
ಐದನೇ ಟೆಸ್ಟ್ ಸರಣಿ ರದ್ದಾಗಿದ್ದೇಕೆ, ಅಸಲಿ ಕಾರಣವೇನು?
ಕೋವಿಡ್-19 ಪ್ರಕರಣಗಳು ಹೆಚ್ಚಿದ್ದರಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ರದ್ದಾಗಿದೆ. ಟೀಮ್ ಇಂಡಿಯಾದಲ್ಲಿ ಮುಖ್ಯವಾಗಿ ಕೋಚಿಂಗ್, ಸಿಬ್ಬಂದಿ ವಿಭಾಗದಲ್ಲಿ ಬಹಳಷ್ಟು ಪ್ರಕರಣಗಳು ಕಾಣಿಸಿಕೊಂಡಿದ್ದವು. ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್, ಫಿಸಿಯೋ ನಿತಿನ್ ಪಾಟೆಲ್, ಮತ್ತೊಬ್ಬ ಬೆಂಬಲ ಸಿಬ್ಬಂದಿ ಜೂನಿಯರ್ ಫಿಸಿಯೋ ಯೋಗೇಶ್ ಪಾರ್ಮರ್ ಕೋವಿಡ್-19 ಫಲಿತಾಂಶಗಳು ಪಾಸಿಟಿವ್ ಬಂದಿದ್ದರಿಂದ ಕೊನೇ ಟೆಸ್ಟ್ ಅನ್ನು ಮುಂದೂಡಲು ಅಂತಿಮವಾಗಿ ನಿರ್ಧರಿಸಲಾಯ್ತು. ಟೀಮ್ ಇಂಡಿಯಾದ ಎಲ್ಲಾ ಆಟಗಾರರ ಫಲಿತಾಂಶ ನೆಗೆಟಿವ್ ಬಂದಿತ್ತು. ಆದರೆ ಕೋಚ್ಗಳು, ಬೆಂಬಲ ಸಿಬ್ಬಂದಿಗಳ ನೆರವೇ ಇಲ್ಲದೆ ಇಡೀ ಒಂದು ಟೆಸ್ಟ್ ಪಂದ್ಯ ಆಡೋದು ಸುಲಭದ ಮಾತಲ್ಲ. ಹೀಗಾಗಿ ಪಂದ್ಯವನ್ನು ಬೇರೊಂದು ವೇಳಾಪಟ್ಟಿಯಲ್ಲಿ ನಡೆಸಲು ನಿರ್ಧರಿಸಿ ಪಂದ್ಯವನ್ನು ಮುಂದೂಡಲಾಗಿದೆ.

ಭಾರತ ಮತ್ತು ಇಂಗ್ಲೆಂಡ್ ಬೋರ್ಡ್ಗಳು ಏನು ಹೇಳುತ್ತವೆ?
ಐದು ಪಂದ್ಯಗಳ ಈ ಟೆಸ್ಟ್ ಸರಣಿ 2-2ರಿಂದ ಕೊನೆಗೊಳ್ಳುತ್ತಾ ಅಥವಾ 2-1ರಲ್ಲೇ ಉಳಿಯುತ್ತಾ ಎಂಬ ಬಗ್ಗೆ ಕ್ರಿಕೆಟ್ ವಲಯದಲ್ಲಿ ತೀವ್ರ ಚರ್ಚೆಗಳಾಗಿತ್ತು. ಆದರೆ ಬಿಸಿಸಿಐ ಮತ್ತು ಇಸಿಬಿ ಪ್ರಕಟಿಸಿರುವ ಪ್ರಕಟಣೆಗಳಂತೆ ಐದು ಪಂದ್ಯಗಳ ಟೆಸ್ಟ್ ಸರಣಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ರದ್ದಾಗಿರುವ ಈ ಟೆಸ್ಟ್ ಪಂದ್ಯವನ್ನು ಮುಂದೊಂದಿ ದಿನ ಗೊತ್ತುಪಡಿಸಿ ಆವತ್ತು ನಡೆಸಲು ಎರಡೂ ಕ್ರಿಕೆಟ್ ಬೋರ್ಡ್ಗಳು ನಿರ್ಧರಿಸಿವೆ. ಆದ್ದರಿಂದ ಸದ್ಯಕ್ಕೆ ಸರಣಿ 2-1ರಲ್ಲೇ ಉಳಿದುಕೊಂಡಿದೆ. ಇದರರ್ಥ ಈ ಟೆಸ್ಟ್ ಪಂದ್ಯ ಈಗಿನಿಂದ ಮುಂದಿನ ವರ್ಷದ ಒಳಗಾಗಿ ಯಾವುದೇ ಸಮಯದಲ್ಲೂ ನಡೆಯಬಹುದು. ಅಂತೂ ಕೊನೇ ಟೆಸ್ಟ್ ಪಂದ್ಯ ನಡೆಯದ ಹೊರತು ನಿರ್ಧಾರ ತಾಳಲು ಕಷ್ಟ. ಒಂದು ವೇಳೆ ಕೊನೇ ಟೆಸ್ಟ್ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಬಿಸಿಸಿಐ ಮತ್ತು ಇಸಿಬಿ ಜೊತೆಯಾಗಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಬೇಕಾಗುತ್ತದೆ. ಅಥವಾ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮಧ್ಯ ಪ್ರವೇಶಿಸಲು ಕಾಯಬೇಕಾಗುತ್ತದೆ.

