
ಬೆಂಗಳೂರು, ಆಗಸ್ಟ್ 31: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ನಾಲ್ಕನೇ ಪಂದ್ಯದಲ್ಲಿ ಸೋಲು ಕಂಡಿದೆ. ಹೆಡಿಂಗ್ಲೆಯಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಪಡೆ ಭಾರತದ ವಿರುದ್ಧ ಸರ್ವಾಂಗೀಣ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದು ಭರ್ಜರಿಯಾಗಿ ಗೆದ್ದು ಬೀಗಿದೆ. ಇಂಗ್ಲೆಂಡ್ ವಿರುದ್ಧ ಲೀಡ್ಸ್ನಲ್ಲಿ ಭಾರತ ಸೋಲು ಕಾಣಲು ಕಾರಣ ಏನೆಂಬುದನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ದಿಗ್ಗಜ ಆಟಗಾರ ಜೆಫ್ರೀ ಬಾಯ್ಕಾಟ್ ಹೇಳಿದ್ದಾರೆ.
ಎರಡನೇ ಟೆಸ್ಟ್ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಇನ್ನಿಂಗ್ಸ್ ಅಂತರದಿಂದ ಸೋಲು ಕಂಡಿತ್ತು. ಅದರಲ್ಲೂ ಮೊದಲ ಇನ್ನಿಂಗ್ಸ್ನಲ್ಲಿ ವಿರಾಟ್ ಪಡೆ ಕೇವಲ 78 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಪಂದ್ಯದಲ್ಲಿ ಆರಂಭದ ದಿನದಿಂದಲೇ ತನ್ನ ಹಿಡಿತವನ್ನು ಕಳೆದುಕೊಂಡಿತ್ತು. ಅಂತಿಮವಾಗಿ ಇದು ನಾಲ್ಕನೇ ದಿನದಲ್ಲಿ ಸೋಲಿನ ಮೂಲಕ ಪಂದ್ಯ ಅಂತ್ಯವಾಯಿತು.
ಹೊಸ ಚೆಂಡನ್ನು ಉತ್ತಮವಾಗಿ ಬಳಸಿಕೊಂಡರು: ಇನ್ನು ಭಾರತದ ವಿರುದ್ಧದ ಈ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೇಲುಗೈ ಸಾಧಿಸಲು ಪ್ರಮುಖ ಕಾರಣ ಹೊಸ ಚೆಂಡು ಎಂದು ಜೆಫ್ರೀ ಬಾಯ್ಕಾಟ್ ಅಭಿಪ್ರಾಯಪಟ್ಟಿದ್ದಾರೆ. ಇಂಗ್ಲೆಂಡ್ ತಂಡ ಈ ಪಂದ್ಯವನ್ನು ಗೆಲ್ಲಲು ಹೊಸ ಚೆಂಡು ಪ್ರಮುಖ ಪಾತ್ರವಹಿಸಿತು ಎಂದಿದ್ದಾರೆ ಜೆಫ್ರೀ ಬಾಯ್ಕಾಟ್. 76 ರನ್ಗಳಿಂದ ಹೆಡಿಂಗ್ಲೆ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ ಗೆಲ್ಲುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ತಂಡಗಳು ಕೂಡ ಈಗ 1-1 ಅಂತರದಿಂದ ಸಮಬಲ ಸಾಧಿಸಿದೆ.
