ಭಾರತ vs ಇಂಗ್ಲೆಂಡ್: ಅಶ್ವಿನ್ರನ್ನು ಕೊಹ್ಲಿ ತಂಡದಿಂದ ಕೈಬಿಟ್ಟಿದ್ದು ತಪ್ಪು ಎನ್ನುತ್ತಿವೆ ಈ 3 ಅಂಶಗಳು!

ಬಹುನಿರೀಕ್ಷಿತ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಿದೆ. ಈ ಸರಣಿಯ ಮೊದಲನೇ ಪಂದ್ಯ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಬುಧವಾರದಂದು (ಆಗಸ್ಟ್ 4) ಆರಂಭವಾಗಿದ್ದು ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆರಂಭಿಸಿದೆ. ಈ ಪಂದ್ಯ ಆರಂಭವಾಗುವ ಮುನ್ನ ಒಂದು ದಿನದ ಮುಂಚೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಿರಾಟ್ ಕೊಹ್ಲಿ ಪಂದ್ಯದಲ್ಲಿ ಯಾವ ಯಾವ ಆಟಗಾರರು ಭಾಗವಹಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದರು. ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಯಾವ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂಬ ವಿಷಯವನ್ನು ಪಂದ್ಯಕ್ಕೆ ಕೆಲ ಸಮಯ ಇರುವಾಗ ಬಹಿರಂಗಗೊಳಿಸಲಿದ್ದೇವೆ ಎಂದು ವಿರಾಟ್ ಕೊಹ್ಲಿ ಆಟಗಾರರ ಕುರಿತ ಮಾಹಿತಿಯನ್ನು ನೀಡಲು ನಿರಾಕರಣೆ ಮಾಡಿದರು.
ವಿರಾಟ್ ಕೊಹ್ಲಿ ಆಡುವ ಬಳಗದ ಕುರಿತು ಮಾಹಿತಿ ನೀಡಲು ನಿರಾಕರಣೆ ಮಾಡಿದಾಗಲೇ ತಂಡದಲ್ಲಿ ದೊಡ್ಡ ಬದಲಾವಣೆ ಮಾಡುವ ಸಂಭವವಿದೆ ಎಂದು ಕ್ರೀಡಾ ತಜ್ಞರು ಊಹಿಸಿದ್ದರು. ಅದರಂತೆ ಇದೀಗ ಭಾರತ ತಂಡದ ಆಡುವ ಬಳಗದಲ್ಲಿ ಸಾಕಷ್ಟು ದೊಡ್ಡ ಬದಲಾವಣೆಗಳು ಆಗಿವೆ. ತಂಡದಿಂದ ಪ್ರಮುಖ ಆಟಗಾರರನ್ನು ಕೈಬಿಡಲಾಗಿದ್ದು ಬೇರೆ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಹಿಂದೆ ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಭಾರತ ತಂಡಕ್ಕೂ ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯಕ್ಕೆ ಘೋಷಣೆಯಾಗಿರುವ ಭಾರತ ತಂಡಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಹೋಲಿಸಿದರೆ ಈ ಬಾರಿ ತಂಡದಲ್ಲಿ ಕೆಎಲ್ ರಾಹುಲ್ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ತಂಡದಿಂದ ರವಿಚಂದ್ರನ್ ಅಶ್ವಿನ್ ಹಾಗೂ ಇಶಾಂತ್ ಶರ್ಮಾರನ್ನು ಕೈಬಿಟ್ಟಿರುವುದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದ್ದು ಶಾರ್ದೂಲ್ ಠಾಕೂರ್ ಸ್ಥಾನ ಪಡೆದುಕೊಂಡಿರುವುದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಮತ್ತು ಮೊಹಮ್ಮದ್ ಸಿರಾಜ್ ಕೂಡ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರವಿಚಂದ್ರನ್ ಅಶ್ವಿನ್ಗೆ ತಂಡದಲ್ಲಿ ಸ್ಥಾನ ನೀಡದೆ ಇರುವುದು ಸದ್ಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು ಟೀಮ್ ಇಂಡಿಯಾ ಆಯ್ಕೆ ಕುರಿತು ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ ಹಾಗೂ ಅಶ್ವಿನ್ರನ್ನು ತಂಡದಿಂದ ಕೈಬಿಟ್ಟಿದ್ದು ತಪ್ಪು ಎನ್ನುತ್ತಿವೆ ಈ ಕೆಳಕಂಡ 3 ಅಂಶಗಳು..

