ಭಾರತ vs ಆಸ್ಟ್ರೇಲಿಯಾ: ಅಂತಿಮ ಟೆಸ್ಟ್ ಪಂದ್ಯ ಗೆಲ್ಲಲು ಕಾರಣವಾದ ಐದು ಅಂಶಗಳು

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿಯಲ್ಲಿ ಟೀಮ್ ಇಂಡಿಯಾ 2-1 ಅಂತರದಿಂದ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಗಾಬಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡ ಟೆಸ್ಟ್ ಕ್ರಿಕೆಟ್ನಲ್ಲಿ ಹೊಂದಿದ್ದ 32 ವರ್ಷಗಳ ಅಜೇಯ ದಾಖಲೆಯನ್ನು ಅಂತ್ಯಗೊಳಿಸಿದೆ. ಈ ಸರಣಿ ಗೆಲುವನ್ನು ಭಾರತದ ಟೆಸ್ಟ್ ಸರಣಿ ಗೆಲುವುಗಳಲ್ಲಿ ಶ್ರೇಷ್ಠವಾದ ಗೆಲುವು ಎಂದು ಬಣ್ಣಿಸಲಾಗುತ್ತಿದೆ.
ಬ್ರಿಸ್ಬೇನ್ನ ಗಾಬಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಎಲ್ಲಾ ವಿಭಾಗಗಳಲ್ಲೂ ಆಸ್ಟ್ರೇಲಿಯಾಗಿಂತ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಯಿತು. ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಅಲ್ಪ ಮುನ್ನಡೆಯನ್ನು ಪಡೆಯಿತಾದರೂ ಅಂದು ಕುಸಿದು ಹೋಗುತ್ತಿದ್ದ ತಂಡಕ್ಕೆ ಚೊಚ್ಚಲ ಪಂದ್ಯವನ್ನಾಡಿರುವ ವಾಶಿಂಗ್ಟನ್ ಸುಂದರ್ ಹಾಗೂ ಎರಡನೇ ಟೆಸ್ಟ್ನಲ್ಲಿ ಕಣಕ್ಕಿಳಿದ ಶಾರ್ದೂಲ್ ಠಾಕೂರ್ ಶತಕದ ಜೊತೆಯಾಟದ ಮೂಲಕ ಶಕ್ತಿ ತುಂಬಿದ್ದರು.
ಹಾಗಾದರೆ ಬ್ರಿಸ್ಬೇನ್ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಸ್ಮರಣೀಯ ಗೆಲುವು ಸಾಧಿಸಲು ಕಾರಣವಾದ ಐದು ಸಂಗತಿಗಳು ಯಾವುದು ಮುಂದೆ ಓದಿ..

ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಸುಂದರ್
ಟೀಮ್ ಇಂಡಿಯಾ ಪರವಾಗಿ ಮೊದಲ ಬಾರಿಗೆ ಟೆಸ್ಟ್ ಪಂದ್ಯವನ್ನಾಡಲು ಕಣಕ್ಕಿಳಿದ ವಾಶಿಂಗ್ಟನ್ ಸುಂದರ್ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನ ಬೌಲಿಂಗ್ನಲ್ಲಿ ಮೊದಲಿಗೆ ಮಿಂಚಿದರು. ಆಸ್ಟ್ರೇಲಿಯಾ ಇನ್ನಿಂಗ್ಸ್ನ ಮೂರು ವಿಕೆಟ್ ಕಬಳಿಸಿದ ಸುಂದರ್ ಪ್ರಮುಖ ಆಟಗಾರ ಸ್ಟೀವ್ ಸ್ಮಿತ್ ಅವರನ್ನು 36 ರನ್ಗೆ ಬಲಿ ಪಡೆದರು. ಬಳಿಕ ಅರ್ಧ ಶತಕದ ಅಂಚಿನಲ್ಲಿದ್ದ ಗ್ರೀನ್ ವಿಕೆಟ್ ಕೂಡ ಪಡೆದರು. ಒಟ್ಟಾರೆ ಮೊದಲ ಇನ್ನಿಂಗ್ಸ್ನಲ್ಲಿ ಒಟ್ಟು ಮೂರು ವಿಕೆಟ್ ಪಡೆದರು. ಈ ಮೂಲಕ ಆಸ್ಟ್ರೇಲಿಯಾದ 369 ರನ್ಗಳಿಗೆ ಮೊದಲ ಇನ್ನಿಂಗ್ಸ್ ಅಂತ್ಯಗೊಳ್ಳಲು ಕಾರಣರಾದರು.

