
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗಾಯದ ಆತಂಕಕ್ಕೆ ಒಳಗಾಗಿದೆ. ಫೀಲ್ಡಿಂಗ್ ವೇಳೆ ಯುವ ಬ್ಯಾಟ್ಸ್ಮನ್ ಶ್ರೇಯಸ್ ಐಯ್ಯರ್ ಗಾಯಕ್ಕೆ ಒಳಗಾಗಿದ್ದು ಭುಜದ ನೋವಿವನ್ನು ಅನುಭವಿಸಿ ಅಂಗಳವನ್ನು ತೊರೆದಿದ್ದಾರೆ.
ಬ್ಯಾಟಿಂಗ್ ವೇಳೆ ಕೇವಲ 6 ರನ್ ಗಳಿಸಿ ಫೆವಿಲಿಯನ್ ಸೇರಿದ್ದ ಶ್ರೇಯಸ್ ಐಯ್ಯರ್ ಫೀಲ್ಡಿಂಗ್ ಸಂದರ್ಭದಲ್ಲಿ ಶಾರ್ದೂಲ್ ಠಾಕೂರ್ ಎಸೆದ 8ನೇ ಓವರ್ನಲ್ಲಿ ಬೌಂಡರಿಯನ್ನು ತಡೆಯುವ ಸಲುವಾಗಿ ಶ್ರೇಯಸ್ ಐಯ್ಯರ್ ಡೈವ್ ಮಾಡಿದರು. ಆದರೆ ಈ ಸಂದರ್ಭದಲ್ಲಿ ಎಡ ಭುಜಕ್ಕೆ ಹೆಚ್ಚಿನ ಒತ್ತಡ ಬಿದ್ದ ಕಾರಣ ಅವರು ತಕ್ಷಣವೇ ಭುಜದ ನೋವಿನಿಂದ ನರಳಿದ್ದಾರೆ.
ಬಳಿಕ ಭಾರತೀಯ ತಂಡದ ಫಿಸಿಯೋಥೆರಪಿಸ್ಟ್ ಅಂಗಳಕ್ಕೆ ಆಗಮಿಸಿ ಚಿಕಿತ್ಸೆ ನೀಡಿದರಾದರೂ ಅಂಗಳ ತೊರೆಯುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಬಳಿಕ ಶ್ರೇಯಸ್ ಐಯ್ಯರ್ ಬದಲಿಗೆ ಯುವ ಆಟಗಾರ ಶುಬ್ಮನ್ ಗಿಲ್ ಬದಲಿಯಾಗಿ ಫಿಲ್ಡಿಂಗ್ ನಡೆಸಲು ಅಂಗಳಕ್ಕೆ ಇಳಿದರು.
ಇದಕ್ಕೂ ಮುನ್ನ ಟೀಮ್ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಕೂಡ ಗಾಯಕ್ಕೆ ಒಳಗಾಗಿ ಫೀಲ್ಡಿಂಗ್ನಿಂದ ಹೊರಗುಳಿದಿದ್ದಾರೆ. ಭಾರತದ ಬ್ಯಾಟಿಂಗ್ ಸಂದರ್ಭದಲ್ಲಿ ರೋಹಿತ್ ಶರ್ಮಾ ಮಾರ್ಕ್ ವುಡ್ ಎಸೆತದ ಮೊಣಕೈಗೆ ಬಡಿದಿತ್ತು. ಇದು ರೋಹಿತ್ಗೆ ತೀವ್ರ ನೋವನ್ನುಂಟು ಮಾಡಿತ್ತು. ಆ ಸಂದರ್ಭದಲ್ಲಿ ಚಿಕಿತ್ಸೆ ಪಡೆದು ಬ್ಯಾಟಿಂಗ್ ಮುಂದುವರಿಸಿದ ಶರ್ಮಾ ಫಿಲ್ಡಿಂಗ್ ವೇಳೆ ಅಂಗಳಕ್ಕೆ ಇಳಿದಿಲ್ಲ. ರೋಹಿತ್ ಶರ್ಮಾಗೆ ಸೂರ್ಯಕುಮಾರ್ ಯಾದವ್ ಬದಲಿ ಫೀಲ್ಡರ್ ಆಗಿ ಕಣಕ್ಕಿಳಿದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು 317 ರನ್ ದಾಖಲಿಸಿದೆ. ಆರಂಭಿಕ ಆಟಗಾರ ಶಿಖರ್ ಧವನ್ 98 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ವಿರಾಟ್ ಕೊಹ್ಲಿ 56 ರನ್ ಸಿಡಿಸಿದರು. ಬಳಿಕ ಬಂದ ಕೆಎಲ್ ರಾಹುಲ್ ಹಾಗೂ ಕೃನಾಲ್ ಪಾಂಡ್ಯ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಕೆಎಲ್ ರಾಹುಲ್ 43 ಎಸೆತಗಳಲ್ಲಿ 62 ರನ್ ಬಾರಿಸಿ ಫಾರ್ಮ್ಗೆ ಮರಳಿದರೆ ಕೃನಾಲ್ ಪಾಂಡ್ಯ ಚೊಚ್ಚಲ ಪಂದ್ಯದಲ್ಲಿಯೇ 58 ರನ್ಗಳಿಸಿ ದಾಖಲೆ ಬರೆದರು.