ಆಟಕ್ಕಿಂತ ನಮಗೆ ಆಟಗಾರರ ಬದುಕೇ ಮುಖ್ಯ
ತಾಂತ್ರಿಕವಾಗಿ ಹೇಳೋದಾದ್ರೆ, ಟೆಸ್ಟ್ ಸರಣಿಯನ್ನು ಕೊನೆಗೊಳಿಸಲು ಭಾರತ ಮತ್ತು ಇಂಗ್ಲೆಂಡ್ ಎರಡೂ ಬೋರ್ಡ್ಗಳು ಪರದಾಡಿದರೆ, ಐಸಿಸಿ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಲು ಒಂದು ಸಮಿತಿ ರಚಿಸುತ್ತದೆ. ಹೀಗಾಗಿ ಅಂತಿಮ ನಿರ್ಧಾರ ತಾಳೋದು ಐಸಿಸಿ ಕೈಯಲ್ಲಿದೆ. ಈ ಬೆಳವಣಿಗೆಯ ಬಗ್ಗೆ ಮಾತನಾಡಿದ ಮೂಲವೊಂದು, "ಕೋವಿಡ್-19 ಭೀತಿಯ ಈ ದಿನಗಳಲ್ಲಿ ನಾವು ಒಂದಂತೂ ಪಾಠ ಕಲಿತಿದ್ದೇವೆ. ಅದೇನಂದರೆ, ನಮಗೆ ಅಂತಿಮವಾಗಿ ಈ ಪಂದ್ಯಕ್ಕೆ ಸಂಬಂಧಿಸಿದ ಆಟಗಾರರು, ಸಿಬ್ಬಂದಿಗಳು ಮತ್ತವರ ಕುಟುಂಬಸ್ಥರ ಆರೋಗ್ಯ, ಬದುಕೇ ಮುಖ್ಯ. ಈ ವಿಚಾರದಲ್ಲೂ ಹಾಗೇನೆ. ಆಟದ ನಿಯಮ ಏನು ಹೇಳುತ್ತದೋ ಅದನ್ನು ಪಾಲಿಸುತ್ತೇವೆ. ಆದರೆ ಒಮ್ಮೆ ಕಳೆದು ಹೋದ ಬದುಕನ್ನು ಮತ್ತೆ ಕಂಡುಕೊಳ್ಳಲು ಸಾಧ್ಯವಿಲ್ಲ ನೋಡಿ," ಎಂದು ಹೇಳಿದೆ. ಒಂದು ದಿನ ಮುಂದೂಡಿ ಪಂದ್ಯ ನಡೆಸಲು ಸಾಧ್ಯವಿಲ್ಲವೆ? ಕಷ್ಟ. ಯಾಕೆಂದರೆ ಭಾರತೀಯ ತಂಡದಲ್ಲಿ ಕೋಚ್ಗಳು, ಬೆಂಬಲ ಸಿಬ್ಬಂದಿಗಳೇ ಇಲ್ಲ. ಅವರೆಲ್ಲರೂ ಕೋವಿಡ್ಗೆ ತುತ್ತಾಗಿದ್ದಾರೆ. ಅವರು ಚೇತರಿಸೋಕೆ ಸಮಯ ಹಿಡಿಯುತ್ತೆ. ಕಾಯುತ್ತ ಕೂರೋದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಇದೇ ಸೆಪ್ಟೆಂಬರ್ 19ಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ದ್ವಿತೀಯ ಹಂತದ ಸ್ಪರ್ಧೆಗಳು ನಡೆಯಲಿವೆ. ಹೀಗಾಗಿ ಟೆಸ್ಟ್ ಸರಣಿ ಎಲ್ಲಿಗೆ ಮುಟ್ಟಲಿದೆ ಅನ್ನೋದು ಕಾದು ನೋಡಬೇಕಷ್ಟೇ.


Click it and Unblock the Notifications












