ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯವು ಸಪ್ಟೆಂಬರ್ 27 ರಿಂದ ಕಾನ್ಪುರದ ಗ್ರೀನ್ಪಾರ್ಕ್ ಸ್ಟೇಡಿಯಂನಲ್ಲಿ ಪ್ರಾರಂಭವಾಗಲಿದೆ. ಉಭಯ ತಂಡಗಳ ರೋಚಕ ಟೆಸ್ಟ್ ಪಂದ್ಯಕ್ಕೆ ಪಿಚ್ ಸಂಪೂರ್ಣ ರೆಡಿಯಾಗಿದೆ. ಈ ಮೈದಾನದ ಪಿಚ್ ಬಗ್ಗೆ ಗ್ರೀನ್ ಪಾರ್ಕ್ನ ಕ್ಯುರೇಟರ್ ಮಾಹಿತಿ ನೀಡಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ಗೆ ಪಿಚ್ ಸೂಕ್ತವಾಗಿದೆ ಎಂದು ಗ್ರೀನ್ ಪಾರ್ಕ್ನ ಕ್ಯುರೇಟರ್ ಹೇಳಿದ್ದಾರೆ. ಈ ಪಿಚ್ ವೇಗದ ಬೌಲರ್ಗಳಿಗೆ ಮತ್ತು ಸ್ಪಿನ್ನರ್ಗಳಿಗೆ ಅನುಕೂಲಕರವಾಗಿದೆ. ಬ್ಯಾಟಿಂಗ್ಗೂ ಸ್ವಲ್ಪ ಸಹಾಯವಾಗಲಿದೆ.

ಮಾದ್ಯಮಗಳೊಂದಿಗೆ ಮಾತನಾಡಿರುವ ಗ್ರೀನ್ ಪಾರ್ಕ್ ಪಿಚ್ ಕ್ಯುರೇಟರ್ ಶಿವಕುಮಾರ್, 'ಗ್ರೀನ್ ಪಾರ್ಕ್ ಪಿಚ್ ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಅನುಭವವನ್ನು ನೀಡಲಿದೆ. ಮೊದಲ ಎರಡು ಸೆಷನ್ಗಳಲ್ಲಿ ಬೌನ್ಸ್ ಇರಲಿದ್ದು, ಈ ಸಂದರ್ಭದಲ್ಲಿ ಉತ್ತಮ ಬ್ಯಾಟಿಂಗ್ ಮಾಡಲು ಅನುಕೂಲಕರವಾಗಿದೆ. ಇದಾದ ಬಳಿಕ ಕೊನೆಯ ಮೂರು ದಿನಗಳಲ್ಲಿ ಸ್ಪಿನ್ನರ್ಗಳ ಪಾತ್ರ ಪ್ರಮುಖವಾಗಲಿದೆ ತಿಳಿಸಿದ್ದಾರೆ.
ಕಾನ್ಪುರದಿಂದ 23 ಕಿ.ಮೀ ದೂರದಲ್ಲಿರುವ ಉನ್ನಾವೊ ಸಮೀಪದ ಹಳ್ಳಿವೊಂದರಿಂದ ಗ್ರೀನ್ ಪಾರ್ಕ್ ಪಿಚ್ಗಾಗಿ ಕಪ್ಪು ಮಣ್ಣನ್ನು ಸಂಗ್ರಹಿಸಲಾಗಿದೆ. ಕಪ್ಪು ಮಣ್ಣಿನಿಂದ ಮಾಡಿರುವ ಪಿಚ್ಗಳು ಸ್ಪಿನ್ನರ್ಗಳಿಗೆ ಹೆಚ್ಚು ಸಹಾಯ ಮಾಡಲಿದೆ. ಆದರೆ ಕೆಂಪು ಮಣ್ಣಿನ ಪಿಚ್ ವೇಗದ ಬೌಲರ್ಗಳಿಗೆ ಉತ್ತಮ ಪ್ರದರ್ಶನ ನೀಡಲು ನೆರವಾಗಲಿದೆ. ಹೀಗಾಗಿ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಉಭಯ ತಂಡಗಳ ಸ್ಪಿನ್ನರ್ಗಳು ಅದ್ಭುತ ಪ್ರದರ್ಶನ ನೀಡುವ ಸಾಧ್ಯತೆಯಿದೆ.
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (ಯುಪಿಸಿಎ) ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಸ್ಟೇಡಿಯಂ ಒಳಗೆ ತಿಂಡಿ-ತಿನಿಸುಗಳನ್ನು ಕೊಳ್ಳುವಾಗ ಪ್ರೇಕ್ಷಕರಿಗೆ ಪ್ಲಾಸ್ಟಿಕ್ ಪ್ಲೇಟ್ ನೀಡುವುದನ್ನು ನಿಷೇಧಿಸಿದೆ. ಇದರ ಬದಲಿಗೆ ಪೇಪರ್ ಪ್ಲೇಟ್ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಈ ಬಗ್ಗೆ ಸ್ಟೇಡಿಯಂ ನಿರ್ದೇಶಕ ಸಂಜಯ್ ಕಪೂರ್ ಮಾತನಾಡಿ, 'ಇದು ಗ್ರೀನ್ ಪಾರ್ಕ್ನಲ್ಲಿ ನಡೆಯಲಿರುವ ಪಂದ್ಯವಾಗಿದ್ದು, ಇದನ್ನು 'ಗ್ರೀನ್' ಪಂದ್ಯವನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ಆದಷ್ಟು ಕಡಿಮೆ ಪ್ಲಾಸ್ಟಿಕ್ ಬಳಕೆ ಮಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ ತಂಡ ಅಷ್ಟೇನೂ ಯಶಸ್ಸು ಸಾಧಿಸಿಲ್ಲ. ಇದುವರಗೆ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದಿರುವ 23 ಟೆಸ್ಟ್ ಪಂದ್ಯಗಳ ಪೈಕಿ ಭಾರತ 7ರಲ್ಲಿ ಗೆದ್ದು, 3ರಲ್ಲಿ ಸೋಲು ಕಂಡಿದೆ. ಉಳಿದ 13 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.
2021ರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿತ್ತು. ಈ ಪಂದ್ಯದ ಐದನೇ ದಿನ ಕೊನೆಯ 10 ನಿಮಿಷಗಳು ರೋಚಕವಾಗಿತ್ತು. ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ ಮತ್ತ ಅಜಾಜ್ ಪಟೇಲ್ ಜೋಡಿ ವಿಕೆಟ್ ಕಳೆದುಕೊಳ್ಳದೆ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾಗಿತ್ತು.