
ಭಾರತ ಹಾಗೂ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ 5 ರನ್ಗಳ ಅಂತರದಿಂದ ಸೋಲು ಅನುಭವಿಸಿದೆ. ಈ ಮೂಲಕ ಈ ಸರಣಿಯನ್ನು ಟೀಮ್ ಇಂಡಿಯಾ ಕಳೆದುಕೊಂಡಿದ್ದು ಮುಖಭಂಗ ಅನುಭವಿಸಿದೆ. ಈ ಪಂದ್ಯದಲ್ಲಿ ಕೈಬೆರಳಿಗೆ ಗಾಯವಾಗಿದ್ದರೂ ಅಂರಿಮ ಹಂತದಲ್ಲಿ ಬ್ಯಾಟಿಂಗ್ಗೆ ಇಳಿದ ನಾಯಕ ರೋಹಿತ್ ಶರ್ಮಾ ಅದ್ಭುತ ಹೋರಾಟ ನಿಡಿದರಾದರೂ ಪಂದ್ಯವನ್ನು ಗೆಲ್ಲು ಸಾಧ್ಯವಾಗಲಿಲ್ಲ.
ಈ ಸೋಲಿನ ಬಳಿ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಬದಲಾಗಿ ಮೊದಲೇ ಬ್ಯಾಟಿಂಗ್ಗೆ ಇಳಿದಿದ್ದರೆ ಟೀಮ್ ಇಂಡಿಯಾ ಗೆಲ್ಲುವ ಸಾಧ್ಯತೆಯಿತ್ತು ಎಂದಿದ್ದಾರೆ. ಈ ನಿರ್ಧಾರವನ್ನು ಮೊದಲೇ ತೆಗೆದುಕೊಂಡಿದ್ದರೆ ಭಾರತಕ್ಕೆ ಈ ಪಂದ್ಯವನ್ನು ಗೆಲ್ಲುವ ಅವಕಾಶವಿತ್ತು ಎಂದಿದ್ದಾರೆ ಸುನಿಲ್ ಗವಾಸ್ಕರ್.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಶ್ರೇಯಸ್ ಐಯ್ಯರ್, ಅಕ್ಷರ್ ಪಟೇಲ್ ಹಾಗೂ ರೋಹಿತ್ ಶರ್ಮಾ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. 65 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಜೊತೆಯಾದ ಶ್ರೇಯಸ್ ಐಯ್ಯರ್ ಹಾಘೂ ಅಕ್ಷರ್ ಪಟೇಲ್ ಶತಕದ ಜೊತೆಯಾಟವನ್ನು ನೀಡಿದರು. ಬಳಿಕ ಅಂತಿಮ ಹಂತದಲ್ಲಿ ವಿಕೆಟ್ಗಳನ್ನು ಕಳೆದುಕೊಂಡಾಗ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ಗೆ ಇಳಿದು ಕೇವಲ 28 ಎಸೆತಗಳಲ್ಲಿ 51 ರನ್ಗಳ ಕೊಡುಗೆ ನೀಡಿದರು. ಹಾಗಿದ್ದರೂ ಟೀಮ್ ಇಂಡಿಯಾ ಈ ಪಂದ್ಯದಲ್ಲಿ 5 ರನ್ಗಳ ಅಂತರದ ಸೋಲು ಅನುಭವಿಸಬೇಕಾಯಿತು.
"ಈ ಸಂದರ್ಭದಲ್ಲಿ ನಾವು ರೋಹಿತ್ ಶರ್ಮಾ ಮೊದಲೇ ಯಾಕೆ ಬ್ಯಾಟಿಂಗ್ಗೆ ಇಳಿಯಲಿಲ್ಲ ಎಂದು ಪ್ರಶ್ನಿಸಬೇಕಾಗುತ್ತದೆ. ಅವರು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಯಬಲ್ಲರಾದರೆ 7ನೇ ಕ್ರಮಾಂಕದಲ್ಲೂ ಇಳಿಯಬಹುದಾಗಿತ್ತು" ಎಂದಿದ್ದಾರೆ ಸುನಿಲ್ ಗವಾಸ್ಕರ್.
ಇನ್ನು ಮುಂದುವರಿದು ಮಾತನಾಡಿದ ಅವರು "ರೋಹಿತ್ ಶರ್ಮಾ ಬ್ಯಾಟಿಂಗ್ಗೆ ಇಳಿಯುತ್ತಾರೆ ಎಂಬುದು ತಿಳಿದಿದ್ದರೆ ಅಕ್ಷರ್ ಪಟೇಲ್ ಬ್ಯಾಟಿಂಗ್ನಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದ್ದರು. ಶಾರ್ದೂಲ್ ಠಾಕೂರ್ ಹಾಗೂ ದೀಪಕ್ ಚಾಹರ್ ಬ್ಯಾಟಿಂಗ್ಗೆ ಆಗಮಿಸಿದನ್ನು ಕಂಡ ಅಕ್ಷರ್ ಪಟೇಲ್ ರೋಹಿತ್ ಶರ್ಮಾ ಕಣಕ್ಕಿಳಿಯುವುದಿಲ್ಲ ಎಂದು ಭಾವಿಸಿ ಒತ್ತಡದಲ್ಲಿ ಅನಗತ್ಯ ಹೊಡೆತವನ್ನು ಬಾರಿಸಿ ವಿಕೆಟ್ ಕಳೆದುಕೊಂಡಿದ್ದಾರೆ" ಎಂದು ಸುನಿಲ್ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದಾರೆ.