

ಮೆಲ್ಬರ್ನ್, ಡಿಸೆಂಬರ್ 24: ಭಾರತವನ್ನು ಸುಲಭವಾಗಿ ಕಟ್ಟಿ ಹಾಕುವ ಉಪಾಯ ಆಸ್ಟ್ರೇಲಿಯಾಕ್ಕೆ ಹೊಳೆದಿದೆ. ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಬುಧವಾರ (ಡಿಸೆಂಬರ್ 26) ಆರಂಭವಾಗಲಿರುವ ಭಾರತ-ಆಸ್ಟ್ರೇಲಿಯಾ ನಡುವಣ 3ನೇ ಟೆಸ್ಟ್ನಲ್ಲಿ ಭಾರತದ ಮಧ್ಯಮ ಕ್ರಮಾಂಕವನ್ನು ಉರುಳಿಸುವತ್ತ ಆಸೀಸ್ ವೇಗಿಗಳು ಕಣ್ಣಿಟ್ಟಿದ್ದಾರೆ.
ಮಧ್ಯಮ ಕ್ರಮಾಂಕದತ್ತ ಗಮನ ಹರಿಸುವ ಮೂಲಕ ಬಾಕ್ಸಿಂಗ್ ಡೇ ಟೆಸ್ಟನ್ನು ಗೆದ್ದುಕೊಳ್ಳುವ ಯೋಜನೆಯಲ್ಲಿ ಆಸ್ಟ್ರೇಲಿಯಾ ವೇಗಿಗಳಿದ್ದಾರೆ. ಅವರ ಲೆಕ್ಕಾಚಾರದಲ್ಲಿ ಆರಂಭಿಕ ಆಟಗಾರರಿಗಿಂತ ಮಧ್ಯಮ ಕ್ರಮಾಂಕವೇ ಭಾರತದ ಬಲ. ಅದನ್ನು ಬೇಗ ಉರುಳಿಸಿದರೆ ಗೆಲುವಿನ ದಾರಿ ಸುಲಭ.
ಜೋಶ್ ಹ್ಯಾಝೆಲ್ವುಡ್, ಮಿಚೆಲ್ ಸ್ಟಾರ್ಕ್ ಮತ್ತು ಪ್ಯಾಟ್ ಕಮಿನ್ಸ್ಗೆ ಭಾರತದ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್, ಮುರಳಿ ವಿಜಯ್ ಅವರಂತ ಆಟಗಾರರಿಗಿಂತಲೂ ಮಧ್ಯಮ ಕ್ರಮಾಂಕದಲ್ಲಿರುವ ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಮೇಲೆ ಹೆಚ್ಚಿನ ಗಮನವಿದೆ.
ಸೋಮವಾರ (ಡಿಸೆಂಬರ್ 24) ಸ್ಟಾರ್ಕ್ ಮಾತನಾಡುತ್ತ, 'ಭಾರತದ ಮಧ್ಯಮ ಕ್ರಮಾಂಕದಲ್ಲಿರುವ ಮೂವರು ಸ್ಟಾರ್ ಬ್ಯಾಟ್ಸ್ಮನ್ಗಳಾದ ಕೊಹ್ಲಿ, ಪೂಜಾರ ಮತ್ತು ರಹಾನೆಯನ್ನು ಬೇಗ ಪೆವಿಲಿಯನ್ಗೆ ಅಟ್ಟುವ ಯೋಜನೆ ನಮ್ಮದು. ಆಟವನ್ನು ಗೆಲ್ಲುವ ನಮ್ಮ ಪ್ರಮುಖ ಪ್ಲ್ಯಾನೇ ಇದು' ಎಂದಿದ್ದಾರೆ. ಹ್ಯಾಝೆಲ್ವುಡ್ ಮತ್ತು ಕಮಿನ್ಸ್ ಅವರದ್ದೂ ಇದೇ ಮಾತು.
ಭಾರತದ ಈಗಿನ ಟೆಸ್ಟ್ ತಂಡ ಅವಲಂಭಿಸಿರೋದೆ ಕೊಹ್ಲಿ, ರಹಾನೆ ಮತ್ತು ಪೂಜಾರ ಅವರನ್ನು. ಈ ಮೂವರ ವಿಕೆಟ್ ಉರುಳಿದರೆ ಭಾರತಕ್ಕೆ ಗೆಲುವು ದುಬಾರಿಯಾಗಲಿದೆ. ಮೆಲ್ಬರ್ನ್ ನಲ್ಲಿ ಮೂವರೂ ಅನುಭವಿ ಆಟಗಾರರು ಎಚ್ಚರಿಕೆಯಿಂದ ಆಡಬೇಕು. ಜೊತೆಗೆ ಆರಂಭಿಕ ಆಟಗಾರರೂ ಇನ್ನಾದರೂ ಎಚ್ಚೆತ್ತುಕೊಂಡು ತಂಡಕ್ಕೆ ಬೆಂಬಲಿಸಬೇಕಿದೆ.