
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಸರಣಿಯ 3ನೇ ಪಂದ್ಯದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿ ಸತತ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಈಗಾಗಲೇ ಘೋಷಣೆ ಮಾಡಲಾಗಿದೆ. ಆದರೆ ತಂಡದ ನಾಯಕನನ್ನು ಆಯ್ಕೆ ಮಂಡಳಿ ಹೆಸರಿಸಿಲ್ಲ. ಉಪನಾಯಕನಾಗಿದ್ದ ಕೆಎಲ್ ರಾಹುಲ್ ಅವರನ್ನು ಅಂತಿಮ ಎರಡು ಟೆಸ್ಟ್ ಪಂದ್ಯಗಳಿಗೆ ಪ್ರಕಟಿಸಿರುವ ತಂಡದಲ್ಲಿ ಆ ಜವಾಬ್ಧಾರಿಯಿಂದ ಅವರನ್ನು ಬಿಡುಗಡೆಗೊಳಿಸಲಾಗಿದೆ.
ಹೀಗಾಗಿ ಟೆಸ್ಟ್ ಮಾದರಿಯಲ್ಲಿ ಟೀಮ್ ಇಂಡಿಯಾದ ಉಪನಾಯಕ ಯಾರು ಎಂಬುದು ಈಗಿರುವ ಪ್ರಶ್ನೆ. ಮೂಲಗಳ ಮಾಹಿತಿಯ ಪ್ರಕಾರ ಟೆಸ್ಟ್ ತಂಡಕ್ಕೆ ಯಾರು ನಾಯಕನಾಗಬೇಕು ಎಂಬುದನ್ನು ನಿರ್ಧರಿಸಲು ಆಯ್ಕೆ ಮಂಡಳಿ ನಾಯಕ ರೋಹಿತ್ ಶರ್ಮಾ ಅವರಿಗೆ ಜವಾಬ್ಧಾರಿ ವಹಿಸಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ತಂಡದಲ್ಲಿ ಉಪನಾಯಕನ ಜವಾಬ್ಧಾರಿ ಯಾರು ವಹಿಸಬೇಕು ಎಂಬ ಬಗ್ಗೆ ನಾನಾ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಈ ವಿಚಾರವಾಗಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದು ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾಗೆ ತಂಡದಲ್ಲಿ ಉಪನಾಯಕನ ಜವಾಬ್ಧಾರಿ ನೀಡಬೆಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಪನಾಯಕನ ಜವಾಬ್ಧಾರಿ ಜಡೇಜಾಗೆ ನೀಡಿದರೆ ಅವರು ಮತ್ತಷ್ಟು ಜವಾಬ್ಧಾರಿಯುತವಾಗಿ ಪ್ರದರ್ಶನ ನೀಡಲಿದ್ದಾರೆ ಎಂದಿದ್ದಾರೆ ಹರ್ಭಜನ್ ಸಿಂಗ್.
ಟೆಸ್ಟ್ ಮಾತ್ರವಲ್ಲ ಏಕದಿನ ಮಾದರಿಯಲ್ಲಿಯೂ ರವೀಂದ್ರ ಜಡೇಜಾ ರೋಹಿತ್ ಶರ್ಮಾ ಜೊತೆಗೆ ಉಪನಾಯಕನಾಗಿ ಕರ್ತವ್ಯ ನಿರ್ವಹಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರವೀಂದ್ರ ಜಡೇಜಾ ಮೂರು ಮಾದರಿಯಲ್ಲಿಯೂ ಸ್ಥಾನವನ್ನು ಪಡೆಯುವ ಪ್ರಮುಖ ಆಟಗಾರ ಎಂದು ಉಲ್ಲೇಖಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್.
"ಭಾರತ ತಂಡ ಈಗ ಉಪನಾಯಕನನ್ನು ಹೊಂದಿಲ್ಲ. ಮುಂದಿನ ಉಪನಾಯಕ ಯಾರಾಗಬಹುದು? ನನ್ನ ಪ್ರಕಾರ ಆಡುವ ಬಳಗದಲ್ಲಿ ಆರಂಭದಲ್ಲಿಯೇ ಸ್ಥಾನವನ್ನು ಪಡೆಯುವ ಆಟಗಾರರು ನಾಯಕ ಅಥವಾ ಉಪನಾಯಕನಾಗಬೇಕು. ಅದು ಭಾರತದಲ್ಲಿ ನಡೆಯುವ ಪಂದ್ಯವಾಗಿರಲಿ ಅಥವಾ ವಿದೇಶದಲ್ಲಾಗಿರಲಿ" ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
"ನನ್ನ ಪ್ರಕಾರ ರವೀಂದ್ರ ಜಡೇಜಾ ಆ ಮಾದರಿಯ ಆಟಗಾರನಾಗಿದ್ದಾರೆ. ಹಾಗಾಗಿ ರವೀಂದ್ರ ಜಡೇಜಾ ಅವರಿಗೆ ತಂಡದ ಉಪನಾಯಕನ ಜವಾಬ್ಧಾರಿ ನೀಡಬೇಕು. ಯಾಕೆಂದರೆ ಅದು ಅವರಿಗೆ ಮತ್ತಷ್ಟು ಜವಾಬ್ಧಾರಿ ನೀಡುತ್ತದೆ. ಅಲ್ಲದೆ ಆತ ಬಹಳ ಅದ್ಭುತವಾಗಿ ಆಡುತ್ತಿದ್ದಾರೆ. ಅನುಭವಿ ಆಟಗಾರನಾಗಿ ಬಹಳ ಸುದೀರ್ಘ ಕಾಲದಿಂದ ಅವರು ಆಡುತ್ತಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲಿಯೂ ಅವರು ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಜಗತ್ತಿನಲ್ಲಿ ರವೀಂದ್ರ ಜಡೇಜಾ ಅವರಿಗಿಂತ ಉತ್ತಮ ಆಲ್ರೌಂಡರ್ ಇದ್ದಾರೆ ಎಂದು ನನಗೆ ಅನಿಸುತ್ತಿಲ್ಲ" ಎಂದಿದ್ದಾರೆ ಹರ್ಭಜನ್ ಸಿಂಗ್.
ಇನ್ನು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಜಡೇಹಾ ಅಮೋಘ ಪ್ರದರ್ಶನದ ಮೂಲಕ ಅಬ್ಬರಿಸಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲುಯೂ ಆಸ್ಟ್ರೇಲಿಯಾ ತಂಡಕ್ಕೆ ಜಡ್ಡು ದುಃಸ್ವಪ್ನವಾಗಿ ಕಾಡಿದ್ದಾರೆ. ಎರಡು ಪಂದ್ಯಗಳಲ್ಲಿ ಒಟ್ಟು 17 ವಿಕೆಟ್ಗಳನ್ನು ಪಡೆದುಕೊಂಡಿರುವ ಅವರು ಬ್ಯಾಟಿಂಗ್ನಲ್ಲಿಯೂ ಎರಡು ಇನ್ನಿಂಗ್ಸ್ನಲ್ಲಿ 96 ರನ್ಗಳನ್ನು ಕಲೆಹಾಕಿದ್ದಾರೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ 3ನೇ ಟೆಸ್ಟ್ ಪಂದ್ಯ ಮಾರ್ಚ್ 1ರಿಂದ ಇಂದೋರ್ನಲ್ಲಿ ನಡೆಯಲಿದೆ.