
ಸಂಘಟಿತ ದಾಳಿ
ಭಾರತ ಚುಟುಕು ಕ್ರಿಕೆಟ್ನಲ್ಲಿ ಸಾಕಷ್ಟು ಪಳಗಿದೆ ಎಂಬುದರಲ್ಲಿ ಅನುಮಾನವಿಲ್ಲ. ತಂಡದ ಎಲ್ಲಾ ಸದಸ್ಯರಿಂದಲೂ ಅತ್ಯುತ್ತಮ ಪ್ರದರ್ಶನ ವ್ಯಕ್ತವಾಗುತ್ತಿದೆ. ಬೌಲಿಂಗ್ ವಿಭಾಗ ವೈಫಲ್ಯವನ್ನು ಅನುಭವಿಸಿದರೆ ಅದನ್ನು ಬ್ಯಾಟಿಂಗ್ ಬಳಗ ಸರಿಪಡಿಸಿಕೊಳ್ಳಲು ಯಶಸ್ವಿಯಾಗುತ್ತಿದೆ. ಇದು ತಂಡದ ಯಶಸ್ಸಿಗೆ ಕಾರಣವಾಗಿದೆ.

ಒತ್ತಡದ ಸಂದರ್ಭದಲ್ಲಿ ಅದ್ಭುತ ಆಟ
ಟೀಮ್ ಇಂಡಿಯಾ ಒತ್ತಡದ ಸಂದರ್ಭದಲ್ಲಿ ಅದ್ಭುತವಾದ ಆಟವನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಗುತ್ತಿದೆ. ಮೊದಲ ಟಿ20 ಪಂದ್ಯದಲ್ಲಿ ಬೌಲಿಂಗ್ ವಿಭಾಗ ಈ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿತ್ತು. ಎರಡನೇ ಟಿ20ಯಲ್ಲಿ ಆಸ್ಟ್ರೇಲಿಯಾ ನೀಡಿದ್ದ ಬೃಹತ್ ಗುರಿಯನ್ನು ಅಂತಿಮ ಓವರ್ನಲ್ಲಿ ಯಶಸ್ವಿಯಾಗಿ ಬೆನ್ನಟ್ಟಿದೆ. ಈ ಮೂಲಕ ಎರಡು ಪಂದ್ಯದಲ್ಲೂ ರೋಚಕ ಗೆಲುವಿಗೆ ಕಾರಣವಾಗಿದೆ.

ಟೀಮ್ ಇಂಡಿಯಾದಲ್ಲಿ ಫಿನಿಷರ್ಗಳು
ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ನಂತರ ಭಾರತ ಕ್ರಿಕೆಟ್ ತಂಡಕ್ಕೆ ವಿಕೆಟ್ ಕೀಪರ್ ಜೊತೆಗೆ ಫಿನಿಷರ್ ಸ್ಥಾನವನ್ನು ಯಾರು ತುಂಬಬಲ್ಲರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಏಕದಿನ ಕ್ರಿಕೆಟ್ನಲ್ಲಿ ಈ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲವಾದರೂ ಚುಟುಕು ಕ್ರಿಕೆಟ್ನಲ್ಲಿ ಇಬ್ಬರು ಯಶಸ್ವಿಯಾಗಿ ಆ ಕರ್ತವ್ಯವನ್ನು ಪೂರೈಸುತ್ತಿದ್ದಾರೆ. ರವೀಂದ್ರ ಜಡೇಜಾ ಮೊದಲ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರೆ ಎರಡನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗೆಲುವನ್ನು ದಕ್ಕಿಸಿದರು.

ಐಪಿಎಲ್ ಅನುಭವ
ಭಾರತೀಯ ಕ್ರಿಕೆಟ್ ತಂಡಕ್ಕೆ ಐಪಿಎಲ್ನಲ್ಲಿ ಆಡಿದ ಅನುಭವ ನಿಜಕ್ಕೂ ಆಸ್ಟ್ರೇಲಿಯಾ ನೆಲದಲ್ಲಿ ಫಲ ನೀಡಿದೆ. ಎದುರಾಳಿಯ ತಂತ್ರಗಾರಿಕೆಗೆ ಪ್ರತಿಯಾಗಿ ಪ್ರತಿತಂತ್ರವನ್ನು ಹೆಣೆಯುವುದರ ಜೊತೆಗೆ ಆಟಗಾರರಿಗೆ ಹೆಚ್ಚಿನ ಆತ್ಮವಿಶ್ವಾಸವನ್ನು ಮೂಡಿಸಿದೆ. ಇದು ಅಂತಿಮ ಏಕದಿನ ಪಂದ್ಯದ ಪ್ರದರ್ಶನದಲ್ಲಿ ವ್ಯಕ್ತವಾಗಿದೆ.

ರೋಹಿತ್-ಬೂಮ್ರಾ- ಶಮಿ ಇಲ್ಲದೆಯೂ ಗೆಲುವು
ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್ಗಳ ಸಂಪೂರ್ಣ ಸರಣಿಗೆ ರೋಹಿತ್ ಶರ್ಮಾ ಅವರ ಸೇವೆಯನ್ನು ಕಳೆದುಕೊಂಡಿದೆ. ಅದರ ಜೊತೆಗೆ ಎರಡನೇ ಟಿ20 ಭಾರತ ಅನುಭವಿ ಬೌಲರ್ಗಳಾದ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾಗೆ ಕೂಡ ವಿಶ್ರಾಂತಿಯನ್ನು ನೀಡಿತ್ತು. ಈ ಪ್ರಮುಖ ಆಟಗಾರರ ಅಲಭ್ಯತೆಯಲ್ಲೂ ಭಾರತ ಗೆಲುವು ಸಾಧಿಸಲು ಯಶಸ್ವಿಯಾಗಿದೆ.


Click it and Unblock the Notifications
