ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ನಡುವಣ ಐದನೇ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯಕ್ಕೆ ಸಿಡ್ನಿ ಅಂಗಳ ಸಂಪೂರ್ಣ ಸಿದ್ಧವಾಗಿದೆ. ಈ ಮೈದಾನದಲ್ಲಿ ಗೆಲುವಿನ ನಗೆ ಬೀರಲು ಟೀಮ್ ಇಂಡಿಯಾ ಇನ್ನಿಲ್ಲದ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಈ ಬಾರಿ ತಂಡದಲ್ಲಿ ಬದಲಾವಣೆ ಗಾಳಿ ಜೋರಾಗಿ ಬೀಸುವ ಸಾಧತೆ ಇದೆ. ಈ ಗಾಳಿಯ ಹೊಡೆತಕ್ಕೆ ನಾವಿಕನೆ ಹೊರ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಹಾಗಿದ್ದರೆ ಟೀಮ್ ಇಂಡಿಯಾದಲ್ಲಿ ಮತ್ತೊಬ್ಬ ಕನ್ನಡಿಗ ಪ್ರಸಿದ್ಧ ಕೃಷ್ಣಾಗೆ ಸ್ಥಾನ ಸಿಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ.
ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾ 1-2 ರಿಂದ ಹಿನ್ನಡೆ ಅನುಭವಿಸುತ್ತಿದೆ. ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ನಲ್ಲಿ ಗೆಲುವು ಹಾಗೂ ಬ್ರಿಸ್ಬೇನ್ ಅಂಗಳದಲ್ಲಿ ಡ್ರಾ ಸಾಧಿಸಿದ್ದು ಬಿಟ್ಟರೆ, ಟೀಮ್ ಇಂಡಿಯಾಕ್ಕೆ ಬರೀ ಕಹಿ ಘಟನೆಗಳು ಅಪ್ಪಿಕೊಂಡಿವೆ. ಹೀಗಾಗಿ ತಂಡದಲ್ಲಿ ಬದಲಾವಣೆಯ ಗಾಳಿ ಜೋರಾಗಿ ಬೀಸುವ ಸಾಧ್ಯತೆ ಇದೆ.

ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರನ್ನು ಕುರಿಸಿ ಅವರ ಸ್ಥಾನದಲ್ಲಿ ಜಸ್ಪ್ರಿತ್ ಬುಮ್ರಾ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಇದೆ. ಅಲ್ಲದೆ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿರುವ ಆಟಗಾರರಿಗೆ ಗೇಟ್ ಪಾಸ್ ನೀಡಿ, ಅವರ ಬದಲಿಗೆ ಯುವ ಆಟಗಾರರಿಗೆ ಚಾನ್ಸ್ ನೀಡುವ ಸಂಭವ ದಟ್ಟವಾಗಿ ಕಾಣುತ್ತಿದೆ. ಆಕಾಶ್ ದೀಪ್ ಗಾಯಕ್ಕೆ ತುತ್ತಾಗಿದ್ದು, ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಹೇಳಿಕೆ ಹೊರ ಬಂದಿಲ್ಲ. ಹೀಗಾಗಿ ಇವರು ಐದನೇ ಟೆಸ್ಟ್ ಆಡುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
ಒಂದು ವೇಳೆ ಆಕಾಶ್ ದೀಪ್ ಅವರಿಗೆ ತಂಡದಿಂದ ಹೊರಗಿಟ್ಟರೆ, ಇವರ ಸ್ಥಾನದಲ್ಲಿ ಕರ್ನಾಟಕದ ಸ್ಟಾರ್ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇನ್ನು ಆಕಾಶ್ ದೀಪ್ ಫಿಟ್ ಆಗಿ ತಂಡಕ್ಕೆ ಎಂಟ್ರಿ ನೀಡಿದರೆ, ಪ್ರಸಿದ್ಧ ಕೃಷ್ಣ ಮೊಹಮ್ಮದ್ ಸಿರಾಜ್ ಅವರ ಸ್ಥಾನದಲ್ಲಿ ಆಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಐದನೇ ಟೆಸ್ಟ್ನಲ್ಲಿ ಮೂರು ವೇಗಿಗಳೊಂದಿಗೆ ಟೀಮ್ ಇಂಡಿಯಾ ಅಂಗಳಕ್ಕೆ ಇಳಿದಲ್ಲಿ ಪ್ರಸಿದ್ಧ ಜಾಕ್ ಪಾಟ್ ಹೊಡೆಯಬಹುದು.

ಪ್ರಸಿದ್ಧ ಕೃಷ್ಣ ಭಾರತ "ಎ" ತಂಡದ ಪರ ಆಸ್ಟ್ರೇಲಿಯಾ "ಎ" ವಿರುದ್ಧದ ಅನಧಿಕೃತ ಟೆಸ್ಟ್ನಲ್ಲಿ ತಂಡದ ಭಾಗವಾಗಿದ್ದರು. ಈ ವೇಳೆ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಅನಧಿಕೃತ ಟೆಸ್ಟ್ನಲ್ಲಿ ನೀಡಿದ ಪ್ರದರ್ಶನದ ಬಲವಾಗಿಯೇ ಇವರಿಗೆ ತಂಡದಲ್ಲಿ ಸ್ಥಾನ ಲಭಿಸಿದೆ. ಹೀಗಾಗಿ ಇವರು ಆಡುವ ತಂಡದಲ್ಲಿ ಸ್ಥಾನ ಪಡೆದರೆ, ಅಬ್ಬರಿಸಲಿ ರೆಡಿಯಾಗಿದ್ದಾರೆ.