ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ಸೋಮವಾರ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಆರಂಭವಾಗಿದೆ. ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ನಲ್ಲಿ 233 ರನ್ಗಳಿಗೆ ಆಲೌಟ್ ಆಗಿದೆ. ಬಾಂಗ್ಲಾದೇಶ ವಿರುದ್ಧ ಎರಡನೇ ಟೆಸ್ಟ್ನಲ್ಲಿಯೂ ಟೀಮ್ ಇಂಡಿಯಾ ಬೌಲರ್ಗಳ ಸಂಘಟಿತ ಉರಿ ಬೌಲಿಂಗ್ ಮುಂದುರೆಯಿತು.
ಬಾಂಗ್ಲಾದೇಶ ತಂಡಕ್ಕೆ ಮೊಮಿನುಲ್ ಹಕ್ (107) ಅಜೇಯ ಶತಕ ಬಾರಿಸಿ ನೆರವಾದರು. ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಪಡೆದು ಮಿಂಚಿದರೆ, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್ ಮತ್ತು ಮೊಹಮ್ಮದ್ ಸಿರಾಜ್ ತಲಾ 2 ಕಬಳಿಸಿದರು. ಇನ್ನು ರವೀಂದ್ರ ಜಡೇಜಾ 1 ವಿಕೆಟ್ಗೆ ತೃಪ್ತಿ ಪಡೆಬೇಕಾಯಿತು.

ಸೋಮವಾರ ಆರಂಭವಾದ ಕಾನ್ಪುರ ಟೆಸ್ಟ್ನ ನಾಲ್ಕನೇ ದಿನ ಭಾರತದ ಎದುರು ಬಾಂಗ್ಲಾದೇಶ ಪ್ರತಿರೋಧ ತೋರಿತು. ಟೀಮ್ ಇಂಡಿಯಾದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಮೊಮಿನುಲ್ ಹಕ್ ಬಾಂಗ್ಲಾದೇಶದ ಪರ ಜಬಾವ್ದಾರಿಯುತ ಆಟವಾಡಿದರು. ಇನ್ನುಳಿದಂತೆ ಬೇರೆ ಯಾವುದೇ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ.
ಎರಡನೇ ಟೆಸ್ಟ್ನ 4ನೇ ದಿನದಂದು ಊಟದ ವೇಳೆಗೆ ಬಾಂಗ್ಲಾದೇಶ 6 ವಿಕೆಟ್ ನಷ್ಟ 205 ರನ್ ಪೇರಿಸಿತ್ತು. ಇದಾದ ನಂತರ ಆರಂಭವಾದ ಸೆಕ್ಷನ್ನಲ್ಲಿ ಟೀಮ್ ಇಂಡಿಯಾ ಬೌಲರ್ಗಳ ಕರಾರುವಕ್ಕಾದ ಬೌಲಿಂಗ್ ದಾಳಿಗೆ ಬಾಂಗ್ಲಾದೇಶ ತತ್ತರಿಸಿ ಹೋಯಿತು. ಕೆಳ ಕ್ರಮಾಂಕದ ಬ್ಯಾಟರ್ಗಳು ಹೆಚ್ಚು ರನ್ ಗಳಿಸಲು ಸಾಧ್ಯವಾಗದೆ ವಿಕೆಟ್ ಕಳೆದುಕೊಂಡರು.
ಕಾನ್ಪುರ ಟೆಸ್ಟ್ನ ಮೊದಲ ದಿನ ಕೇವಲ 35 ಓವರ್ಗಳ ಆಟವಾಡಲು ಮಾತ್ರ ಸಾಧ್ಯವಾಗಿತ್ತು. ಇದಾದ ಬಳಿಕ ಟೆಸ್ಟ್ ಪಂದ್ಯದ ಎರಡನೇ ದಿನ ಮಳೆಯಿಂದಾಗಿ ರದ್ದಾಗಿತ್ತು. ಮೂರನೇ ದಿನವೂ ಒದ್ದೆಯಾದ ಔಟ್ಫೀಲ್ಡ್ನಿಂದ ಒಂದೇ ಒಂದು ಚೆಂಡು ಎಸೆಯಲಾಗದೆ ಪಂದ್ಯವನ್ನು ಕೈಬಿಡಬೇಕಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಈ ಟೆಸ್ಟ್ ಪಂದ್ಯದ ಫಲಿತಾಂಶ ತಿಳಿಯುವುದು ಕಷ್ಟದ ಕೆಲಸವಾಗಿದೆ. ಮೂಲಗಳ ಪ್ರಕಾರ ಕಾನ್ಪುರ ಟೆಸ್ಟ್ ಡ್ರಾ ಆಗುವ ಸಾಧ್ಯತೆ ಹೆಚ್ಚಿದೆ. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು 280 ರನ್ಗಳಿಂದ ಸೋಲಿಸಿತ್ತು.
ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಬಾಂಗ್ಲಾದೇಶ: ಶದ್ಮನ್ ಇಸ್ಲಾಂ, ಜಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂತೊ (ನಾಯಕ), ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟನ್ ದಾಸ್ (ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಹಸನ್ ಮಹಮೂದ್, ಖಲಿದ್ ಅಹ್ಮದ್.