೇಲಿಯಾ ಹಾಗೂ ಟೀಮ್ ಇಂಡಿಯಾ ಟಿ20 ಸರಣಿಯ ಎರಡನೇ ಪಂದ್ಯವನ್ನು ಆಡಲು ಕಣಕ್ಕಿಳಿಯಲಿದೆ. ಮಧ್ಯಾಹ್ನ 1:40ರಿಂದ ಆ ಪಂದ್ಯ ಆರಂಭವಾಗಲಿದ್ದು ಮೊದಲ ಪಂದ್ಯವನ್ನು ಗೆದ್ದಿರುವ ಉತ್ಸಾಹದಲ್ಲಿರುವ ಟೀಮ್ ಇಂಡಿಯಾ ಈ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಳ್ಳುವ ಕಾತುರದಲ್ಲಿದೆ.
ಆದರೆ ಈ ಪಂದ್ಯ ಸಿಡ್ನಿ ಅಂಗಳದಲ್ಲಿ ನಡೆಯಲಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ಈ ಬಾರಿಯ ಸರಣಿಯಲ್ಲಿ ಟೀಮ್ ಇಂಡಿಯಾ ಗೆಲುವಿನ ಖಾತೆಯನ್ನೇ ತೆರೆದಿಲ್ಲ. ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳನ್ನು ಇದೇ ಅಂಗಳದಲ್ಲಿ ಆಡಿದ್ದು ಭಾರತ ತಂಡ ಈ ಎರಡು ಪಂದ್ಯಗಳಲ್ಲೂ ಸೋಲಿನ ಕಹಿ ಅನುಭವಿಸಿತ್ತು.
ಆದರೆ ಇದೀಗ ಟಿ20 ಸರಣಿಯಾಗಿದ್ದು ಭಾರತ ಆಸ್ಟ್ರೇಲಿಯಾ ತಂಡಕ್ಕಿಂತ ಬಲಿಷ್ಠವಾಗಿದೆ. ಮೊದಲ ಟಿ20 ಪಂದ್ಯವನ್ನು ಗೆದ್ದಿರುವ ಕೊಹ್ಲಿ ಬಳಗ ಎರಡನೇ ಪಂದ್ಯವನ್ನೂ ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳಲು ಸಿದ್ಧವಾಗಿದೆ. ಈ ಮೂಲಕ ಸಿಡ್ನಿ ಅಂಗಳದ ಸೋಲಿನ ನೆನಪನ್ನು ಅಳಿಸಿ ಹಾಕುವ ಸಾಧ್ಯತೆಯಿದೆ.
ಎರಡನೇ ಟಿ20 ಪಂದ್ಯದಲ್ಲಿ ಗಾಯಗೊಂಡಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಕಣಕ್ಕಿಳಿಯುತ್ತಿಲ್ಲ. ಏಕದಿನ ಸರಣಿಯ ಅಂತಿಮ ಪಂದ್ಯ ಹಾಗೂ ಟಿ20 ಪಂದ್ಯದ ಗೆಲುವಿಗೆ ರವೀಂದ್ರ ಜಡೇಜಾ ಪ್ರಮುಖ ಕಾರಣರಾಗಿದ್ದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ಟೀಮ್ ಇಂಡಿಯಾ ಉತ್ತಮ ಮೊತ್ತ ಪೇರಿಸಲು ಕಾರಣವಾಗಿತ್ತು. ಇದೀಗ ಅವರ ಅಲಭ್ಯತೆ ತಂಡಕ್ಕೆ ಕಾಡುವುದು ಖಚಿತ.
ಆಸ್ಟ್ರೇಲಿಯಾ ತಂಡದಲ್ಲೂ ಬದಲಾವಣೆಗಳು ನಡೆಯುವ ಸಾಧ್ಯತೆಯಿದೆ. ತಂಡಕ್ಕೆ ನಥನ್ ಲಿಯಾನ್ ಅವರನ್ನು ಸೇರ್ಪಡೆಗೊಳಿಸಿದೆ. ಟಿ20 ಕ್ರಿಕೆಟ್ನಲ್ಲಿ ಸ್ಪಿನ್ನರ್ಗಳ ಮಹತ್ವ ಅರ್ಥ ಮಾಡಿಕೊಂಡಿರುವ ಆಸ್ಟ್ರೇಲಿಯಾ ಲಿಯಾನ್ ಅವರನ್ನು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಸಿದರೆ ಅಚ್ಚರಿಯಿಲ್ಲ.