
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ನಿರ್ವಹಣಾ ಸಮಿತಿ ವೇಗಿ ಶಾರ್ದೂಲ್ ಠಾಕೂರ್ಗೆ ಆದ್ಯತೆ ನೀಡುವ ಸಾಧ್ಯತೆಯಿದೆ. ಗಾಯಕ್ಕೀಡಾಗಿರುವ ವೇಗಿ ಉಮೇಶ್ ಯಾದವ್ ಬದಲಿಗೆ ಸಿಡ್ನಿಯಲ್ಲಿ ನಡೆಯುವ ತೃತೀಯ ಟೆಸ್ಟ್ನಲ್ಲಿ ಶಾರ್ದೂಲ್ ಕಣಕ್ಕಿಳಿಯುವ ನಿರೀಕ್ಷೆಯಿದೆ.
ಕಾಲಿನ ಸ್ನಾಯು ಬೇನೆಗೆ ತುತ್ತಾಗಿರುವ ಉಮೇಶ್ ಯಾದವ್ ಅವರು ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದ ಹೊರ ಬಿದ್ದಿದ್ದಾರೆ. ಅವರ ಬದಲಿಗೆ ತಂಡದಲ್ಲಿ ಟಿ ನಟರಾಜನ್ ಅವರನ್ನು ಹೆಸರಿಸಲಾಗಿದೆ. ಆದರೆ ಎಡಗೈ ವೇಗಿ ನಟರಾಜನ್ಗಿಂತ ಅನುಭವಿ ಶಾರ್ದೂಲ್ ಠಾಕೂರ್ಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.
ಆಸ್ಟ್ರೇಲಿಯಾ ವಿರುದ್ಧದ ನಿಯಮಿತ ಓವರ್ಗಳ ಕ್ರಿಕೆಟ್ನಲ್ಲಿ ಶಾರ್ದೂಲ್ ಠಾಕೂರ್ ಮತ್ತು ಟಿ ನಟರಾಜನ್ ಇಬ್ಬರೂ ಉತ್ತಮ ಪ್ರದರ್ಶನ ನೀಡಿದ್ದರು. ಆರಂಭದಲ್ಲಿ ಸಿಡ್ನಿ ಟೆಸ್ಟ್ನಲ್ಲಿ ನಟರಾಜನ್ ಟೆಸ್ಟ್ಗೆ ಪಾದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಠಾಕೂರ್ ಆಡುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.
ಮೂರನೇ ಟೆಸ್ಟ್ನಲ್ಲಿ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಆಡಲಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ ಕೂಡ ಕಣಕ್ಕಿಳಿಯುವ ಸಾಧ್ಯತೆಯಿದೆ. ಮೂರನೇ ಟೆಸ್ಟ್ ಪಂದ್ಯದಿಂದ ಮಯಾಂಕ್ ಅಗರ್ವಾಲ್ ಹೊರ ಬಿದ್ದಿದ್ದಾರೆ. ಮೂರನೇ ಟೆಸ್ಟ್ ಡಿಸೆಂಬರ್ 7ರಂದು 5 AMಗೆ ಆರಂಭಗೊಳ್ಳಲಿದೆ.