
ಅಹ್ಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರೂ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಪ್ರದರ್ಶನ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗಿದೆ. ಬೌಲಿಂಗ್ಗೆ ಕಠಿಣವಾಗಿರುವ ಪಿಚ್ನಲ್ಲಿಯೂ ಆರ್ ಅಶ್ವಿನ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದು 6 ವಿಕೆಟ್ಗಳ ಗೊಂಚಲು ಪಡೆದಿದ್ದಾರೆ. ತಮ್ಮ ಈ ಪ್ರದರ್ಶನದ ಬಗ್ಗೆ ಸ್ವತಃ ಆರ್ ಅಶ್ವಿನ್ ಪ್ರತಿಕ್ರಿಯಿಸಿದ್ದು ಈ ಪ್ರದರ್ಶನ ಸಮಾಧಾನ ನೀಡಿದೆ ಎಂದಿದ್ದಾರೆ.
ಬಾಂಗ್ಲಾದೇಶ ಪ್ರವಾಸದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಆರ್ ಅಶ್ವಿನ್ ವಿಫಲವಾಗಿದ್ದರು. ಇದರಿಂದಾಗಿ ಬೇಸರವಾಗಿತ್ತು ಎಂದಿರುವ ಆರ್ ಅಶ್ವಿನ್ ಅಹ್ಮದಾಬಾದ್ ಟೆಸ್ಟ್ ಪಂದ್ಯದಲ್ಲಿ ನೀಡಿರುವ ಪ್ರದರ್ಶನ ನಿರಾಳತೆ ಮೂಡಿಸಿದೆ ಎಂದಿದ್ದಾರೆ. "ಕೇವಲ ಮೂರು ವಿಕೆಟ್ಗಳನ್ನು ಮಾತ್ರವೇ ನಿಮ್ಮ ಖಾತೆಯಲ್ಲಿ ಹೊಂದುವುದಕ್ಕಿಂತ ಇಂಥಾ ಸಂದರ್ಭದಲ್ಲಿ ನಿರಾಳವಾಗಿ ನಿದ್ದೆಗೆ ಹೋಗಬಹುದು" ಎಂದಿದ್ದಾರೆ ಆರ್ ಅಶ್ವಿನ್.
"ನಿಮ್ಮ ಖಾತೆಯಲ್ಲಿ ಉತ್ತಮ ಪ್ರಮಾಣದ ವಿಕೆಟ್ಗಳು ಇದ್ದಾಗ ಉತ್ತಮ ಭಾವನೆ ಉಂಟಾಗುತ್ತದೆ. ಹೆಚ್ಚು ಬೌಲಿಂಗ್ ಮಾಡದಿದ್ದರೂ ಅದು ನಿಮಗೆ ಸಮಾಧಾನ ನೀಡುತ್ತದೆ. ಇಂದು ನಾನು ಸ್ವಲ್ಪ ಬೇಗನೆ ಹಾಗೂ ಸಂತೋಷವಾಗಿ ಬೆಡ್ಗೆ ಹೋಗುತ್ತೇನೆ" ಎಂದಿದ್ದಾರೆ ಟೀಮ್ ಇಂಡಿಯಾದ ಅನುಭವಿ ಬೌಲರ್ ಆರ್ ಅಶ್ವಿನ್.
ಟೆಸ್ಟ್ನಲ್ಲಿ ಇದು ಆರ್ ಅಶ್ವಿನ್ ಅವರ 32ನೇ ಐದು ವಿಕೆಟ್ಗಳ ಗೊಂಚಲಾಗಿದೆ. ಆದರೆ ತವರಿನಲ್ಲಿ ಇದು ಅವರ 26ನೇಯದು. ಈ ಮೂಲಕ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಭಾರತದ ನೆಲದಲ್ಲಿ ಅನಿಲ್ ಕುಂಬ್ಳೆ 25 ಬಾರಿ ಐದಕ್ಕೂ ಹೆಚ್ಚು ವಿಕೆಟ್ ಕಿತ್ತು ಮಿಂಚಿದ್ದರು. ಈ ದಾಖಲೆ ಈಗ ಅಶ್ವಿನ್ ಪಾಲಾಗಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಉಸ್ಮಾನ್ ಖವಾಜಾ 180 ರನ್ಗಳಿದರೆ ಕ್ಯಾಮರೂನ್ ಗ್ರೀನ್ 114 ರನ್ಗಳಿಸಿ ಭರ್ಜರಿ ಶತಕಗಳ ಮೂಲಕ ಆಸ್ಟ್ರೇಲಿಯಾದ ಬೃಹತ್ ಮೊತ್ತಕ್ಕೆ ಕಾರಣವಾದರು. ಈ ಇಬ್ಬರ ಶತಕದ ನೆರವಿನಿಂದಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 480 ರನ್ಗಳಿಸಿದೆ.
ಇನ್ನು ನಾಲ್ಕು ಪಂದ್ಯಗಳ ಈ ಸರಣಿಯಲ್ಲಿ ಟೀಮ್ ಇಂಡಿಯಾ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದು ಮುನ್ನಡೆ ಸಾಧಿಸಿತ್ತು. ಆದರೆ ಇಂದೋರ್ನ್ಲಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಈ ಸರಣಿಯ ಅಂತರವನ್ನು 1-2ಕ್ಕೆ ತಗ್ಗಿಸಿಕೊಂಡಿತ್ತು. ಇದೀಗ ಅಂತಿಮ ಪಂದ್ಯದಲ್ಲಿಯೂ ಹಿಡಿತ ಸಾಧಿಸಿರುವ ಆಸ್ಟ್ರೇಲಿಯಾ ಪಂದ್ಯವನ್ನು ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಈ ಮೂಲಕ ಸರಣಿಯನ್ನು ಸಮಬಲಗೊಳಿಸುವ ಪ್ರಯತ್ನದಲ್ಲಿದೆ.
ಇನ್ನು ಈ ಪಂದ್ಯವನ್ನು ಗೆದ್ದರೆ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಸ್ಥಾನವನ್ನು ಪಡೆಯಲಿದೆ. ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದ್ದು ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನು ಯಾವ ರೀತಿಯಲ್ಲಿ ಎದುರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.