ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟಿ20 ಪಂದ್ಯವು ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 221 ರನ್ಗಳ ಬೃಹತ್ ರನ್ ಕಲೆ ಹಾಕಿದೆ. ಟೀಮ್ ಇಂಡಿಯಾ ಪರ ಯುವ ಸ್ಟಾರ್ ಆಟಗಾರರು ಅಬ್ಬರಿಸಿದ್ದಾರೆ.
ಬಾಂಗ್ಲಾದೇಶ ಬೌಲರ್ಸ್ಗೆ ಅಡ್ಡಾದಿಡ್ಡಿ ಹೊಡೆದ ರಿಂಕು ಸಿಂಗ್ ಮತ್ತು ನಿತೀಶ್ಕುಮಾರ್ ರೆಡ್ಡಿ ಜೋಡಿ ಶತಕದ ಜೊತೆಯಾಟವಾಡಿದರು. ಇದರ ಫಲವಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 221 ರನ್ಗಳನ್ನು ಗಳಿಸಿದೆ. ಇದೀಗ ಬಾಂಗ್ಲಾದೇಶ ಗೆಲುವಿಗೆ 222 ರನ್ಗಳ ಅವಶ್ಯಕತೆಯಿದೆ.

ಮೊದಲ ಟಾಸ್ ಗೆದ್ದ ಬಾಂಗ್ಲಾದೇಶದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಅವರು ಭಾರತ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಅದರಂತೆ ಪವರ್ ಪ್ಲೇನಲ್ಲಿ ಬಾಂಗ್ಲಾದೇಶ ಬೌಲರ್ಸ್ ಪ್ರಾಬಲ್ಯ ಸಾಧಿಸಿದರು. ಭಾರತದ ಮೂವರು ಟಾಪ್ ಆರ್ಡರ್ ಬ್ಯಾಟರ್ಗಳಾದ ಸಂಜು ಸಸ್ಸಾಮನ್ (10), ಅಭಿಷೇಕ್ ಶರ್ಮಾ (15) ಮತ್ತು ನಾಯಕ ಸೂರ್ಯಕುಮಾರ್ ಯಾದವ್ (8) ಅವರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ.
ಆ ಬಳಿಕ ಒಂದಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ರಿಂಕು ಸಿಂಗ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಮಧ್ಯಮ ಕ್ರಮಾಂಕದಲ್ಲಿ ಈ ಜೋಡಿ ಬಾಂಗ್ಲಾದೇಶದ ಎಲ್ಲಾ ಲೆಕ್ಕಚಾರವನ್ನು ಉಲ್ಟಾ ಮಾಡಿದರು. ಬಾಂಗ್ಲಾದೇಶ ಬೌಲರ್ಸ್ಗೆ ಬೆವರಿಳಿಸಿದ ಈ ಜೋಡಿ ಸಂಕಷ್ಟದಲ್ಲಿದ್ದ ಭಾರತವನ್ನು ಮೇಲೆತ್ತಿದರು. ನಿತೀಶ್ 34 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್ ನೆರವಿನಿಂದ 74 ರನ್ ಬಾರಿಸಿ ಮಿಂಚಿದರು. ಇದು ಟೀಮ್ ಇಂಡಿಯಾ ಪರ ಗಳಿಸಿ ಚೊಚ್ಚಲ ಅರ್ಧಶತಕವಾಗಿದೆ. ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮಾಡಿದ ರಿಂಕು ಸಿಂಗ್ 29 ಎಸೆತಗಳಲ್ಲಿ 5 ಬೌಂಡರಿ ಹಾಗು 3 ಸಿಕ್ಸರ್ಗಳೊಂದಿಗೆ 53 ರನ್ ಹೊಡೆದರು.
ನಿತೀಶ್ ಮತ್ತು ರಿಂಕು ಇಬ್ಬರು ಔಟಾದ ನಂತರ ಹಾರ್ದಿಕ್ ಪಾಂಡ್ಯ ಕೂಡ 32 ರನ್ಗಳ ಕೊಡುಗೆ ನೀಡಿ ವಿಕೆಟ್ ಕಳೆದುಕೊಂಡರು. ರಿಯಾನ್ 15 ರನ್ ಹೊಡೆದು ಔಟಾದರೆ, ವರುಣ್ ಚಕ್ರವರ್ತಿ ಬಂದ ದಾರಿಗೆ ಸುಂಕವಿಲ್ಲದಂತೆ ಶೂನ್ಯಕ್ಕೆ ಆಟ ನಿಲ್ಲಿಸಿ ಕ್ರೀಸ್ನಿಂದ ನಿರ್ಗಮಿಸಿದರು. ಅರ್ಷದೀಪ್ ಸಿಂಗ್ 6 ರನ್ ಹೊಡೆದ ಔಟಾದರು.
ಬಾಂಗ್ಲಾದೇಶ ಪರ ರಿಶಾದ್ ಹೊಸೈನ್ 3 ವಿಕೆಟ್ ಪಡೆದು ಮಿಂಚಿದರೆ, ತಸ್ಕಿನ್ ಅಹ್ಮದ್, ತಂಝಿಮ್ ಹಸನ್ ಸಾಕಿಬ್ ಮತ್ತು ಮುಸ್ತಫಿಜುರ್ ರೆಹಮಾನ್ ತಲಾ 2 ವಿಕೆಟ್ ಉರುಳಿಸಿದರು.