
ಮೆಲ್ಬರ್ನ್, ಜನವರಿ 19: ಆಸ್ಟ್ರೇಲಿಯಾ ವಿರುದ್ಧ ಭಾರತ ಚೊಚ್ಚಲ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದ ಸಂಭ್ರಮದಲ್ಲಿದೆ. ಅತ್ತ ಆತಿಥೇಯ ಆಸ್ಟ್ರೇಲಿಯಾ ಸರಣಿಯನ್ನು ಕೈ ಚೆಲ್ಲಿರುವ ಕುರಿತು ವಿಶ್ಲೇಷಣೆ ನಡೆಸುತ್ತಿದೆ. ಸೋಲಿನ ಪರಾಮರ್ಶೆ ಮಾಡುತ್ತಿರುವ ಆಸೀಸ್ಗೆ ತಂಡದ ಸೋಲಿಗೆ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಒಂದು ನೆಪವಾಗಿ ಕಾಣಿಸುತ್ತಿದ್ದಾರೆ.
ಹಾಗಂತ ಯಾವುದೇ ಪಂದ್ಯದಲ್ಲಿ ತಂಡದ ಸೋಲು ಅಥವಾ ಗೆಲುವಿಗೆ ಒಬ್ಬನೇ ಆಟಗಾರರನ್ನು ಹೊಣೆಗಾರಿಕೆ ಮಾಡುವಂತಿಲ್ಲ. ತಂಡವಾಗಿ ಸ್ಪರ್ಧಿಸುವಾಗ ಅಲ್ಲಿ ಗೆಲುವಿಗೆ ಯಾ ಸೋಲಿಗೆ ತಂಡದ ಎಲ್ಲಾ ಆಟಗಾರರೂ ಕಾರಣರೆ. ತಂಡದ ಗೆಲುವು ನಿಂತಿರೋದೆ ಇಡೀ ತಂಡದ ಶ್ರಮದ ಮೇಲೆ.
ಆಸೀಸ್ ವಿರುದ್ಧದ ತೃತೀಯ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2-1ರಿಂದ ಜಯಿಸಿತ್ತು. ಕೊನೆಯ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಅವರು ಧೋನಿ ನೀಡಿದ ಕ್ಯಾಚೊಂದನ್ನು ಕೈ ಚೆಲ್ಲಿದರು. ಇದೂ ಪಂದ್ಯದ ತಿರುವಿಗೆ ಒಂದು ಕಾರಣವಾಯ್ತು ಎಂದು ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ ಪಂದ್ಯದ ಬಳಿಕ ಅಭಿಪ್ರಾಯಿಸಿದ್ದಾರೆ.
ಶುಕ್ರವಾರದ (ಜನವರಿ 18) ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದಿದ್ದ ಧೋನಿ ಇನ್ನಿಂಗ್ಸ್ನ ಮೊದಲ ಎಸೆತದಲ್ಲಿ ನೀಡಿದ್ದ ಕ್ಯಾಚನ್ನು ಗ್ಲೆನ್ ಮ್ಯಾಕ್ಸ್ವೆಲ್ ಕೈ ಚೆಲ್ಲಿದರು. ಆ ಓವರ್ ಎಸೆದಿದ್ದು ಮಾರ್ಕಸ್ ಸ್ಟೊಯಿನಿಸ್. ಹೀಗೆ ಜೀವದಾನ ಪಡೆದ ಬಳಿಕ ಕ್ರೀಸ್ಗೆ ಅಂಟಿ ನಿಂತ ಧೋನಿ 87 ರನ್ನೊಂದಿಗೆ ಆಟದ ಕೊನೆಯವರೆಗೂ ನಿಂತರಲ್ಲದೆ ಪಂದ್ಯವನ್ನು ಗೆಲ್ಲಿಸಿಕೊಟ್ಟರು!
ಅಂದ್ಹಾಗೆ ಟೀಮ್ ಇಂಡಿಯಾ ಅಂತಿಮ ಪಂದ್ಯ ಗೆದ್ದಿದ್ದು ಸುಲಭವಾಗಿ ಅಲ್ಲ. ಪಂದ್ಯ ರೋಚಕ ಹಂತಕ್ಕೇ ತಲುಪಿತ್ತು. ಒಂದು ವೇಳೆ ಧೋನಿ ಬಂದವರೇ ವಿಕೆಟ್ ಒಪ್ಪಿಸಿ ನಿರ್ಗಮಿಸಿದ್ದರೆ ಪಂದ್ಯದ ಗತಿ ಬದಲಾಗುವ ಸಾಧ್ಯತೆಯೂ ಇತ್ತು. ಮತ್ತೊಂದು ಅಂಶವೆಂದರೆ ಅಂತಿಮ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಗಮನಾರ್ಹ ಬ್ಯಾಟಿಂಗ್ ಬೆಂಬಲವನ್ನೂ ನೀಡಿರಲಿಲ್ಲ; 26 ರನ್ನಿಗೆ ಗ್ಲೆನ್ ಅವರು ಶಮಿಗೆ ವಿಕೆಟ್ ಒಪ್ಪಿಸಿದ್ದರು.