ಅಶ್ವಿನ್ ಅಲಭ್ಯತೆ ಪಂದ್ಯದ ಮೇಲೆ ಹೊಡೆತ ಬೀಳಬಹುದು
ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಿಂದ ರವಿಚಂದ್ರನ್ ಅಶ್ವಿನ್ ಅವರನ್ನು ಹೊರಗಿಟ್ಟಿರುವುದರಿಂದ ಪಂದ್ಯದ ಮೇಲೆ ಹೊಡೆತ ಬೀಳಬಹುದು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಇದುವರೆಗೂ 148 ಟೆಸ್ಟ್ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮಾಡಿರುವ ರವಿಚಂದ್ರನ್ ಅಶ್ವಿನ್ 413 ವಿಕೆಟ್ ಪಡೆದು ಮಿಂಚಿದ್ದಾರೆ. ಹೀಗೆ ಟೆಸ್ಟ್ ಇತಿಹಾಸದಲ್ಲಿ ಉತ್ತಮ ಬೌಲಿಂಗ್ ದಾಖಲೆ ಹೊಂದಿರುವ ರವಿಚಂದ್ರನ್ ಅಶ್ವಿನ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಇಡೀ ತಂಡದಲ್ಲಿ ಕೇವಲ ಒಬ್ಬನೇ ಸ್ಪಿನ್ನರ್!
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಘೋಷಣೆ ಮಾಡಲಾಗಿರುವ ಭಾರತ ತಂಡದಲ್ಲಿ ಸದ್ಯ ಐವರು ಬೌಲರ್ಗಳ ಲಭ್ಯತೆ ಇದೆ. ಅದರಲ್ಲಿ ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ನಾಲ್ವರು ವೇಗಿಗಳೇ ಇದ್ದು ಕೇವಲ ಒಬ್ಬ ಸ್ಪಿನ್ ಬೌಲರ್ ಇದ್ದಾರೆ. ಹೌದು ಐವರು ಬೌಲರ್ಗಳ ಪೈಕಿ ಕೇವಲ ರವೀಂದ್ರ ಜಡೇಜಾ ಮಾತ್ರ ಸ್ಪಿನ್ ಬೌಲರ್ ಆಗಿದ್ದು ಇದು ತಂಡಕ್ಕೆ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ. ಮೂವರು ವೇಗಿಗಳು ಮತ್ತು ಇಬ್ಬರು ಸ್ಪಿನ್ ಬೌಲರ್ಗಳು ಇದ್ದಿದ್ದರೆ ಬೌಲಿಂಗ್ ವಿಭಾಗ ಸಮತೋಲನವಾಗಿ ಇರುತ್ತಿತ್ತು ಆದರೆ ಕೇವಲ ಒಬ್ಬನೇ ಸ್ಪಿನ್ನರ್ ಇರುವುದರಿಂದ ಬೌಲಿಂಗ್ ಸಮಸ್ಯೆ ಕಾಡಬಹುದು ಎಂದು ಟೀಕೆಗಳು ವ್ಯಕ್ತವಾಗುತ್ತಿವೆ.

ಕಳೆದ ಬಾರಿಯ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಶ್ವಿನ್ ಪಡೆದದ್ದು 32 ವಿಕೆಟ್ಸ್!
ಕಳೆದ ಬಾರಿ ಇಂಗ್ಲೆಂಡ್ ಭಾರತ ಪ್ರವಾಸ ಕೈಗೊಂಡಿದ್ದಾಗ ನಡೆದಿದ್ದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 32 ವಿಕೆಟ್ ಪಡೆದು ಮಿಂಚಿದ್ದ ರವಿಚಂದ್ರನ್ ಅಶ್ವಿನ್ ನೂತನ ದಾಖಲೆ ಬರೆದಿದ್ದರು. ಆಡಿದ 4 ಪಂದ್ಯಗಳಲ್ಲಿ 32 ವಿಕೆಟ್ ಪಡೆದಿದ್ದ ರವಿಚಂದ್ರನ್ ಅಶ್ವಿನ್ ಇಂಗ್ಲೆಂಡ್ ತಂಡದ ಬಲಿಷ್ಠ ಆಟಗಾರರನ್ನು ಪೆವಿಲಿಯನ್ ಕಡೆಗೆ ಕಳುಹಿಸಿದ್ದರು. ಅಶ್ವಿನ್ ಇಂಗ್ಲೆಂಡ್ ತಂಡದ ಆಟಗಾರರಾದ ರೋರಿ ಬರ್ನ್ಸ್ (ಮೂರು ಬಾರಿ), ಡಾನ್ ಲಾರೆನ್ಸ್ (ಮೂರು ಬಾರಿ), ಜೋ ರೂಟ್ (ಎರಡು ಬಾರಿ), ಡೊಮ್ ಸಿಬ್ಲೆ (ಎರಡು ಬಾರಿ), ಜ್ಯಾಕ್ ಕ್ರಾಲಿ (ಒಮ್ಮೆ) ಮತ್ತು ಜಾನಿ ಬೈರ್ಸ್ಟೊ (ಒಮ್ಮೆ)ವಿಕೆಟ್ಗಳನ್ನು ಕಳೆದ ಬಾರಿಯ ಟೆಸ್ಟ್ ಸರಣಿಯಲ್ಲಿ ಪಡೆದಿದ್ದರು. ಹಾಗೂ ಈ ಎಲ್ಲಾ ಬ್ಯಾಟ್ಸ್ಮನ್ಗಳೂ ಸಹ ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಟವನ್ನು ಆಡುತ್ತಿದ್ದಾರೆ. ಹೀಗಾಗಿ ರವಿಚಂದ್ರನ್ ಅಶ್ವಿನ್ ಅಗತ್ಯತೆ ಭಾರತ ತಂಡಕ್ಕೆ ಹೆಚ್ಚಿತ್ತು ಎಂದೇ ಹೇಳಬಹುದು.
