ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಕಾನ್ಪುರದ ಐತಿಹಾಸಿಕ ಗ್ರೀನ್ಪಾರ್ಕ್ ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 1 ರ ನಡುವೆ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (ಯುಪಿಸಿಎ) ವಿಶೇಷ ವ್ಯವಸ್ಥೆ ಮಾಡಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು 2000 ಸಾವಿರ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ ಶಾಲಾ ಮಕ್ಕಳಿಗೆ ಊಟ, ನೀರು ಉಚಿತವಾಗಿ ನೀಡಲಾಗುವುದು.

ಗ್ರೀನ್ಪಾರ್ಕ್ ಸ್ಟೇಡಿಯಂ ಸುಮಾರು 20 ಸಾವಿರ ಪ್ರೇಕ್ಷಕರಿಗೆ ಆಸನವನ್ನು ಹೊಂದಿದೆ. ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು, ಕಾನ್ಪುರ ಕ್ರಿಕೆಟ್ ನಿರ್ದೇಶಕರು ಮತ್ತು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ ಮೂಲಕ ಎಲ್ಲಾ ರೀತಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುಪಿಸಿಎ ನಿರ್ದೇಶಕ ಡಾ.ಸಂಜಯ್ ಕಪೂರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. 'ಭಾರತ ಮತ್ತು ಬಾಂಗ್ಲಾದೇಶ ಟೆಸ್ಟ್ ಪಂದ್ಯವನ್ನು 20 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ವೀಕ್ಷಿಸಬಹುದು. ಸ್ಟೇಡಿಯಂ ಒಳಗೆ ವಿಶಾಲವಾದ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಬಿಸಿಲಿನ ಬೇಗೆಯಲ್ಲಿ ಪ್ರೇಕ್ಷಕರು ಸುಲಭವಾಗಿ ಸ್ಟೇಡಿಯಂ ಒಳಗೆ ಬಂದು ತಮ್ಮ ವಾಹನಗಳನ್ನು ನಿಲ್ಲಿಸಿ ಪಂದ್ಯ ವೀಕ್ಷಿಸಬಹುದು. ಇಷ್ಟೇ ಅಲ್ಲ, ಯುಪಿಸಿಎ ಮಾಡಿರುವ ವಿಶೇಷ ಯೋಜನೆಯ ಅಡಿಯಲ್ಲಿ ಎರಡು ಸಾವಿರ ಮಕ್ಕಳಿಗೆ ಉಚಿತವಾಗಿ ಪಂದ್ಯವನ್ನು ತೋರಿಸಲಾಗುತ್ತಿದೆ. ಇದರೊಂದಿಗೆ ಅವರಿಗೆ ಉಚಿತ ಆಹಾರ ಮತ್ತು ನೀರಿನ ವ್ಯವಸ್ಥೆ ಇರುತ್ತದೆ' ಎಂದು ಹೇಳಿದ್ದಾರೆ.
ಸ್ಟೇಡಿಯಂ ಒಳಗೆ, ಪ್ರೇಕ್ಷಕರು ಪಿಜ್ಜಾದಿಂದ ಹಿಡಿದು ಚೋಲೆ ಕುಲ್ಚಾ, ಬನ್ ಬಟರ್ ಮತ್ತು ಕಾನ್ಪುರದ ವಿಶೇಷ ತಿಂಡಿಗಳನ್ನು ಸವಿಯಲು ಫುಡ್ ಕೌಂಟರ್ಗಳನ್ನು ತೆರೆಯಲಾಗುತ್ತಿದೆ. ಈ ಎಲ್ಲಾ ತಿಂಡಿಗಳನ್ನು ಪ್ರೇಕ್ಷಕರು ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ. ಜೊತೆಗೆ ಸ್ಟೇಡಿಯಂನ ಎಲ್ಲಾ ಗೇಟ್ಗಳಲ್ಲಿ ವಿಶೇಷ ಸೆಲ್ಫಿ ಪಾಯಿಂಟ್ಗಳನ್ನು ಸಹ ಮಾಡಲಾಗಿದೆ. ಪಂದ್ಯ ವೀಕ್ಷಿಸಲು ಬರುವ ಪ್ರೇಕ್ಷಕರು ಸೆಲ್ಫಿ ತೆಗೆಯಲೂ ಅವಕಾಶ ಕಲ್ಪಿಸಲಾಗಿದೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಐತಿಹಾಸಿಕ ಗೆಲುವಿನ ಬಳಿಕ ಟೀಮ್ ಇಂಡಿಯಾದಲ್ಲಿ ಉತ್ಸಾಹ ಹೆಚ್ಚಾಗಿದೆ. ಈಗ ಎರಡನೇ ಟೆಸ್ಟ್ ಕಾನ್ಪುರನಲ್ಲಿ ನಡೆಯುತ್ತಿರುವುದರಿಂದ ಟೀಮ್ ಇಂಡಿಯಾ ಅಲ್ಲಿಗೆ ತಲುಪಿದೆ. ಬುಧವಾರದಿಂದ ಟೀಮ್ ಇಂಡಿಯಾದ ಆಟಗಾರರು ಅಭ್ಯಾಸ ಪ್ರಾರಂಭಿಸಲಿದ್ದಾರೆ. ಕಾನ್ಪುರದಲ್ಲಿ ಬಾಂಗ್ಲಾದೇಶ ಮತ್ತು ಭಾರತ ತಂಡದ ಆಟಗಾರರಿಗೆ ಉಳಿದುಕೊಳ್ಳಲು ವಿಶೇಷ ಹೋಟೆಲ್ ವ್ಯವಸ್ಥೆ ಮಾಡಲಾಗಿದೆ.
ಎರಡನೇ ಟೆಸ್ಟ್ಗೆ ಭಾರತ ತಂಡ : ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಬ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಯಶ್ ದಯಾಳ್.