
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಮಾರ್ಚ್ 1ರಿಂದ ಆರಂಭವಾಗಲಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಖಾಯಂ ನಾಯಕ ಪ್ಯಾಟ್ ಕಮ್ಮಿನ್ಸ್ ಬದಲಿಗೆ ಸ್ಟೀವ್ ಸ್ಮಿತ್ ಮುನ್ನಡೆಸಲಿದ್ದಾರೆ. ಪ್ಯಾಟ್ ಕಮ್ಮಿನ್ಸ್ ವೈಯಕ್ತಿಕ ಕಾರಣಗಳಿಂದ ತವರಿಗೆ ಮರಳಿರುವ ಕಾರಣ ಆಸಿಸ್ ತಂಡದ ನಾಯಕತ್ವದ ಹೊಣೆಗಾರಿಗೆ ಸ್ಮಿತ್ ಹೆಗಲೇರಿದೆ. ಈ ಬಗ್ಗೆ ಮಾತನಾಡಿರುವ ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಸ್ಮಿತ್ ನಾಯಕತ್ವದಿಂದ ಆಸ್ಟ್ರೇಲಿಯಾ ತಂಡಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ.
ಆಸ್ಟ್ರೇಲಿಯಾದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಭಾರತದ ಕ್ರಿಕೆಟ್ನ ನಾಡಿಮಿಡಿತವನ್ನು ಪ್ಯಾಟ್ ಕಮ್ಮಿನ್ಸ್ ಅವರಿಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದಿರುವ ರವಿ ಶಾಸ್ತ್ರಿ ಇದು ಆಸಿಸ್ ತಂಡಕ್ಕೆ ಅನುಕೂಲವಾಗಲಿದೆ ಎಂದಿದ್ದಾರೆ. 'ಏಜ್' ಪತ್ರಿಕೆಗೆ ಬರೆದಿರುವ ಅಂಕಣದಲ್ಲಿ ರವಿ ಶಾಸ್ತ್ರಿ ಸ್ಟೀವ್ ಸ್ಮಿತ್ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದು ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸುವ ಹೆಚ್ಚುವರಿ ಜವಾಬ್ಧಾರಿ ಹೊತ್ತು ಸಕಾರಾತ್ಮಕ ಪ್ರದರ್ಶನ ನೀಡುವ ಆಟಗಾರರಲ್ಲಿ ಒಬ್ಬ ಎಂದಿದ್ದಾರೆ.
"ಆಸ್ಟ್ರೇಲಿಯ ತಂಡ ಬದಲಿ ನಾಯಕನಾಗಿ ಸ್ಟೀವ್ ಸ್ಮಿತ್ ಅವರಂಥಾ ಸಿದ್ಧವಾಗಿರುವ ಆಟಗಾರನನ್ನು ಹೊಂದಿದೆ. ಅದು ಅವರಿಗೆ ಅನುಕೂಲ ಒದಗಿಸಲಿದೆ ಎಂದು ನಾನು ಭಾವಿಸುತ್ತೇನೆ. ನಾಯಕತ್ವದ ಜವಾಬ್ದಾರಿಯು ವಿಭಿನ್ನ ರೀತಿಯ ಮನಸ್ಥಿತಿಯನ್ನು ತರುತ್ತದೆ. ಅವರ ಏಕಾಗ್ರತೆಯ ಮಟ್ಟಗಳು ತುಂಬಾ ಹೆಚ್ಚಿವೆ, ಮತ್ತು ನೀವು ನಾಯಕನಾಗಿ ಅವರ ಬ್ಯಾಟಿಂಗ್ ಸರಾಸರಿಯನ್ನು ನೋಡಬೇಕು. ಅದು ಅದ್ಭುತವಾಗಿದೆ. ತಂಡವನ್ನು ಮುನ್ನಡೆಸುವ ಹೆಚ್ಚುವರಿ ಕೆಲಸದ ಹೊರೆಯಲ್ಲಿ ಸಕಾರಾತ್ಕ ಪ್ರದರ್ಶನ ನೀಡುವ ಅಪರೂಪದ ಆಟಗಾರ ಸ್ಮಿತ್" ಎಂದಿದ್ದಾರೆ ರವಿ ಶಾಸ್ತ್ರಿ.
ಇನ್ನು ಆಸ್ಟ್ರೇಲಿಯಾದ ಬ್ಯಾಟಿಂಗ್ ವಿಭಾಗದ ಬಗ್ಗೆ ಮಾತನಾಡಿರುವ ರವಿ ಶಾಸ್ತ್ರಿ, "ಕ್ಯಾಮರೂನ್ ಗ್ರೀನ್ಸ್ ಅವರ ಕಮ್ಬ್ಯಾಕ್ ಮಾಡುವ ಮೂಲಕ ಆಸ್ಟ್ರೇಲಿಯಾ ತಂಡ ಆರು ಬಲಿಷ್ಠ ಬ್ಯಾಟರ್ಗಳನ್ನು ಹೊಂದಲಿದೆ ಎಂದಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ತಮಡ ಇಂದೋರ್ನಲ್ಲಿ ಗೆಲ್ಲಬೇಕಾದರೆ 300 ರನ್ಗಳನ್ನು ಗಳಿಸುವುದು ಪ್ರಮುಖವಾಗಿದೆ ಎಂದಿದ್ದಾರೆ.
ಮೂರನೇ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ಒತ್ತಡದಲ್ಲಿರುವುದು ಸ್ಪಷ್ಟವಾಗಿದೆ. ನಾಯಕ ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ಕೆಲ ಪ್ರಮುಖ ಆಟಗಾರರು ಅಲಭ್ಯವಾಗಿರುವುದು ತಂಡದ ಒತ್ತಡ ಹೆಚ್ಚಿಸಿದೆ. ಅಲ್ಲದೆ ಇಂದೋರ್ ಪಿಚ್ ಕೂಡ ಸ್ಪಿನ್ ಸ್ನೇಹಿ ಆಗಿರುವ ಕಾರಣ ಈಗಾಗಲೇ ಸ್ಪಿನ್ ದಾಳಿಗೆ ನಲುಗಿರುವ ಆಸಿಸ್ ಪಡೆಗೆ ಚಿಂತೆ ಹೆಚ್ಚಿಸಿದೆ. ಎರಡನೇ ಪಂದ್ಯದ ಬಳಿಕ ಸುದೀರ್ಘ ವಿರಾಮದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದು ಹೊಸ ರಣತಂತ್ರದೊಂದಿಗೆ ಕಣಕ್ಕಿಳಿದು ಎಷ್ಟರ ಮಟ್ಟಿಗೆ ಆಸ್ಟ್ರೇಲಿಯಾ ತಂಡ ಯಶಸ್ಸು ಸಾಧಿಸಲಿದೆ ಎಂಬುದು ಕೂಡ ಕುತೂಹಲ ಮೂಡಿಸಿದೆ.