
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಮೂರು ಪಂದ್ಯಗಳಿಂದ ವಿನಾಯಿತಿ ಪಡೆದುಕೊಂಡು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಿದ್ದಾರೆ. ಈ ವಿಚಾರವಾಗಿ ಮಾಜಿ ಸ್ಪಿನ್ನರ್ ದಿಲೀಪ್ ದೋಷಿ ಪ್ರತಿಕ್ರಿಯಿಸಿದ್ದು ವಿರಾಟ್ ಕೊಹ್ಲಿ ನಿರ್ಧಾರಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಪಿತೃತ್ವದ ರಜೆಯನ್ನು ಪಡೆದುಕೊಂಡು ತವರಿಗೆ ಮರಳಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ದಿಲಿಪ್ ದೋಷಿ ತಾನಾಗಿದ್ದರೆ ರಾಷ್ಟ್ರೀಯ ಸೇವೆಗೆ ಮೊದಲ ಪ್ರಾಮುಖ್ಯತೆಯನ್ನು ನೀಡುತ್ತಿದ್ದೆ ಎಂದಿದ್ದಾರೆ. ನಾನು ವಿರಾಟ್ ಕೊಹ್ಲಿಯಾಗಿದ್ದರೆ ಇಂತಾ ಸರಣಿಯ ಮಧ್ಯೆ ತವರಿಗೆ ಮರಳುತ್ತಿರಲಿಲ್ಲ. ದೇಶಸೇವೆಗೆ ಮೊದಲ ಆದ್ಯತೆ ನೀಡುತ್ತಿದ್ದೆ ಎಂದು ದಿಲಿಪ್ ಹೇಳಿದ್ದಾರೆ.
ಆಧುನಿಕ ಕಾಲದಲ್ಲಿ ಮಗುವಿನ ಜನನದ ಸಂದರ್ಭದಲ್ಲಿ ಸಂಗಾತಿಗಳು ಜೊತೆಯಿರಬೇಕೆಂದು ಬಯಸುತ್ತಾರೆ. ಇದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಆದರೆ ರಾಷ್ಟ್ರೀಯ ಕರ್ತವ್ಯದಲ್ಲಿದ್ದಾಗ ನಾನು ವಿರಾಟ್ ಕೊಹ್ಲಿ ಸ್ಥಾನದಲ್ಲಿದ್ದರೆ ನಾನು ತವರಿಗೆ ಮರಳುತ್ತಿರಲಿಲ್ಲ. ನನಗೆ ಉಳಿದ ಎಲ್ಲದಕ್ಕಿಂತಲೂ ದೇಶಸೇವೆ ಮೊದಲು ಎಂದಿದ್ದಾರೆ ದಿಲೀಪ್ ದೋಷಿ.
ಆದರೆ ಇಂತಾ ಸಂದರ್ಭಗಳಲ್ಲಿ ಬಿಸಿಸಿಐ ಸಂಗಾತಿಯ ಬದಲು ತಂಡದ ಜೊತೆಯಿರುವಂತೆ ಹೇಳಲು ಸಾಧ್ಯವಿಲ್ಲ ಎಂಬುದನ್ನು ಕೂಡ ದಿಲೀಪ್ ದೋಷಿ ಹೇಳಿದ್ದು ಇದೊಂದು ಸಂಪೂರ್ಣ ವೈಯಕ್ತಿಕವಾದ ಹಾಗೂ ಸಾಂಸ್ಥಿಕ ವಿಧಾನವಾಗಿದೆ. ಕಾನೂನಿಪ್ರಕಾರ ಯಾರೇ ಆದರೂ ಈ ರೀತಿಯ ನಿರ್ಧಾರ ತೆಗೆದುಕೊಂಡಾಗ ತಡೆಯಲು ಸಾಧ್ಯವಿಲ್ಲ. ಆದರೆ ವೈಯಕ್ತಿವಾಗಿ ನಾನು ಆ ರೋತಿ ಮಾಡುತ್ತಿರಲಿಲ್ಲ ಎಂದಿದ್ದಾರೆ.
ಜನವರಿಯಲ್ಲಿ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪಿತೃತ್ವದ ರಜೆಯನ್ನು ವಿರಾಟ್ ಕೊಹ್ಲಿ ಪಡೆದಿದ್ದು ತವರಿಗೆ ಮರಳಿದ್ದಾರೆ. ಅಂತಿಮ ಮೂರು ಟೆಸ್ಟ್ ಪಂದ್ಯಗಳಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.