ಅಷ್ಟು ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿಯೂ ರವಿಚಂದ್ರನ್ ಅಶ್ವಿನ್ ಅವರನ್ನು ತಂಡದಿಂದ ಕೈಬಿಟ್ಟಿರುವ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಕಳೆದ ಬಾರಿಯ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಮಿಂಚಿದ್ದ ಅಶ್ವಿನ್ ಈ ಬಾರಿಯ ತಂಡದಲ್ಲಿ ಅಲಭ್ಯರಾಗಿದ್ದಾರೆ ಎಂದರೆ ನಂಬಲಾಗುತ್ತಿಲ್ಲ ಎಂದು ಹಲವಾರು ಮಾಜಿ ಕ್ರಿಕೆಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಶ್ವಿನ್ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡದೇ ಇರುವುದು ಇಂಗ್ಲೆಂಡ್ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸುವುದು ಖಚಿತ ಎಂದು ಕ್ರೀಡಾಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಕೇವಲ ಒಬ್ಬನೇ ಸ್ಪಿನ್ನರ್ ತಂಡದಲ್ಲಿರುವ ಕಾರಣ ಬೌಲಿಂಗ್ ಸಮತೋಲನವಾಗದೇ ವಿಕೆಟ್ ಪಡೆಯುವಲ್ಲಿ ಬೌಲರ್ಗಳು ಪರದಾಡಬಲ್ಲರು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಅಶ್ವಿನ್ ಬೌಲಿಂಗ್ ವಿಭಾಗದಲ್ಲಿ ಮಾತ್ರವಲ್ಲದೆ ಬ್ಯಾಟಿಂಗ್ ವಿಚಾರದಲ್ಲಿಯೂ ಚರ್ಚೆಗೀಡಾಗಿದ್ದಾರೆ. ಏಕೆಂದರೆ ಅಶ್ವಿನ್ ಬೌಲಿಂಗ್ ಮಾತ್ರವಲ್ಲ ಬ್ಯಾಟಿಂಗ್ನಲ್ಲಿಯೂ ಹಿಡಿದ ಹೊಂದಿರುವಂತಹ ಆಟಗಾರ, ಹೀಗಾಗಿ ಬ್ಯಾಟಿಂಗ್ ವಿಭಾಗದಲ್ಲಿಯೂ ರವಿಚಂದ್ರನ್ ಅಶ್ವಿನ್ ಇಲ್ಲದಿರುವುದು ಹೊಡೆತ ಬೀಳಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಸದ್ಯ ರವಿಚಂದ್ರನ್ ಅಶ್ವಿನ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳದೇ ಇರುವುದು ಇಷ್ಟು ದೊಡ್ಡ ಮಟ್ಟದ ಚರ್ಚೆಗೀಡಾಗಲು ಕಾರಣವಾಗಿದೆ. ದುರದೃಷ್ಟವಶಾತ್ ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡರೆ ರವಿಚಂದ್ರನ್ ಅಶ್ವಿನ್ಗೆ ಸ್ಥಾನ ನೀಡದೆ ಇರುವ ವಿಷಯ ದೊಡ್ಡ ಮಟ್ಟದಲ್ಲಿ ಸುದ್ದಿ ಆಗುವುದಂತೂ ಖಚಿತ..
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications