
ವಿಶಾಖಪಟ್ನಂ, ಫೆಬ್ರವರಿ 23: ಭಾರತದ ಮಾಜಿ ಕ್ರಿಕೆಟಿಗ, ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಅವರು ಭಾರತದ ಆರಂಭಿಕ ಆಟಗಾರನಾಗಿ ಕೆಎಲ್ ರಾಹುಲ್ ಬದಲಿಗೆ ರಿಷಬ್ ಪಂತ್ಗೆ ಅವಕಾಶ ನೀಡಬಹುದು ಎಂದು ಸಲಹೆ ನೀಡಿದ್ದಾರೆ. ಭಜ್ಜಿ ಹೇಳುವಂತೆ ಆರಂಭಿಕ ಆಟಗಾರ ಸ್ಥಾನಕ್ಕೆ ತಾನು ಸೂಕ್ತ ಎನ್ನುವುದನ್ನು ಸಾಬೀತುಪಡಿಸಲು ರಾಹುಲ್ಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿ ಕೊನೆಯ ಅವಕಾಶ.
ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಅನೇಕ ಪ್ರಮುಖ ಪಂದ್ಯಗಳಲ್ಲಿ ಆರಂಭಿಕ ಆಟಗಾರರಾಗಿ ಇಳಿಯುವ ಅವಕಾಶ ನೀಡಲಾಗಿತ್ತು. ಆದರೆ ರಾಹುಲ್ ಅವಕಾಶವನ್ನು ಬಳಸಿಕೊಂಡು ಆಯ್ಕೆ ಸಮಿತಿ ಮೇಲೆ ಪ್ರಭಾವ ಬೀರುವ ಬದಲು ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇದೇ ಕಾರಣಕ್ಕೆ ಹರ್ಭಜನ್ ಅವರು ಈ ಸರಣಿಯಲ್ಲಾದರೂ ಉತ್ತಮ ಪ್ರದರ್ಶನ ನೀಡುವಂತೆ ರಾಹುಲ್ ಅವರನ್ನು ಎಚ್ಚರಿಸಿದ್ದಾರೆ.
'ಇದು (ಭಾರತ vs ಆಸ್ಟ್ರೇಲಿಯಾ ಸರಣಿ) ರಿಷಬ್ ಪಂತ್ಗೆ ಆರಂಭಿಕರಾಗಿ ನೆಲೆಯೂರಲು ಒಂದು ಉತ್ತಮ ಅವಕಾಶ. ವಿಶ್ವಕಪ್ ಮುಂದಿರುವುದರಿಂದ ಕೆಎಲ್ ರಾಹುಲ್ಗೂ ಇದು ಪ್ರಮುಖ ಸರಣಿಯೆ. ರಾಹುಲ್ ಅವರು ಈ ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರೆ ಮುಂದೆ ರಾಹುಲ್ ಸ್ಥಾನವನ್ನು ಪಂತ್ ಅವರಿಸಿಕೊಂಡರೆ ಅದರಲ್ಲಿ ಅಚ್ಚರಿಯಿಲ್ಲ' ಎಂದು 'ಆಜ್ ತಕ್' ಜೊತೆ ಮಾತನಾಡುತ್ತ ಭಜ್ಜಿ ಅಭಿಪ್ರಾಯಿಸಿದ್ದಾರೆ (ಐಪಿಎಲ್ಗಾಗಿ ಡೆಲ್ಲಿ ಕ್ಯಾಪಿಟಲ್ಸ್ನ ಹೊಸ ಜೆರ್ಸಿಯೊಂದಿಗೆ ಪಂತ್).
'ಆಸ್ಟ್ರೇಲಿಯಾ ವಿರುದ್ಧದ ಸರಣಿ ರಾಹುಲ್-ಪಂತ್ ಇಬ್ಬರಿಗೂ ಪ್ರಭಾವ ಬೀರುವ ನೆಲೆಯಲ್ಲಿ ಮಹತ್ವದ್ದು. ಅದನ್ನು ಇಬ್ಬರೂ ಬಳಸಿಕೊಳ್ಳಲು ಪ್ರಯತ್ನಿಸಬೇಕು' ಎಂದು ಹರ್ಭಜನ್ ತಿಳಿಸಿದ್ದಾರೆ. ಭಾರತ-ಆಸ್ಟ್ರೇಲಿಯಾ ಟಿ20 ಸರಣಿ ಫೆಬ್ರವರಿ 24ರಿಂದ ಆರಂಭಗೊಳ್ಳಲಿದೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಎರಡು ಟಿ20, ಐದು ಏಕದಿನ ಪಂದ್ಯಗಳನ್ನು ಎದುರುಗೊಳ್ಳಲಿವೆ.