ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ಟೀಮ್ ಇಂಡಿಯಾ ಎರಡನೇ ಇನಿಂಗ್ಸ್ನಲ್ಲಿ ಅಮೋಘವಾಗಿ ಬ್ಯಾಟಿಂಗ್ ನಡೆಸಿ 396 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಆತಿಥೇಯ ತಂಡಕ್ಕೆ 374 ರನ್ಗಳ ಗುರಿಯನ್ನು ನೀಡಿದೆ. ಓವಲ್ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಒಟ್ಟು 9 ವಿಕೆಟ್ಗಳು ಬಿದ್ದಿವೆ. ಇಂಗ್ಲೆಂಡ್ ಈ ಪಂದ್ಯ ಗೆಲ್ಲಲು ಇನ್ನು 324 ರನ್ ಬೇಕಿದ್ದು 9 ವಿಕೆಟ್ಗಳು ಬಾಕಿ ಇವೆ.
ಮೂರನೇ ದಿನದಾಟದವನ್ನು ಟೀಮ್ ಇಂಡಿಯಾ ಎರಡನೇ ಇನಿಂಗ್ಸ್ನಲ್ಲಿ 2 ವಿಕೆಟ್ಗೆ 75 ರನ್ಗಳಿಂದ ಆಟ ಮುಂದುವರೆಸಿತು. ಆರಂಭಿಕ ಯಶಸ್ವಿ ಜೈಸ್ವಾಲ್ ಬಾರಿಸಿದ ಶತಕ ಹಾಗೂ ಆಕಾಶ್ ದೀಪ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಬಾರಿಸಿದ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್ನಲ್ಲಿ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿದೆ. ಟೀಮ್ ಇಂಡಿಯಾ ನೀಡಿದ್ದ ಗುರಿಯನ್ನು ಸಮರ್ಥವಾಗಿ ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡಕ್ಕೆ ಆರಂಭಿಕರು ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು.

ಇಂಗ್ಲೆಂಡ್ ಆರಂಭಿಕರಾದ ಬೆನ್ ಡಕೆಟ್ (ಅಜೇಯ 34) ಹಾಗೂ ಜಾಕ್ ಕ್ರಾಲಿ (14) ಉತ್ತಮವಾಗಿ ಆಡಿದರು. ಈ ಜೋಡಿ ಆರಂಭದಲ್ಲಿ ಟೀಮ್ ಇಂಡಿಯಾದ ಸವಾಲನ್ನು ಮೆಟ್ಟಿನಿಂತು ರನ್ಗಳನ್ನು ಕಲೆ ಹಾಕಿತು. ಈ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ಬ್ಯಾಟರ್ಗಳು ಆಕ್ರಮಣಕಾರಿ ಬ್ಯಾಟ್ ಮಾಡಲಿಲ್ಲ. ಬದಲಿಗೆ ಕೊಂಚ ಸಮಯೋಚಿತ ಆಟವಾಡಿತು. ಈ ಇಬ್ಬರೂ ಆಟಗಾರರ ಆಟಕ್ಕೆ ಬ್ರೇಕ್ ಹಾಕಲು ಶುಭಮನ್ ಗಿಲ್ ಪ್ರಸಿದ್ಧ್ ಕೃಷ್ಣಾ ಹಾಗೂ ಆಕಾಶ್ ದೀಪ್ ಅವರೊಂದಿಗೆ ಬೌಲಿಂಗ್ ಆರಂಭಿಸಿದರು. ಆದರೆ ಈ ಜೋಡಿ ಇಂಗ್ಲೆಂಡ್ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ವಿಫಲರಾದರು.
ಈ ವೇಳೆ ಟೀಮ್ ಇಂಡಿಯಾದ ಅನುಭವಿ ಬೌಲರ್ ಮೊಹಮ್ಮದ್ ಸಿರಾಜ್ ಅವರಿಗೆ ನಾಯಕ ಚೆಂಡನ್ನು ನೀಡಿದರು. ಇವರು ತಮ್ಮ ನಾಲ್ಕನೇ ಓವರ್ನಲ್ಲಿ ಶಿಸ್ತು ಬದ್ಧ ದಾಳಿ ನಡೆಸಿದರು. ಇನಿಂಗ್ಸ್ನ 14ನೇ ಓವರ್ನಲ್ಲಿ ಸಿರಾಜ್ ಯಾರ್ಕರ್ ಎಸೆದು ಜಾಕ್ ಕ್ರಾಲಿ ಅವರಿಗೆ ಖೆಡ್ಡಾ ತೋಡಿದರು. ಈ ಮೂಲಕ ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಮಂದಹಾಸ ಮೂಡಿಸಿದರು.
ಟೀಮ್ ಇಂಡಿಯಾ ಐದನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿ ಟೆಸ್ಟ್ ಸರಣಿಯಲ್ಲಿ ಸಮಬಲ ಸಾಧಿಸುವ ಕನಸು ಕಾಣುತ್ತಿದೆ. ಈ ವೇಳೆ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಮೊದಲಾವಧಿಯಲ್ಲಿ ವೇಗದ ಬೌಲರ್ಗಳು ಬಿಗುವಿನ ದಾಳಿ ನಡೆಸಿ ವಿಕೆಟ್ ಬೇಟೆ ನಡೆಸಬೇಕಿದೆ. ಅಲ್ಲದೆ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರರಿಗೆ ನೆಲಕಚ್ಚಿ ನಿಲ್ಲಲು ಅವಕಾಶವನ್ನೇ ನೀಡಬಾರದು. ಈ ನಿಟ್ಟಿನಲ್ಲಿ ಟೀಮ್ ಇಂಡಿಯಾದ ಮೂವರು ವೇಗದ ಬೌಲರ್ಗಳು ಕರಾರುವಾಕ್ ದಾಳಿಯನ್ನು ಸಂಘಟಿಸಬೇಕಿದೆ. ಅಲ್ಲದೆ ಇಂಗ್ಲೆಂಡ್ ತಂಡ 374 ರನ್ ನೀಡದೇ ತಡೆಯುವ ಅವಶ್ಯಕತೆ ಇದೆ.