ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಭರ್ಜರಿ 100 ರನ್ಗಳ ಗೆಲುವು ಸಾಧಿಸಿದೆ. ಈ ಮೂಲಕ ಟೀಮ್ ಇಂಡಿಯಾದ ಅಜೇಯ ಓಟ ಮುಂದುವರಿದಿದ್ದು ಎಲ್ಲೆಡೆಯಿಂದ ಸಾಕಷ್ಟು ಮೆಚ್ಚಿಗೆ ವ್ಯಕ್ತವಾಗುತ್ತಿದೆ. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಬೌಲರ್ಗಳು ನೀಡಿದ ಪ್ರದರ್ಶನಕ್ಕೆ ನಾಯಕ ರೋಹಿತ್ ಶರ್ಮಾ ವಿಶೇಷ ಮೆಚ್ಚಿಗೆ ಸೂಚಿಸಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾ ಕಳೆದ ಐದು ಪಂದ್ಯಗಳಲ್ಲಿ ರನ್ ಬೆನ್ನಟ್ಟಿ ಗೆಲುವು ಸಾಧಿಸಿದ್ದು ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಪಡೆದುಕೊಂಡಿತ್ತು. ಆದರೆ ಲಕ್ನೋದ ಬ್ಯಾಟಿಂಗ್ಗೆ ಕಠಿಣವಾದ ಪಿಚ್ನಲ್ಲಿ ಟೀಮ್ ಇಂಡಿಯಾ 229 ರನ್ಗಳನ್ನು ಮಾತ್ರವೇ ಗಳಿಸಿತ್ತು. ಆದರೆ ನಂತರ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗ ಅಮೋಘ ಪ್ರದರ್ಶನ ನೀಡಿದ್ದು 129 ರನ್ಗಳಿಗೆ ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಿದೆ.

"ಇಂಥಾ ಮೊತ್ತವನ್ನು ರಕ್ಷಣೆ ಮಾಡಿಕೊಳ್ಳುವುದು ಎಲ್ಲಾ ಸಂದರ್ಭಗಳಲ್ಲಿಯೂ ಸಾಧ್ಯವಿಲ್ಲ. ನಮ್ಮ ವೇಗಿಗಳು ಇಲ್ಲಿ ಇದ್ದ ಸಿಂಗ್ ಹಾಗೂ ಚಲನೆಯ ಗುಣಗಳನ್ನು ಅದ್ಭುತವಾಗಿ ಬಳಸಿಕೊಂಡರು" ಎಂದಿದ್ದಾರೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ. ಇನ್ನು ಇದೇ ಸಂದರ್ಭದಲ್ಲಿ ಭಾರತ ತಂಡದ ಸಮತೋಲನದ ಬಗ್ಗೆ ನಾಯಕ ರೋಹಿತ್ ಶರ್ಮಾ ಸಂತಸ ವ್ಯಕ್ತಪಡಿಸಿದರು.
"ನಾವು ಅದ್ಭುತವಾದ ಸಮತೋಲನವನ್ನು ಹೊಂದಿದ್ದೇವೆ. ಸ್ಪಿನ್ನರ್ಗಳು ಹಾಗೂ ವೇಗಿಗಳು ಅನುಭವವನ್ನು ಕೂಡ ತಂದುಕೊಡುತ್ತಾರೆ. ಅಂತಹ ಬೌಲಿಂಗ್ ಲೈನ್ಅಪ್ ಹೊಂದಿರುವಾಗ, ಬ್ಯಾಟರ್ಗಳು ಅವರಿಗೆ ಕೆಲಸ ಮಾಡಲು ಏನನ್ನಾದರೂ ನೀಡುವುದು ಮತ್ತು ಅವರ ಮ್ಯಾಜಿಕ್ ಅನ್ನು ತೋರಿಸುವುದು ಮುಖ್ಯವಾಗುತ್ತದೆ" ಎಂದಿದ್ದಾರೆ ನಾಯಕ ರೋಹಿತ್ ಶರ್ಮಾ.
"ಟೂರ್ನಿಯ ಆರಂಭದಲ್ಲಿ ಐದು ಪಂದ್ಯಗಳಲ್ಲಿಯೂ ನಾವು ಎರಡನೇ ಪಾಳಯದಲ್ಲಿ ಬ್ಯಾಟಿಂಗ್ ನಡೆಸಿದ್ದೆವು. ಇಲ್ಲಿ ನಾವು ಮೊದಲ ಪಾಳಯದಲ್ಲಿ ಬ್ಯಾಟಿಂಗ್ ನಡೆಸಬೇಕಾಗಿತ್ತು. ಈ ಸವಾಲನ್ನು ನಾವು ಸ್ವೀಕರಿಸಿದ್ದೆವು. ಪೊಚ್ನಲ್ಲಿ ಏನೋ ಇದೆ ಎನ್ನುವುದು ನಮಗೆ ಅನಿಸಿತ್ತು. ನಮ್ಮಲ್ಲಿ ಅನುಭವಿ ಬೌಲಿಂಗ್ ವಿಭಾಗ ಇದ್ದ ಕಾರಣ ನಾವು ಉತ್ತಮ ಎನಿಸಬಲ್ಲ ಮೊತ್ತವನ್ನು ಗಳಿಸಲು ಬಯಸಿದ್ದೆವು. ಬ್ಯಾಟಿಂಗ್ನಲ್ಲಿ ನಾವು ಉತ್ತಮವಾಗಿರಲಿಲ್ಲ. ಆರಂಭದಲ್ಲಿಯೇ ಮೂರು ವಿಕೆಟ್ಗಳನ್ನು ಶೀಗ್ರವಾಗಿ ಕಳೆದುಕೊಂಡಿದ್ದೆವು"
"ನಂತರ ನಾವು ದೊಡ್ಡ ಜೊತೆಯಾಟವನ್ನು ಕಟ್ಟುಲೇಬೇಕಾಗಿತ್ತು. ಅದನ್ನು ನಾವು ಸಾಧಿಸಿದೆವು. ಆದರೆ ಅದಾದ ಬಳಿಕ ನನ್ನನ್ನೂ ಸೇರಿಸಿ ವಿಕೆಟ್ಗಳನ್ನು ಕಳೆದುಕೊಂಡೆವು. ಒಟ್ಟಾರೆಯಾಗಿ ನೋಡಿದಾಗ ನಾವು ಸುಮಾರು 30 ರನ್ಗಳನ್ನು ಹಿಂದಿದ್ದೇವೆ ಎಂದು ನನಗೆ ಅನಿಸಿತ್ತು" ಎಂದಿದ್ದಾರೆ ನಾಯಕ ರೋಹಿತ್ ಶರ್ಮಾ.
ಇನ್ನು ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಮಹತ್ವದ 87 ರನ್ಗಳ ಕೊಡುಗೆ ನೀಡಿದ್ದಾರೆ. ಇವರಿಗೆ ಸಾಥ್ ನೀಡಿದ ಕೆಎಲ್ ರಾಹುಲ್ 39 ರನ್ ಬಾರಿಸಿದರೆ ಸೂರ್ಯಕುಮಾರ್ ಯಾದವ್ 49 ರನ್ಗಳನ್ನು ಗಳಿಸಿದರು. ಹೀಗಾಗಿ ಟೀಮ್ ಇಂಡಿಯಾ ಈ ಪಂದ್ಯದಲ್ಲಿ 229 ರನ್ಗಳನ್ನು ಗಳಿಸಿತ್ತು.