
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿ ಮಂಗಳವಾರದಿಂದ ಆರಂಭವಾಗಿದೆ. ಈ ಸರಣಿಯ ಮೊದಲ ಪಂದ್ಯದ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಏಕದಿನ ಸರಣಿಯಲ್ಲಿ ಭಾರತ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುಕೊಳ್ಳುವ ಮೂಲಕ ವಶಕ್ಕೆ ಪಡೆಯಲಿದೆ ಎಂದಿದ್ದಾರೆ.
ಇಂಗ್ಲೆಂಡ್ ನಾಯಕ ಮೈಕಲ್ ವಾನ್ ಕಳೆದ ಕೆಲ ತಿಂಗಳುಗಳಿಂದ ಟೀಮ್ ಇಂಡಿಯಾ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಾಗಿದ್ದರು. ಇದಕ್ಕಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಮೈಕಲ್ ವಾಮನ್ ಸತತವಾಗಿ ಕಾಲೆಳೆತಕ್ಕೆ ಒಳಗಾಗಿದ್ದರು. ಆದರೆ ಈಗ ಏಕದಿನ ಸರಣಿಯಲ್ಲಿ ಭಾರತದ ಪರವಾಗಿ ಭವಿಷ್ಯ ನುಡಿದು ಅಚ್ಚರಿಯನ್ನು ಮೂಡಿಸಿದ್ದಾರೆ.
ಟ್ವೀಟ್ ಮೂಲಕ ಮೈಕಲ್ ವಾನ್ ತಮ್ಮ ಭವಿಷ್ಯವನ್ನು ಹೇಳಿದ್ದಾರೆ. ಇದರಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಹಾಗೂ ಬ್ಯಾಟ್ಸ್ಮನ್ ಜೋ ರೂಟ್ ತಂಡದಲ್ಲಿ ಇಲ್ಲದಿರುವುದು ಇಂಗ್ಲೆಂಡ್ಗೆ ಹಿನ್ನಡೆಯಾಗಲಿದೆ ಎಂಬರ್ಥದಲ್ಲಿ ವಾನ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಸತತವಾಗಿ ಕ್ರಿಕೆಟ್ ಆಡುತ್ತಿರುವ ಹಿನ್ನೆಲೆಯಲ್ಲಿ ಜೋ ರೂಟ್ಗೆ ದೀರ್ಘ ವಿಶ್ರಾಂತಿಯನ್ನು ನೀಡಲಾಗಿದೆ. ಶ್ರೀಲಂಕಾ ಹಾಗೂ ಭಾರತದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಜೋ ರೂಟ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದರು. ಮತ್ತೊಂದೆಡೆ ವೇಗಿ ಜೋಫ್ರಾ ಆರ್ಚರ್ ಮೊಣಕೈ ನೋವಿಗೆ ಒಳಗಾಗಿದ್ದಾರೆ. ಹೀಗಾಗಿ ವೈದ್ಯಕೀಯ ಮೇಲ್ವಿಚಾರಣೆಗಾಗಿ ಯುಕೆಗೆ ಆರ್ಚರ್ ಮರಳಿದ್ದಾರೆ.
ಮೈಕಲ್ ವಾನ್ ಇದೇ ಮೊದಲ ಬಾರಿಗೆ ಭಾರತದ ಪರವಾಗಿ ತಮ್ಮ ಭವಿಷ್ಯವನ್ನು ನುಡಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ 0-4 ಅಂತರದಿಂದ ಕ್ಲೀನ್ ಸ್ವೀಪ್ ಆಗಿ ಶರಣಾಗುತ್ತದೆ ಎಂದಿದ್ದರು. ಬಳಿಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಭವಿಷ್ಯ ನುಡಿದಿದ್ದ ವಾನ್ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ಕಾಲೆಳೆಸಿಕೊಂಡಿದ್ದರು.