ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯದತ್ತ ಈಗ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ಸರಣಿಯ ನಾಲ್ಕು ಪಂದ್ಯಗಳು ಮುಕ್ತಾಯವಾಗಿದ್ದು ಸರಣಿಯಲ್ಲಿ ಭಾರತ ಮುನ್ನಡೆ ಸಾಧಿಸಿದೆ. ಓವಲ್ನಲ್ಲಿ ನಡೆದ ನಾಲ್ಕನೇ ಪಂದ್ಯವನ್ನು ಭಾರತೀಯ ಕ್ರಿಕೆಟ್ ತಂಡ ಭರ್ಜರಿಯಾಗಿ ಗೆದ್ದುಕೊಂಡಿದ್ದು ಕೊನೆಯ ಪಂದ್ಯವನ್ನಾಡಲು ಭಾರತ ಕ್ರಿಕೆಟ್ ತಂಡ ಲಂಡನ್ನಿಂದ ಮ್ಯಾಂಚೆಸ್ಟರ್ನತ್ತ ಪ್ರಯಾಣ ಬೆಳೆಸಿದೆ.
ಟೀಮ್ ಇಂಡಿಯಾ ಲಂಡನ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿದೆ. ಲಂಡನ್ನಲ್ಲಿರುವ ಎರಡು ಪ್ರಮುಖ ಕ್ರೀಡಾಂಗಣಗಳಾದ ಲಾರ್ಡ್ಸ್ ಹಾಗೂ ಓವಲ್ನಲ್ಲಿ ನಡೆದ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಲು ಸಾಧ್ಯವಾಗಿದೆ. ಈಗ ಟೀಮ್ ಇಂಡಿಯಾ ಮುಂದಿನ ಪಂದ್ಯ ನಡೆಯುವ ಓಲ್ಡ್ ಟ್ರಾಫರ್ಡ್ ಮೇಲೆಯೂ ನಿರೀಕ್ಷೆಯಿಟ್ಟಿದ್ದು ಗೆಲ್ಲುವ ವಿಶ್ವಾಸದಲ್ಲಿ ಟೀಮ್ ಇಂಡಿಯಾ ಇದೆ.
ಟೀಮ್ ಇಂಡಿಯಾದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ವೃದ್ಧಿಮಾನ್ ಸಾಹ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ತಂಡದ ಪ್ರಯಾಣದ ಬಗ್ಗೆ ಮಾಹಿತಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸಹ ಆಟಗಾರರೊಂದಿಗಿನ ಫೋಟೋವನ್ನು ಅವರು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಸಾಹಾ ಜೊತೆಗೆ ಚೇತೇಶ್ವರ್ ಪೂಜಾರ, ಮಯಾಂಕ್ ಅಗರ್ವಾಲ್, ಅಭಿಮನ್ಯು ಮಿಥುನ್ ಮತ್ತು ಗಿರೀಶ್ ಡೋಂಗ್ರೆ ಕಾಣಿಸಿಕೊಂಡಿದ್ದಾರೆ.
ರೋಹಿತ್ ಶರ್ಮಾಗೆ ಗಾಯ, 5ನೇ ಟೆಸ್ಟ್ನಲ್ಲಿ ಆಡೋ ಬಗ್ಗೆ ಸುಳಿವಿತ್ತ ಹಿಟ್ಮ್ಯಾನ್
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯ ಸೆಪ್ಟೆಂಬರ್ 10ರಿಂದ ಆರಂಭವಾಗಲಿದೆ. ನಾಲ್ಕು ಹಾಗೂ ಐದನೇ ಟೆಸ್ಟ್ ಪಂದ್ಯಗಳ ನಡುವೆ ಕೇವಲ 3 ದಿನಗಳ ಅಂತರ ಮಾತ್ರವೇ ಇದೆ. ಹೀಗಾಗಿ ಟೀಮ್ ಇಂಡಿಯಾ ಲಂಡನ್ನಲ್ಲಿ ನಾಲ್ಕನೇ ಟೆಸ್ಟ್ ಪಂದ್ಯವನ್ನು ಮುಗಿಸಿ ವಿಶ್ರಾಂತಿಯನ್ನು ಪಡೆಯದೆಯೇ ಮ್ಯಾಂಚೆಸ್ಟರ್ನತ್ತ ಪ್ರಯಾಣ ಬೆಳೆಸಿದೆ.
