ಇಂಗ್ಲೆಂಡ್, ಭಾರತ ಪ್ರವಾಸದಲ್ಲಿದೆ. ಈ ವೇಳೆ ಮೊದಲು ಟಿ20 ಸರಣಿಗಳನ್ನು ಆಡಿದೆ. ಈ ವೇಳೆ ಪ್ರವಾಸಿ ತಂಡದ ಆಡಿದ ಐದು ಪಂದ್ಯಗಳಲ್ಲಿ ಒಂದೇ ಒಂದು ಗೆಲುವು ಸಾಧಿಸಿ ನಿರಾಸೆ ಅನುಭವಿಸಿದೆ. ಈಗ ಉಭಯ ತಂಡಗಳು ಮತ್ತೊಂದು ಸರಣಿಗೆ ಸಜ್ಜಾಗಿವೆ. ಫೆಬ್ರವರಿ 6ರಿಂದ ಉಭಯ ದೇಶಗಳ ನಡುವೇ ಏಕದಿನ ಸರಣಿ ನಡೆಯಲಿದೆ. ಈ ದ್ವಿಪಕ್ಷೀಯ ಸರಣಿಯು ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆ ನಡೆಸಲು ಅನುಕೂಲವಾಗಲಿದೆ. ಟೀಮ್ ಇಂಡಿಯಾದ ಪರ ಸ್ಟಾರ್ ಆಟಗಾರರು ಕಣಕ್ಕೆ ಇಳಿಯಲಿದ್ದು ಎಲ್ಲರ ಚಿತ್ತ ಕದ್ದಿದೆ.
ಫೆಬ್ರವರಿ 19ರಿಂದ ಪಾಕಿಸ್ತಾನ ಆಶ್ರಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಟೂರ್ನಿಯಲ್ಲಿ ಭಾರತ ಸೇರಿದಂತೆ ಎಂಟು ತಂಡಗಳು ಭಾಗವಹಿಸಲಿವೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮಹತ್ವದ ಪಡೆದಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಯಾವ ಸಂಯೋಜನೆಯೊಂದಿಗೆ ಕಣಕ್ಕೆ ಇಳಿಯಲಿದೆ ಎಂಬ ಪ್ರಶ್ನೆಗೆ ಈ ಸರಣಿಯಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ. ಇನ್ನು ಟೀಮ್ ಇಂಡಿಯಾದ ಸ್ಟಾರ್ ಆಟಗಾರರಿಗೆ ಫಾರ್ಮ್ಗೆ ಮರಳಲು ಇದು ಸುವರ್ಣ ಅವಕಾಶವಾಗಿದೆ.

ನಿರೀಕ್ಷೆಯಂತೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಉಪನಾಯಕ ಶುಭಮನ್ ಗಿಲ್ ಏಕದಿನ ಸರಣಿಯಲ್ಲಿ ಇನಿಂಗ್ಸ್ ಆರಂಭಿಸಲಿದ್ದಾರೆ. ಈ ಇಬ್ಬರೂ ಆಟಗಾರರು ದೇಶೀಯ ಟೂರ್ನಿಯನ್ನು ಆಡಿದ್ದು ಉತ್ತಮ ಟಚ್ನಲ್ಲಿದ್ದಾರೆ. ಹೀಗಾಗಿ ಇವರಿಬ್ಬರ ಆಟದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿದ್ದಾರೆ. ತಮ್ಮ ಮೇಲಿನ ಟೀಕೆಗಳಿಗೆ ಉತ್ತರ ನೀಡಲು ಇದು ಅವರಿಗೆ ಉತ್ತಮ ಅವಕಾಶವಾಗಿದೆ.
ತಿಂಗಳುಗಳೇ ಕಳೆದರು ಇನ್ನು ಟೀಮ್ ಇಂಡಿಯಾದ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಯಾರು ಎಂಬ ಪ್ರಶ್ನೆಗೆ ನಿಶ್ಚಿತ ಉತ್ತರ ಸಿಕ್ಕಿಲ್ಲ. ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಈ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ. ಇವರಿಬ್ಬರಲ್ಲಿ ಒಬ್ಬರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವುದು ಪಕ್ಕಾ. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಆಗಿ ರಿಷಭ್ ಪಂತ್ ಕಾಣಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ರಾಹುಲ್ ಆಡುವ ಬಗ್ಗೆ ಅನುಮಾಗಳು ಎದ್ದಿವೆ. ಹೀಗಾಗಿ ರಾಹುಲ್ ನಾಗ್ಪುರದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಕಷ್ಟ.
ಟೀಮ್ ಇಂಡಿಯಾದಲ್ಲಿ ಆಲ್ರೌಂಡರ್ಗಳ ದಂಡೇ ಇದೆ. ವಿಶ್ವದ ಶ್ರೇಷ್ಠ ಆಲ್ರೌಂಡರ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯಬಹುದು. ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಹಾಗೂ ಕುಲ್ದೀಪ್ ಯಾದವ್ ಜೊತೆಗೆ ಅರ್ಷದೀಪ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ.

ಮೊದಲ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.