
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಭಾರತದ ವಿರುದ್ಧ ಸವಾರಿ ಮಾಡಿ ಭರ್ಜರಿ ಗೆಲುವು ಸಾಧಿಸಿತು. ಆದರೆ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಎಲ್ಲಾ ವಿಭಾಗದಲ್ಲೂ ಭರ್ಜರಿಯಾಗಿ ತಿರುಗಿ ಬಿದ್ದು ಅದ್ಭುತ ಗೆಲುವನ್ನು ಸಾಧಿಸಿದೆ. ಈಗ ಮೂರನೇ ಪಂದ್ಯಕ್ಕೆ ಎರಡೂ ತಂಡಗಳು ಸಜ್ಜಾಗಿದೆ.
ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಭಾರತ ಸರ್ವಾಂಗೀಣ ಪ್ರದರ್ಶನವನ್ನು ನೀಡುವಲ್ಲಿ ಯಶಸ್ವಿಯಾಗಿತ್ತು. ಇಂಗ್ಲೆಂಡ್ನ ಪವರ್ ಹಿಟ್ಟಿಂಗ್ ಬ್ಯಾಟಿಂಗ್ ಪಡೆಯನ್ನು ಕೇವಲ 164/6 ರನ್ಗಳಿಗೆ ನಿಯಂತ್ರಿಸಲು ಭಾರತೀಯ ಬೌಲಿಂಗ್ ಪಡೆ ಯಶಸ್ವಿಯಾಗಿತ್ತು. ಅಂತಿಮ ಐದು ಓವರ್ಗಳಲ್ಲಿ ಭಾರತದ ಬೌಲರ್ಗಳು ಕೇವಲ 35 ರನ್ಗಳನ್ನು ಮಾತ್ರವೇ ನೀಡಿ ಪ್ರವಾಸಿಗರಿಗೆ ಸವಾಲಾದರು.
ಬಳಿಕ ಈ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ಪದಾರ್ಪಣಾ ಪಂದ್ಯವನ್ನಾಡಿದ ಇಶಾನ್ ಕಿಶನ್ ಅದ್ಭುತ ಆಟದ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಇಶಾನ್ ಕಿಶನ್ 32 ಎಸೆತಗಳಲ್ಲಿ 56 ರನ್ಗಳಿಸಿ ನಾಯಕ ವಿರಾಟ್ ಕೊಹ್ಲಿಗೆ ಅದ್ಭುತವಾಗಿ ಬೆಂಬಲವನ್ನು ನೀಡಿದರು. ಈ ಮೂಲಕ ವಿರಾಟ್ ಕೊಹ್ಲಿ ಪಡೆ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ ಗೆದ್ದು ಸರಣಿಯನ್ನು 1-1 ಸಮಬಲಗೊಳಿಸಿತು. ಮೊದಲ ಪಂದ್ಯದಲ್ಲಿ ಸಾಧಿಸಿದ ದೊಡ್ಡ ಸೋಲಿನ ನಂತರ ಈ ಗೆಲುವು ಭಾರತಕ್ಕೆ ಬಹಳ ನಿರ್ಣಾಯಕವಾಗಿತ್ತು.
ಮಂಗಳವಾರ ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಂನಲ್ಲಿ ಸರಣಿಯ ಮೂರನೇ ಪಂದ್ಯ ನಡೆಯಲಿದೆ. ಇದರಲ್ಲಿ ಭಾರತ ತಂಡ ಗೆಲುವನ್ನು ಸಾಧಿಸಿ ಮುನ್ನಡೆಯನ್ನು ಪಡೆಯುವ ಉತ್ಸಾಹದಲ್ಲಿದೆ. ಮಂಗಳವಾರದ ನಂತರ ಸರಣಿಯಲ್ಲಿ ಎರಡು ಪಂದ್ಯಗಳು ಇರಲಿದ್ದು ಸೋತ ತಂಡ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಲಿದೆ.
ಇನ್ನು ಮೂರನೇ ಪಂದ್ಯಕ್ಕೆ ಟೀಮ್ ಇಂಡಿಯಾ ಅನುಭವಿ ರೋಹಿತ್ ಶರ್ಮಾ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ನಾಯಕ ವಿರಾಟ್ ಕೊಹ್ಲಿ ಈ ಹಿಂದೆ ಮೊದಲ ಎರಡು ಪಂದ್ಯಗಳಲ್ಲಿ ರೋಹಿತ್ಗೆ ವಿಶ್ರಾಂತಿಯನ್ನು ನೀಡಲಾಗುತ್ತದೆ ಎಂದಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಕಣಕ್ಕಿಳಿದರೆ ಕೆಎಲ್ ರಾಹುಲ್ ರೋಹಿತ್ಗೆ ಸ್ಥಾನವನ್ನು ಬಿಟ್ಟುಕೊಡಬೇಕಾದ ಅನಿವಾರ್ಯತೆ ಉಂಟಾಗಲಿದೆ.