ಇಂಗ್ಲೆಂಡ್ ಗೆಲ್ಲಲು ಕಾರಣ: ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಜೆಫ್ರೀ ಬಾಯ್ಕಾಟ್ "ಹೆಡಿಂಗ್ಲೆ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ ಗೆಲ್ಲಲು ಕಾರಣ ಅವರು ಹೊಸ ಚೆಂಡಿನಲ್ಲಿ ಭಾರತಕ್ಕಿಂತ ಉತ್ತಮವಾಗಿ ಆಡಿದರು. ಟೆಸ್ಟ್ ಪಂದ್ಯಗಳಲ್ಲಿ ಹೊಸ ಚೆಂಡನ್ನು ಎದುರಿಸುವುದು ಬಹಳ ಮುಖ್ಯವಾಗುತ್ತದೆ. ಯಾರು ಪಂದ್ಯವನ್ನು ಗೆಲ್ಲಬಹುದು ಎಂಬುದರಲ್ಲಿ ಇದು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಇಡೀ ತಂಡಕ್ಕೆ ಆತ್ಮವಿಶ್ವಾಸದಿಂದ ಮುಂದುವರಿಯಲು ಒಂದು ವೇದಿಕೆಯನ್ನು ಸೃಷ್ಟಿಸುತ್ತದೆ" ಎಂದಿದ್ದಾರೆ ಬಾಯ್ಕಾಟ್. ದಿ ಟೆಲಿಗ್ರಾಫ್ಗೆ ಬರೆದಿರುವ ಅಂಕಣದಲ್ಲಿ ಬಾಯ್ಕಾಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ಇಂಗ್ಲೆಂಡ್ ತಂಡದ ಅಗ್ರ ಮೂವರು ಬ್ಯಾಟ್ಸ್ಮನ್ಗಳು 199 ರನ್ಗಳನ್ನು ಗಳಿಸಿದರು. ಅದು ತುಂಬಾ ಅಮೂಲ್ಯವಾದದ್ದು. ಆದರೆ ಭಾರತ ತಂಡದತ್ತ ನೋಡಿ. ವಿರಾಟ್ ಕೊಹ್ಲಿ ಟಾಸ್ ಗೆದ್ದರಾದರೂ ಮೋಡ ಕವಿದ ವಾತಾವರಣದಲ್ಲಿ ತೇವಗೊಂಡಿದ್ದ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ ಪಂದ್ಯವನ್ನು ಸೋತಿದ್ದಾರೆ. ಭೋಜನ ವಿರಾಮಕ್ಕೂ ಮುನ್ನವೇ ಅವರು ನಾಲ್ಕು ವಿಕೆಟ್ ಕಳೆದುಕೊಂಡಿದ್ದರು. ಅದಕ್ಕೆ ಕಾರಣ ಅವರು ಹೊಸ ಚೆಂಡನ್ನು ಎದುರಿಸಲು ವಿಫಲವಾಗಿದ್ದರು" ಎಂದು ಬಾಯ್ಕಾಟ್ ವಿಶ್ಲೇಷಣೆಯನ್ನು ಮಾಡಿದ್ದಾರೆ.
ಇನ್ನು ಇದೇ ಸಂದರ್ಭದ್ಲಲಿ ಬಾಯ್ಕಾಟ್ ಭಾರತದ ಎರಡನೇ ಇನ್ನಿಂಗ್ಸ್ನ ಕುಸಿತವನ್ನು ಕೂಡ ಉಲ್ಲೇಖಿಸಿದ್ದಾರೆ. 215 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಲ್ಲಿಂದ ತಂಡ 278 ರನ್ಗಳಿಗೆ ಆಲೌಟ್ ಆಗಿತ್ತು. "ಎರಡನೇ ಇನ್ನಿಂಗ್ಸ್ನಲ್ಲಿ ಅವರು ಮತ್ತೆ ವಿಫಲವಾಗಿದ್ದರು. ಆದರೆ ಈಗ ಅದು ನಾಲ್ಕನೇ ದಿನ ಎರಡನೇ ಹೊಸ ಚೆಂಡು ನೀಡದ ಸಂದರ್ಭದಲ್ಲಾಗಿತ್ತು. 19 ಓವರ್ಗಳಲ್ಲಿ ಕೇವಲ 63 ರನ್ಗಳಿಗೆ ಉಳಿದ 8 ವಿಕೆಟ್ಗಳನ್ನು ತಂಡ ಕಳೆದುಕೊಂಡಿತ್ತು" ಎಂದಿದ್ದಾರೆ.
ಇನ್ನು ಆತಿಥೇಯ ಇಂಗ್ಲೆಂಡ್ ತಂಡ ಓವಲ್ ಅಂಗಳದಲಲ್ಇಯೂ ಹೆಡಿಂಗ್ಲೆಯಲ್ಲಿ ನೀಡಿದ ಪ್ರದರ್ಶನ ಮುಂದುವರಿಸಿದರೆ ಮತ್ತೊಂದು ಗೆಲುವು ಸಾಧಿಸುವ ಸಾಧ್ಯತೆಯಿದೆ ಎಂದಿದ್ದಾರೆ. "ಇಂಗ್ಲೆಂಡ್ ಈ ರೀತಿಯಾಗಿ ಉತ್ತಮ ಆರಂಭವನ್ನು ಪಡೆದುಕೊಂಡರೆ ಓವಲ್ನಲ್ಲಿಯೂ ಗೆದ್ದು ಸರಣಿಯನ್ನು 2-1 ಅಂತರದಿಂದ ಮುನ್ನಡೆ ಪಡೆದುಕೊಳ್ಳಲಿದ್ದಾರೆ" ಎಂದಿದ್ದಾರೆ.