ಶಾರ್ದೂಲ್-ಸುಂದರ್ ಜೊತೆಯಾಟ
ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡ ಯುವ ಆಟಗಾರ ಮಾರ್ನಾಸ್ ಲಾಬುಶೇನ್ ಶತಕದ ನೆರವಿನಿಂದ 369 ರನ್ಗಳನ್ನು ಪೇರಿಸಿತ್ತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾಗೆ ಅಗ್ರ ಕ್ರಮಾಂಕದ ಆಟಗಾರರಿಂದ ದೊಡ್ಡ ಜೊತೆಯಾಟ ದಕ್ಕಲಿಲ್ಲ. 186 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಭಾರತ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಈ ಸಂದರ್ಭದಲ್ಲಿ ಜೊತೆಯಾಗಿದ್ದು ಚೊಚ್ಚಲ ಪಂದ್ಯವನ್ನಾಡುತ್ತಿರುವ ವಾಶಿಂಗ್ಟನ್ ಸುಂದರ್ ಹಾಗೂ ಶಾರ್ದೂಲ್ ಠಾಕೂರ್ ಈ ಜೋಡಿ 7ನೇ ವಿಕೆಟ್ಗೆ 123 ರನ್ಗಳ ಅಮೂಲ್ಯ ಜೊತೆಯಾಟವನ್ನು ನೀಡಿತ್ತು. ಈ ಮೂಲಕ ತಂಡದ ಹಿನ್ನೆಡೆಯನ್ನು ಗಣನೀಯವಾಗಿ ಕಡಿಮೆ ಮಾಡಿತ್ತು.

ಸಿರಾಜ್- ಶಾರ್ದೂಲ್ ಬೌಲಿಂಗ್ ದಾಳಿ
ಎರಡನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು ಬೃಹತ್ ಮೊತ್ತ ಗಳಿಸದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಎರಡನೇ ಇನ್ನಿಂಗ್ಸ್ನಲ್ಲಿ 294 ರನ್ಗಳಿಗೆ ಆಸ್ಟ್ರೇಲಿಯಾ ಆಲೌಟ್ ಆಯಿತು. ಇದರಲ್ಲಿ ಟೀಮ್ ಇಂಡಿಯಾದ ಬೌಲರ್ ಸಿರಾಜ್ 5 ವಿಕೆಟ್ಗಳ ಗೊಂಚಲು ಪಡೆದು ಮಿಂಚಿದರೆ ಶಾರ್ದೂಲ್ ಠಾಕೂರ್ ಬೌಲಿಂಗ್ನಲ್ಲೂ ಮಿಂಚಿ 4 ವಿಕೆಟ್ ಕಿತ್ತು ಮತ್ತೊಂದು ದೊಡ್ಡ ಕೊಡುಗೆ ನೀಡಿದರು.

ಗಿಲ್-ಪೂಜಾರ ಜೊತೆಯಾಟ
ಆಸ್ಟ್ರೇಲಿಯಾ ಭಾರತಕ್ಕೆ ಎರಡನೇ ಇನ್ನಿಂಗ್ಸ್ನಲ್ಲಿ 338 ರನ್ ಗಳಿಸುವ ಗುರಿಯನ್ನು ನೀಡಿತ್ತು. ಇದನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ರೋಹಿತ್ ಶರ್ಮಾ ವಿಕೆಟ್ ಬೇಗನೆ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಟೀಮ್ ಇಂಡಿಯಾಗೆ ಶುಬ್ಮನ್ ಗಿಲ್ ಹಾಗೂ ಚೇತೇಶ್ವರ್ ಪೂಜಾರ ಆಸರೆಯಾದರು. ಈ ಇಬ್ಬರು ಆಟಗಾರರು ಇನ್ನಿಂಗ್ಸ್ ಕಟ್ಟುವ ಜೊತೆಗೆ ವಿಕೆಟ್ ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಿದರು. ಇದು ಗೆಲುವಿನಲ್ಲಿ ಪ್ರಮುಖ ಖಾರಣವಾಯುತು.

ಪಂತ್ ಸಮಯೋಚಿತ ಆಟ
ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್ ಆಸ್ಟ್ರೇಲಿಯಾ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ನಾಯಕ ರಹಾನೆ ವಿಕೆಟ್ ಕಳೆದುಕೊಂಡ ಬಳಿಕ ರಿಷಭ್ ಪಂತ್ ಕ್ರೀಸ್ಗಿಳಿದು ಚೇತೇಶ್ವರ್ ಪೂಜಾರ ಜೊತೆಗೆ ಅದ್ಭುತ ಜೊತೆಯಾಟವನ್ನು ಆಡಿದರು. ರಕ್ಷಣಾತ್ಮಕವಾಗಿ ಆಡುವ ಜೊತೆಗೆ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ರನ್ ಹೆಚ್ಚಿಸುತ್ತಾ ಸಾಗಿದರು. ಚೇತೇಶ್ವರ್ ಒಊಜಾರ ವಿಕೆಟ್ ಕಳೆದುಕೊಂಡ ಬಳಿಕ ಸುಂದರ್ ಜೊತೆಗೂ ಕೆಲ ಕಾಲ ಇನ್ನಿಂಗ್ಸ್ ಕಟ್ಟಿದ ಪಂತ್ ಪಂದ್ಯದ ಅಂತಿಮ ಹಂತದವರೆಗೂ ಕ್ರೀಸ್ನಲ್ಲಿದ್ದು ಗೆಲುವಿನ ರನ್ ಬಾರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications