ಆಘಾತ ಅನುಭವಿಸಿದ ರಾಹುಲ್
ಇನ್ನು ದ್ವಿತೀಯ ಇನ್ನಿಂಗ್ಸ್ನಲ್ಲಿ 209 ರನ್ಗಳ ಗುರಿಯನ್ನು ಬೆನ್ನಟ್ಟಲು ಆರಂಭಿಸಿದ ಭಾರತೀಯ ತಂಡ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಳ್ಳುವ ಮೂಲಕ ಮೊದಲ ಆಘಾತವನ್ನು ಅನುಭವಿಸಿದೆ. ತಂಡ 34 ರನ್ಗಳನ್ನು ಗಳಿಸಿದ್ದ ವೇಳೆ ರಾಹುಲ್ 26 ರನ್ಗಳನ್ನು ಬಾರಿಸಿ ಸ್ಟುವರ್ಟ್ ಬ್ರಾಡ್ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತೀಯ ತಂಡದ ಹೈಯೆಸ್ಟ್ ಸ್ಕೋರರ್ ಎನಿಸಿದ್ದರು ರಾಹುಲ್. ಸುದೀರ್ಘ ಕಾಲದ ಬಳಿಕ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಗಳಿಸಿದ್ದ ರಾಹುಲ್ ಮೊದಲ ಇನ್ನಿಂಗ್ಸ್ನಲ್ಲಿ 84 ರನ್ಗಳ ಕೊಡುಗೆ ನೀಡಿದ್ದರು.
ಭಾರತದ ಬೌಲಿಂಗ್ ದಾಳಿ
ಇನ್ನಿ ಈ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಬೌಲಿಂಗ್ ವಿಭಾಗಕ್ಕೆ ವಿಶೇಷ ಪ್ರಶಂಸೆನ್ನು ನೀಡಬೇಕು. ಇಂಗ್ಲೆಂಡ್ ತಂಡ ತನ್ನ ತವರಿನಲ್ಲಿ ಎದುರಾಳಿ ಭಾರತ ತಂಡವನ್ನು ಕಟ್ಟಿಹಾಕಲು ಸಾಧ್ಯವಾಗುವಂತೆ ತನ್ನ ತಂಡಕ್ಕೆ ಪೂರಕವಾಗಿ ಪಿಚ್ ನಿರ್ಮಾಣ ಮಾಡಿತ್ತು. ಹುಲ್ಲಿನಿಂದ ಕೂಡಿದ್ದ ಪಿಚ್ ವೇಗಿಗಳಿಗೆ ಅತ್ಯಂತ ಹೆಚ್ಚು ಸಹಕಾರಿಯಾಗಲಿದೆ ಎಂಬುದು ಆರಂಭದಲ್ಲಿಯೇ ಊಹಿಸಲಾಗಿತ್ತು. ಆದರೆ ಇದನ್ನು ಭಾರತೀಯ ವೇಗಿಗಳು ಅತ್ಯಂತ ಸಮರ್ಥವಾಗಿ ಬಳಸಿಕೊಂಡಿರುವುದು ವಿಶೇಷವಾಗಿದೆ. ಇಂಗ್ಲೆಂಡ್ ತಂಡವನ್ನು ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 183 ರನ್ಗಳಿಗೆ ಆಲೌಟ್ ಮಾಡಿದ್ದ ಭಾರತೀಯ ತಂಡ ದ್ವಿತೀಯ ಇನ್ನಿಂಗ್ಸ್ನಲ್ಲಿ 303 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ.
