
ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ಗಳ ಮುಂದೆ ಟೀಮ್ ಇಂಡಿಯಾ ಬೌಲರ್ಗಳು ನಿರೀಕ್ಷಿತ ಯಶಸ್ಸು ಪಡೆಯುವಲ್ಲಿ ವಿಫಲರಾಗಿದ್ದಾರೆ. ಶ್ರೇಯಸ್ ಐಯ್ಯರ್ ನೀಡಿದ ಸಮಯೋಚಿತ ಪ್ರದರ್ಶನ ಭಾರತ 125 ರನ್ಗಳ ಗುರಿಯನ್ನು ಇಂಗ್ಲೆಂಡ್ ಮುಂದಿಡಲು ಕಾರಣವಾಗಿದೆ.
ಇನ್ನು ಭಾರತದ ಇನ್ನಿಂಗ್ಸ್ನಲ್ಲಿ ಎರಡನೇ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ರಿಷಭ್ ಪಂತ್. 23 ಎಸೆತಗಳಲ್ಲಿ ಪಂತ್ 21 ರನ್ ಬಾರಿಸಿದರು. ಆದರೆ ಇಂಗ್ಲೆಂಡ್ ತಂಡದ ವೇಗಿ ಜೋಫ್ರಾ ಆರ್ಚರ್ ಎಸೆತವೊಂದನ್ನು ರಿವರ್ಸ್ ಸ್ವೀಪ್ ಮೂಲಕ ಸಿಕ್ಸರ್ಗೆ ಅಟ್ಟಿದ್ದು ಅಭಿಮಾನಿಗಳನ್ನು ಮಾತ್ರವಲ್ಲ ಕ್ರಿಕೆಟ್ ದಿಗ್ಗಜರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.
ನಿರ್ಭೀತ ಆಟಕ್ಕೆ ಹೆಸರಾಗಿರುವ ಪಂತ್ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದರು. ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸುತ್ತಿದ್ದಂತೆ ಪಂತ್ ಬ್ಯಾಟಿಂಗ್ಗೆ ಇಳಿದರು. ಬಳಿಕ ಶಿಖರ್ ದವನ್ ವಿಕೆಟ್ ಕೂಡ ಟೀಮ್ ಇಂಡಿಯಾ ಕಲೆದುಕೊಂಡಿತು. ಈ ಸಂದರ್ಭದಲ್ಲಿ ಪಂತ್ಗೆ ಶ್ರೇಯಸ್ ಐಯ್ಯರ್ ಜೊತೆಯಾದರು.
ಈ ಸಂದರ್ಬದಲ್ಲಿ ರಿಷಭ್ ಪಂತ್ ವೇಗವಾಗಿ ಬರುತ್ತಿದ್ದ ಎಸೆತವನ್ನು ರಿವರ್ಸ್ಸ್ವೀಪ್ ಮೂಲಕ ಸಿಕ್ಸರ್ಗೆ ಅಟ್ಟಿದ್ದರು. ಈ ಹೊಡೆತಕ್ಕೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ಸಿಂಗ್ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿದ್ದಾರೆ. "ಇದುವೇ ಹೊಸ ಪೀಳಿಗೆ!! ನಿಜಕ್ಕೂ ನಿರ್ಭೀತ ಆಟ ! ರಿವರ್ಸ್ಸ್ವೀಪ್ ಅಥವಾ ಹೊಡೆತವಾ, ಏನೆಂದು ಕರೆಯುವುದು ಗೊತ್ತಿಲ್ಲ. ಆದರೆ ರಿಷಬ್ ಪಂತ್ ವೇಗದ ಬೌಲರ್ನ ಎಸೆತಕ್ಕೆ ಇಂತಾ ಹೊಡೆತ ಬಾರಿಸಿರುವುದಕ್ಕೆ ಹ್ಯಾಟ್ಸ್ಆಫ್" ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಇನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಕೂಡ ಪ್ರತಿಕ್ರಿಯಸಿದ್ದು ರಿಷಭ್ ಪಂತ್ ಕ್ರಿಕೆಟ್ನಲ್ಲಿ ಬಾರಿಸಿದ ಶ್ರೇಷ್ಠ ಹೊಡೆತವನ್ನು ಬಾರಿಸಿದ್ದಾರೆ ಎಂದಿದ್ದಾರೆ. ಜೊತೆಗೆ ಅಚ್ಚರಿಯನ್ನೂ ಅವರು ವ್ಯಕ್ತಪಡಿಸಿದ್ದಾರೆ.