
ಪುಣೆ: ಇಂಗ್ಲೆಂಡ್-ಭಾರತ ದ್ವಿತೀಯ ಏಕದಿನ ಪಂದ್ಯದಲ್ಲಿ ಆಂಗ್ಲ ಆಲ್ ರೌಂಡರ್ ಬೆನ್ ಸ್ಟೋಕ್ಸ್ಗೆ ಆನ್ ಫೀಲ್ಡ್ ಅಂಪೈರ್ ಎಚ್ಚರಿಕೆ ನೀಡಿರುವ ಘಟನೆ ನಡೆದಿದೆ. ಪಂದ್ಯಗಳ ವೇಳೆ ಚೆಂಡಿಗೆ ಎಂಜಲು ಸವರುವ ನಿಯಮವನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ನಿಷೇಧಿಸಿದೆ. ಆದರೆ ಸ್ಟೋಕ್ಸ್ ಚೆಂಡಿಗೆ ಎಂಜಲು ಸವರಿದ್ದರಿಂದ ಅವರಿಗೆ ಅಂಪೈರ್ ಎಚ್ಚರಿಸಿದ್ದಾರೆ.
ಭಾರತದ ಇನ್ನಿಂಗ್ಸ್ನ ನಾಲ್ಕನೇ ಓವರ್ನಲ್ಲಿ ಈ ಘಟನೆ ನಡೆದಿದೆ. ಭಾರತ ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿತ್ತು. ರೀಸ್ ಟೋಪ್ಲಿ ಓವರ್ ವೇಳೆ ಡಾಟ್ ಎನಿಸಲ್ಪಟ್ಟ ಚೆಂಡು ಬೆನ್ ಸ್ಟೋಕ್ಸ್ ಕೈಗೆ ಬಂತು. ಆಗ ಅಚಾನಕ್ ಆಗಿ ಸ್ಟೋಕ್ಸ್ ಚೆಂಡಿಗೆ ಎಂಜಲು ಸವರಿದರು.
ಕೊರೊನಾವೈರಸ್ ಕಾರಣದಿಂದ ಕ್ರಿಕೆಟ್ ನಿಲುಗಡೆಯಾಗಿದ್ದಾಗಿನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ವೇಳೆ ಚೆಂಡಿಗೆ ಎಂಜಲು ಹಚ್ಚುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಸ್ಟೋಕ್ಸ್ ನಡೆ ಗಮನಿಸಿದ ಆನ್ ಫೀಲ್ಡ್ ಅಂಪೈರ್ ವಿರೇಂದರ್ ಶರ್ಮಾ ಸ್ಟೋಕ್ಸ್ಗೆ ಎಚ್ಚರಿಕೆ ನೀಡಿದರು.
ಸ್ಟೋಕ್ಸ್ಗೆ ಎಚ್ಚರಿಕೆ ನೀಡಿದ ಬಳಿಕ ಮುನ್ನೆಚ್ಚರಿಕಾ ಕ್ರಮದಂತೆ ಚೆಂಡನ್ನು ಸ್ಯಾನಿಟೈಸ್ ಮಾಡಿ ಆಟ ಮುಂದುವರೆಸಲಾಯ್ತು. ಆದರೆ ಮತ್ತೆ ಇದೇ ತಪ್ಪು ಮುಂದುವರೆದರೆ ಪೆನಾಲ್ಟಿಯಾಗಿ ಎದುರಾಳಿ ತಂಡಕ್ಕೆ 5 ರನ್ ನೀಡುವುದಾಗಿ ನಾಯಕ ಜೋಸ್ ಬಟ್ಲರ್ಗೆ ತಿಳಿಸಿದರು.