ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮಂಗಳವಾರ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್ನಲ್ಲಿ ಕಾದಾಟ ನಡೆಸಲಿವೆ. ಎರಡೂ ತಂಡಗಳು ಲೀಗ್ ಹಂತದಲ್ಲಿ ಸೋಲು ಕಾಣದೇ ಈ ಹಂತಕ್ಕೆ ಪ್ರವೆಶಿಸಿವೆ. ಈ ವೆಳೆ ಟೀಮ್ ಇಂಡಿಯಾಗೆ ಒಂದು ಟೆನ್ಷನ್ ಆರಂಭವಾಗಿದೆ. ಆ ಹಿಂದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ನಿರಸೆ ಅನುಭಸಿತ್ತು. ಈ ಸೋಲಿನ ಲೆಕ್ಕ ಚುಕ್ತಾ ಮಾಡಲು ಟೀಮ್ ಇಂಡಿಯಾ ಆಟಗಾರರಿಗೆ ಇದು ಸುವರ್ಣ ಅವಕಾಶ.
ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಎ ಗುಂಪಿನ ಪಂದ್ಯದಲ್ಲಿ ಭಾರತ 44 ರನ್ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿತು. ಈ ಮೂಲಕ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನೀಯವಾಗಿ ಸೆಮಿಫೈನಲ್ ಹಂತ ಪ್ರವೇಶಿಸಿದೆ. ಮಂಗಳವಾರ ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದೆ. ಈ ವೇಳೆ ಆ ಎರಡು ಸೋಲುಗಳು ಮಾತ್ರ ತಂಡಕ್ಕೆ ಬಹುವಾಗಿ ಕಾಡುತ್ತಿದ್ದು, ಈ ಸೋಲಿನ ಲೆಕ್ಕಾಚುಕ್ತ ಮಾಡುವ ಇರಾದೆಯನ್ನು ಟೀಮ್ ಇಂಡಿಯಾ ಹೊಂದಿದೆ.

ಈಗಾಗಲೇ ಉಭಯ ತಂಡಗಳು ಐಸಿಸಿ ಟೂರ್ನಿಐ ಫೈನಲ್ನಲ್ಲಿ ಹಲವು ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಎರಡು ಐಸಿಸಿ ಟೂರ್ನಿಗಳಲ್ಲಿ ಉಭಯ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಿದವು. ಈ ಎರಡೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ.
ಜೂನ್ 7 ರಂದು ಲಂಡನ್ನಲ್ಲಿ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ನಲ್ಲಿ ಉಭಯ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಿದವು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಸ್ಟೀವನ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಅವರ ಭರ್ಜರಿ ಶತಕದ ನೆರವಿನಿಂದ 469 ರನ್ ಕಲೆ ಹಾಕಿತು. ಮೊದಲ ಇನಿಂಗ್ಸ್ ಆರಂಭಿಸಿದ್ದ ಭಾರತ 296 ರನ್ಗಳಿಗೆ ಸರ್ವ ಪತನ ಕಂಡಿತ್ತು. ಎರಡನೇ ಇನಿಂಗ್ಸ್ನಲ್ಲಿ ಆಸೀಸ್ 8 ವಿಕೆಟ್ಗೆ 270 ರನ್ ಸೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಸವಾಲಿನ ಮೊತ್ತವನ್ನು ಹಿಂಬಾಲಿಸಿದ ಭಾರತ 234 ರನ್ಗಳಿಗೆ ಆಲೌಟ್ ಆಗಿ ಸೋಲು ಕಂಡಿತು. ಈ ಮೂಲಕ 209 ರನ್ಗಳಿಂದ ಪಂದ್ಯ ಸೋತಿತು. ಐಸಿಸಿ ಟ್ರೋಫಿಯನ್ನು ಆಸ್ಟ್ರೇಲಿಯಾ ಗೆದ್ದು ಬೀಗಿತು.

ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ನಲ್ಲಿ ಭಾರತೀಯ ಆಟಗಾರರು ಆಡಿದ ಧಾಟಿಯನ್ನು ಕಂಡರೇ ಎಲ್ಲರೂ ಈ ಬಾರಿ ನಾವೇ ವಿಶ್ವಕಪ್ ಗೆಲ್ಲುವುದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಆಸೀಸ್ ಸಂಘಟಿತ ಆಟದ ಪ್ರದರ್ಶನ ನೀಡಿ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ 240 ರನ್ಗಳನ್ನು ಸೇರಿಸಿತು. ಈ ಗುರಿಯನ್ನು ಆಸೀಸ್ 43 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಮುಟ್ಟಿತು.
ಈಗ ಈ ಎರಡೂ ಸೋಲಿನ ಲೆಕ್ಕಚುಕ್ತಾ ಮಾಡುವ ಸುವರ್ಣ ಅವಕಾಶ ಟೀಮ್ ಇಂಡಿಯಾಕ್ಕೆ ಲಭಿಸಿದೆ. ಮಂಗಳವಾರ ಸ್ಥಿರ ಪ್ರದರ್ಶನ ನೀಡುವ ಇರಾದೆ ಭಾರತ ತಂಡದ್ದಾಗಿದೆ.