ದುಬೈ, ಸೆಪ್ಟೆಂಬರ್ 28: ಏಷ್ಯಾ ಕಪ್ 2018ರ ಫೈನಲ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ 3 ವಿಕೆಟ್ ರೋಚಕ ಜಯ ಸಾಧಿಸುವ ಮೂಲಕ ಭಾರತ ತಂಡ ಚಾಂಪಿಯನ್ಸ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿದೆ. ಓವರ್ ಮುಕ್ತಾಯದ ಹೊತ್ತಿಗೆ ಪಂದ್ಯ ರೋಚಕ ಹಂತಕ್ಕೆ ತಲುಪಿತ್ತು. ಆದರೆ ಅಂತಿಮವಾಗಿ ರೋಹಿತ್ ಶರ್ಮಾ ಬಳಗ ಗೆಲುವಿನ ನಗು ಬೀರಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಟಟ್ಟ ಬಾಂಗ್ಲಾದೇಶ ಆರಂಭಿಕ ಬ್ಯಾಟ್ಸ್ಮನ್ ಲಿಟನ್ ದಾಸ್ ಆಕರ್ಷಕ ಶತಕ (121 ರನ್), ಮೆಹಿದಿ ಹಸನ್ 32, ಸೌಮ್ಯ ಸರ್ಕಾರ್ 33 ರನ್ ನೆರವಿನೊಂದಿಗೆ 48.3 ಓವರ್ ಗೆ ಎಲ್ಲಾ ವಿಕೆಟ್ ಕಳೆದು 222 ರನ್ ಪೇರಿಸಿತ್ತು.
ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಬಾಂಗ್ಲಾ ನೀಡಿರುವ 223 ರನ್ ಗುರಿ ಬೆನ್ನಟ್ಟಿದ ಭಾರತ ಆರಂಭಿಕ ಅಘಾತವನ್ನು ಅನುಭವಿಸಿತು. ಶಿಖರ್ ಧವನ್ 15 ರನ್ ನೊಂದಿಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಅನಂತರ ರೋಹಿತ್ ಶರ್ಮಾ (48), ಅಂಬಾಟಿ ರಾಯುಡು (2), ದಿನೇಶ್ ಕಾರ್ತಿಕ್ (37), ಎಂಎಸ್ ಧೋನಿ (36) ನಿರ್ಗಮಿಸಿದ್ದರಿಂದ ಭಾರತ ಸೋಲಿನ ಭೀತಿಯಲ್ಲಿತ್ತು.
ಅಂತಿಮ ಓವರ್ ನಲ್ಲಿ ಭಾರತಕ್ಕೆ 6 ರನ್ ನ ಅವಶ್ಯಕತೆಯಿತ್ತು. ಅಂತಿಮವಾಗಿ ಭಾರತ 50 ಓವರ್ ಗೆ 7 ವಿಕೆಟ್ ಕಳೆದು ರೋಚಕ ರೀತಿಯಲ್ಲಿ 223 ರನ್ ಪೇರಿಸಿ ಜಯ ತನ್ನದಾಗಿಸಿಕೊಂಡಿತು. 2016ರಲ್ಲೂ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇಲ್ಲಿಗೆ ಭಾರತ ಇದು ಏಳನೇ ಬಾರಿಗೆ ಏಷ್ಯಾಕಪ್ ಟ್ರೋಫಿ ಎತ್ತಿದಂತಾಗಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಅಂಬಾಟಿ ರಾಯುಡು, ಎಂಎಸ್ ಧೋನಿ (ವಿ.ಕೆ), ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಯುಯುವೇಂದ್ರ ಚಾಹಲ್, ಜಸ್ ಪ್ರೀತ್ ಬೂಮ್ರಾ.
ಬಾಂಗ್ಲಾದೇಶ ತಂಡ: ಲಿಟಾನ್ ದಾಸ್ (ವಿಕೆ), ಸೌಮ್ಯ ಸರ್ಕಾರ್, ಮೊಹಮ್ಮದ್ ಮಿಥುನ್, ಮುಷ್ಫಿಕರ್ ರಹೀಮ್, ಇಮ್ರುಲ್ ಕೇಸ್, ಮಹಮುದುಲ್ಲಾ, ಮೆಹಿದ್ ಹಸನ್, ಮಸ್ರಾಫೆ ಮೊರ್ತಾಜೋ (ಸಿ), ನಜ್ಮುಲ್ ಇಸ್ಲಾಂ, ರುಬೆಲ್ ಹುಸೇನ್, ಮುಸ್ತಾಫಿಜರ್ ರಹಮಾನ್.