ಹೆಡಿಂಗ್ಲೆ ಪಂದ್ಯವನ್ನು ಗೆದ್ದು ಸಂಭ್ರಮದಲ್ಲಿದ್ದ ಇಂಗ್ಲೆಂಡ್ ತಂಡ ಅದೇ ಉತ್ಸಾಹದಲ್ಲಿ ಲಂಡನ್ನ ಓವಲ್ ಕ್ರೀಡಾಂಗಣಕ್ಕೆ ಇಳಿದಿತ್ತು. ಐವತ್ತು ವರ್ಷಗಳಿಂದ ಭಾರತ ಗೆಲುವನ್ನೇ ಕಾಣದ ಓವಲ್ ಅಂಗಳದಲ್ಲಿಯೂ ಇಂಗ್ಲೆಂಡ್ ತಂಡ ಗೆದ್ದು ಬೀಗುವ ಹುಮ್ಮಸ್ಸಿನಲ್ಲಿತ್ತು. ಇದಕ್ಕೆ ಪೂರಕವಾಗಿ ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ ಬೌಲಿಂಗ್ನಲ್ಲಿ ಭಾರತ ತಂಡಕ್ಕೆ ಆಘಾತ ನೀಡಿತ್ತು. ಭಾರತ ತಂಡವನ್ನು 191 ರನ್ಗಳಿಗೆ ಕಟ್ಟಿಹಾಕುವಲ್ಲಿ ಇಂಗ್ಲೆಂಡ್ ತಮಡ ಸಫಲವಾಗಿತ್ತು. ನಂತರ ಮೊದಲ ಇನ್ನಿಂಗ್ಸ್ನ ಬ್ಯಾಟಿಂಗ್ನಲ್ಲಿ ಆರಂಭಿಕ ಆಘಾತ ಅನುಭವಿಸಿದ ನಂತರ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳ ಹೋರಾಟದ ಪರಿಣಾಮವಾಗಿ ಇಂಗ್ಲೆಂಡ್ 99 ರನ್ಗಳ ಮುನ್ನಡೆ ಪಡೆಯಲು ಸಾಧ್ಯವಾಗಿತ್ತು.
ಓವಲ್ ಟೆಸ್ಟ್ ಪಂದ್ಯದಲ್ಲಿ ಬೃಹತ್ ದಾಖಲೆ ನಿರ್ಮಿಸಿದ ಎರಡೂ ತಂಡಗಳ ನಾಲ್ವರು ಆಟಗಾರರು
ಇನ್ನು ಮೊದಲ ಇನ್ನಿಂಗ್ಸ್ನಲ್ಲಿ 99 ರನ್ಗಳ ಹಿನ್ನಡೆ ಅನುಭವಿಸಿದ ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭಿಕ ಆಟಗಾರರಿಂದ ಹಿಡಿದು ಟೀಮ್ ಇಂಡಿಯಾದ ಬಹುತೇಕ ಎಲ್ಲಾ ಆಟಗಾರರು ಕೂಡ ಉತ್ತಮ ಕೊಡುಗೆ ನೀಡಲು ಸಾಧ್ಯವಾಗಿತ್ತು. ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಉತ್ತಮ ವೇದಿಕೆ ಸೃಷ್ಟಿಸಿದರು. ಬಳಿಕ ಶಾರ್ದೂಲ್ ಠಾಕೂರ್ ಹಾಗೂ ರಿಷಭ್ ಪಂತ್ ಕೂಡ ಉತ್ತಮ ಪ್ರದರ್ಶನ ನೀಡಿ ಅರ್ಧ ಶತಕದ ಪ್ರದರ್ಶನ ನೀಡಿದರು. ಈ ಮೂಲಕ ಭಾರತ 466 ರನ್ಗಳನ್ನು ಎರಡನೇ ಇನ್ನಿಂಗ್ಸ್ನಲ್ಲಿ ಗಳಿಸಲು ಶಕ್ತವಾಯಿತು. ಈ ಮೂಲಕ ಎದುರಾಳಿ ಇಂಗ್ಲೆಂಡ್ಗೆ ಎರಡನೇ ಇನ್ನಿಂಗ್ಸ್ನಲ್ಲಿ 367 ರನ್ಗಳ ದಾಖಲೆಯ ಗುರಿಯನ್ನು ನೀಡಿತ್ತು. ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಬೌಲಿಂಗ್ನಲ್ಲಿಯೂ ಅಮೋಘ ಯಶಸ್ಸು ಸಾಧಿಸಲು ಸಾಧ್ಯವಾಯಿತು. ಮೊದಲ ವಿಕೆಟ್ಗೆ ಭರ್ಜರಿ 100 ರನ್ಗಳ ಜೊತೆಯಾಟ ನೀಡಿದ ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು ಬಳಿಕ ಕುಸಿಯುತ್ತಾ ಸಾಗಿತು. ಟೀಮ್ ಇಂಡಿಯಾದ ಒಟ್ಟಾರೆ ನೀಡಿದ ಪ್ರದರ್ಶನದಿಂದಾಗಿ ಕೇವಲ 210 ರನ್ಗಳಿಗೆ ಇಂಗ್ಲೆಂಡ್ ಆಲೌಟ್ ಆಗಿತ್ತು. ಈ ಮೂಲಕ ಭಾರತ ತಂಡ 157 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.