9 ವಿಕೆಟ್ ಪಡೆದು ಮಿಂಚಿದ ಬೂಮ್ರಾ
ಇನ್ನು ಈ ಸೆಣೆಸಾಟದಲ್ಲಿ ಭಾರತೀಯ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ತಮ್ಮ ಹಳೆಯ ಮೊನಚನ್ನು ಕಂಡುಕೊಳ್ಳಲು ಸಾಧ್ಯವಾಗಿರುವುದು ಭಾರತದ ಪಾಲಿಗೆ ಖುಷಿಯ ಸಂಗತಿಯಾಗಿದೆ. ಟೀಮ್ ಇಂಡಿಯಾದ ವೇಗಿ ಬೂಮ್ರಾ ಇಂಗ್ಲೆಂಡ್ ವಿರುದ್ಧದ ಎರಡು ಇನ್ನಿಂಗ್ಸ್ಗಳಲ್ಲಿ ಒಟ್ಟು 9 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಕಬಳಿಸಿದ್ದ ಬೂಮ್ರಾ ಎರಡನೇ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ಗಳ ಗೊಂಚಲು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಶಮಿ, ಸಿರಾಜ್ ಠಾಕೂರ್ ಕೂಡ ಬೌಲಿಂಗ್ನಲ್ಲಿ ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ. ಟೀಮ್ ಇಂಡಿಯಾದ್ ಈ ಬೌಲಿಂಗ್ ದಾಳಿಗೆ ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ಮಾಜಿ ನಾಯಕ ಇನ್ಜಮಾನಮ್ ಉಲ್ ಹಕ್ ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಹಿಂದೆಂದೂಇಷ್ಟೊಂದು ಪ್ರಮಾಣದ ಆಕ್ರಮಣಕಾರಿ ಬೌಲಿಂಗ್ ಲೈನ್ಅಪ್ ಅನ್ನು ನಾನು ಗಮನಿಸಿಲ್ಲ ಎಂದಿದ್ದಾರೆ ಇನ್ಜಮಾಮ್ ಉಲ್ ಹಕ್. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್ನಲ್ಲಿಯೂ ಭಾರತದ ವೇಗಿಗಳು ಅಷ್ಟು ಶಿಸ್ತಿನ ಪ್ರದರ್ಶನ ನೀಡಲು ಯಶಸ್ವಿಯಾಗಿದ್ದರು
ಭಾರತದ ಗೆಲುವಿಗೆ ಅಡ್ಡಿಯಾಗುತ್ತಾ ಮಳೆ
ಭಾರತ ನಾಟಿಂಗ್ಹ್ಯಾಮ್ ಪಂದ್ಯದಲ್ಲಿ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ. ಆದರೆ ಈ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ ಮಳೆ ಅಡ್ಡಿಯಾಗುವ ಆತಂಕವೂ ಇದೆ. ಆರಂಭದ ನಾಲ್ಕು ದಿನಗಳ ಪಂದ್ಯದಲ್ಲಿ ಎರಡು ದಿನ ಮಳೆ ಅಡ್ಡಿಯಾಗುವ ಮೂಲಕ ಈಗಾಗಲೇ ಸಾಕಷ್ಟು ಓವರ್ಗಳ ಆಟಕ್ಕೆ ಹಿನ್ನಡೆಯಾಗಿದೆ. ಆದರೆ ಅಂತಿಮ ದಿನದಾಟದಲ್ಲಿಯೂ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿದರೆ ಭಾರತದ ಗೆಲುವಿನ ಕನಸಿಗೆ ತಣ್ಣೀರೆರಚಿದಂತಾಗಲಿದೆ. ಹವಾಮಾನ ವರದಿಯ ಪ್ರಕಾರ ಭಾನುವಾರದಂದು ನಾಟಿಂಗ್ಹ್ಯಾಮ್ನಲ್ಲಿ ಮಳೆಯಾಗುವ ಸಾಧ್ಯತೆ ಸಾಕಷ್ಟು ಹೆಚ್ಚಾಗಿದೆ. ಹವಾಮಾನ ಮಾಹಿತಿಯ ಪ್ರಕಾರ ದಿನವಿಡೀ ಮಳೆ ಪಂದ್ಯಕ್ಕೆ ಅಡ್ಡಿಯುಂಟು ಮಾಡುವ ಸಾಧ್ಯತೆಯೂ ಇದ್ದಂತಿದೆ. ಹೀಗಾಗಿ ಆರಂಭಿಕ ಪಂದ್ಯವನ್ನು ಗೆದ್ದು ಸರಣಿ ಮುನ್ನಡೆ ಮಾಡಿಕೊಳ್ಳುವ ಹಂಬಲದಲ್ಲಿರುವ ಟೀಮ್ ಇಂಡಿಯಾ ಹಾಗೂ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಪಂದ್ಯಕ್ಕೆ ಮಳೆ ಅಡ್ಡಿಯಾಗದಿರಲಿ ಎಂದು ಪ್ರಾರ್ಥಿಸುತ್ತಿದ್ದಾರೆ