
ಪೂಣೆ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಪಂದ್ಯದಲ್ಲಿ ನಿರಾಸೆಯ ಪ್ರದರ್ಶನ ನೀಡಿದ್ದ ಕನ್ನಡಿಗ ಕೆಎಲ್ ರಾಹುಲ್, ಆರಂಭಿಕ ಏಕದಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. 43 ಎಸೆತಗಳಲ್ಲಿ ಅಜೇಯ 62 ರನ್ ಸಿಡಿಸಿದ್ದರು. ಇದರಲ್ಲಿ 4 ಫೋರ್ಸ್, 4 ಸಿಕ್ಸರ್ ಸೇರಿತ್ತು.
ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಶಿಖರ್ ಧವನ್ ಮತ್ತು ಕೃನಾಲ್ ಪಾಂಡ್ಯ ಬ್ಯಾಟಿಂಗ್ನಿಂದಾಗಿ ಅಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರಾಳಿಗೆ 317 ರನ್ ಗುರಿ ನೀಡಲು ಸಾಧ್ಯವಾಗಿತ್ತು. ಅಷ್ಟೇ ಅಲ್ಲ ಪಂದ್ಯದಲ್ಲಿ ಕೊಹ್ಲಿ ಪಡೆ 66 ರನ್ಗಳ ಭರ್ಜರಿ ಜಯ ಗಳಿಸಿತ್ತು.
ಮೊದಲನೇ ಏಕದಿನ ಪಂದ್ಯದಲ್ಲಿ ಭಾರತದ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಆಡಿರಲಿಲ್ಲ. ಪಂತ್ ಬದಲು ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದ್ದರು. ಹೀಗಾಗಿ ಕೀಪಿಂಗ್ ವಿಚಾರದಲ್ಲಿ ರಾಹುಲ್ ಮತ್ತು ಪಂತ್ ಮಧ್ಯೆ ಸ್ಪರ್ಧೆ ನಡೆಯುತ್ತಿದೆಯಾ ಎಂಬ ಯೋಚನೆ ಬರೋದು ಸಹಜಾನೆ. ಆದರೆ ಇದಕ್ಕೆ ರಾಹುಲ್ ಪ್ರತಿಕ್ರಿಯಿಸಿದ್ದಾರೆ.
'ನೀವು ಟೀಮ್ ಇಂಡಿಯಾದಲ್ಲಿ ಇದ್ದೀರೆಂದರೆ ಅಲ್ಲಿ ದೊಡ್ಡಮಟ್ಟಿನ ಸ್ಪರ್ಧೆ ಇದ್ದೇ ಇರುತ್ತದೆ. ಇಂಥ ಸ್ಥಾನದಲ್ಲಿ ನೀವು ನಿಮ್ಮದೇ ಎಂಬಂತೆ ಭಾವಿಸಿ ಆರಾಮವಾಗಿ ಕೂರುವಂತಿಲ್ಲ. ನಮ್ಮ ತಂಡದಲ್ಲಿ ದೊಡ್ಡ ಮಟ್ಟಿನ ಪ್ರತಿಭಾವಂತರಿದ್ದಾರೆ. ಅದು ಒಳ್ಳೆಯ ವಿಚಾರವೆ. ಈ ತಂಡದಲ್ಲಿದ್ದಾಗ ನೀವು ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪ್ರತೀ ದಿನವೂ ಪ್ರಯತ್ನಿಸುತ್ತಲೇ ಇರುತ್ತೀರಿ,' ಎಂದು ಎಂದು ರಾಹುಲ್ ಹೇಳಿದ್ದಾರೆ.