
ದುಬೈ: ತಮಿಳು ನಾಡಿನ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಮುಂಬರಲಿರುವ ಆಸ್ಟ್ರೇಲಿಯಾ ಪ್ರವಾಸ ಸರಣಿಯಿಂದ ಹೊರ ಬಿದ್ದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಗಾಗಿ ವರುಣ್ ಅವರನ್ನು ಹೆಸರಿಸಲಾಗಿತ್ತು. ಆದರೆ ಭುಜದ ನೋವಿಗೆ ತುತ್ತಾಗಿರುವ ವರುಣ್ ಟಿ20ಐ ತಂಡದಿಂದ ಹೊರಗುಳಿದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಗಮನ ಸೆಳೆದಿದ್ದ ವರುಣ್ ಚಕ್ರವರ್ತಿ ಬದಲಿಗೆ ಸನ್ ರೈಸರ್ಸ್ ಹೈದರಾಬಾದ್ನ ಎಡಗೈ ವೇಗಿ ಟಿ ನಟರಾಜನ್ ಅವರಿಗೆ ಸ್ಥಾನ ನೀಡಲಾಗಿದೆ. ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿ ನವೆಂಬರ್-ಜನವರಿ ವರೆಗೆ ನಡೆಯಲಿದೆ.
ವರುಣ್ ಚಕ್ರವರ್ತಿ ಮತ್ತು ಟಿ ನಟರಾಜನ್ ಇಬ್ಬರಿಗೂ ಟೀಮ್ ಇಂಡಿಯಾಕ್ಕೆ ಇದು ಚೊಚ್ಚಲ ಕರೆಯಾಗಿತ್ತು. ಗಾಯದ ಸಮಸ್ಯೆ ವರುಣ್ ಚಕ್ರವರ್ತಿಯ ಅಂತಾರಾಷ್ಟ್ರೀಯ ಪಾದಾರ್ಪಣೆಯ ಆಸೆಗೆ ತಣ್ಣೀರೆರಚಿದೆ. 2020ರಲ್ಲಿ 14 ಐಪಿಎಲ್ ಇನ್ನಿಂಗ್ಸ್ಗಳಲ್ಲಿ ಆಡಿದ್ದ ವರುಣ್ 18 ವಿಕೆಟ್ ಪಡೆದಿದ್ದರು.
ಸನ್ ರೈಸರ್ಸ್ ಹೈದರಾಬಾದ್ನಲ್ಲಿ ಡೆತ್ ಬೌಲಿಂಗ್ನಲ್ಲಿ ಟಿ ನಟರಾಜನ್ ಗಮನ ಸೆಳೆದಿದ್ದರು. ಐಪಿಎಲ್ನಲ್ಲಿ 16 ಇನ್ನಿಂಗ್ಸ್ಗಳನ್ನಾಡಿದ್ದ ನಟರಾಜನ್ 16 ವಿಕೆಟ್ಗಳನ್ನು ಪಡೆದಿದ್ದಾರೆ. ಭಾರತ-ಆಸ್ಟ್ರೇಲಿಯಾ ಸರಣಿ ಮೂರು ಟಿ20ಐ, ಮೂರು ಏಕದಿನ ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ.