ಬೆಂಗಳೂರು, ಆಗಸ್ಟ್ 01 : ಇಂಗ್ಲೆಂಡ್ ನೆಲದಲ್ಲಿ ಕೊನೆಯ ಬಾರಿಗೆ ಭಾರತಕ್ಕೆ ಗೆಲುವಿನ ಸಿಹಿ ತಿನ್ನಿಸಿದ್ದ ಟೆಸ್ಟ್ ತಂಡದ ಮಾಜಿ ನಾಯಕ, ಯುವ ಕ್ರಿಕೆಟ್ ತಂಡ ಕೋಚ್ ರಾಹುಲ್ ದ್ರಾವಿಡ್ ಅವರು 2018ರ ಇಂಗ್ಲೆಂಡ್ ಹಾಗೂ ಭಾರತ ಟೆಸ್ಟ್ ಸರಣಿ ಬಗ್ಗೆ ತಮ್ಮ ಭವಿಷ್ಯ ನುಡಿದಿದ್ದಾರೆ. ಬಿಬಿಸಿ 5 ಲೈವ್ ಸ್ಫೋರ್ಟ್ ಜತೆ ಮಾತನಾಡುತ್ತಾ, ಇಂಗ್ಲೆಂಡ್ ವಿರುದ್ಧ ಭಾರತ 2-1ರಲ್ಲಿ ಜಯ ದಾಖಲಿಸಿದೆ ಎಂದಿದ್ದಾರೆ.
ಈ ಮೂಲಕ ಕಪಿಲ್ ದೇವ್, ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಸಾಲಿಗೆ ವಿರಾಟ್ ಕೊಹ್ಲಿ ಸೇರಬಹುದಾಗಿದೆ. 2007ರಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ರಾಹುಲ್ ದ್ರಾವಿಡ್ ನಾಯಕತ್ವದ ಟೀಂ ಇಂಡಿಯಾ ಗೆದ್ದು ಸಾಧನೆ ಮಾಡಿತ್ತು.
2007ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ವೇಳೆ ನಮ್ಮ ತಂಡದ ವೇಗದ ಬೌಲರ್ಗಳು ಯಾವುದೇ ಗಾಯದ ಸಮಸ್ಯೆಗೆ ಒಳಗಾಗಲಿಲ್ಲ. ಹಾಗಾಗಿ ನಮಗೆ ಸರಣಿ ಗೆಲ್ಲಲು ಸಾಧ್ಯವಾಯಿತು. ಈ ಬಾರಿ ಸಹ ಕನಿಷ್ಠ ನಾಲ್ಕರಿಂದ ಐದು ಪಂದ್ಯಗಳಲ್ಲಿ ನಮ್ಮ ಬೌಲಿಂಗ್ ಶಕ್ತಿ ಸಮರ್ಪಕವಾಗಿ ಬಳಕೆಯಾದರೆ ಸರಣಿ ಗೆಲ್ಲಲು ಉತ್ತಮ ಅವಕಾಶವಿದೆ ಎಂದು ದ್ರಾವಿಡ್ ತಿಳಿಸಿದರು.
ಪಾದಾರ್ಪಣೆ ಪಂದ್ಯದಲ್ಲೇ ಧೋನಿ ಸ್ಟೈಲ್ನಲ್ಲಿ ಫಿನಿಶ್ ಮಾಡಿದ ಕೌರ್
ಭಾರತ-ಇಂಗ್ಲೆಂಡ್ ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯ ಬರ್ಮಿಂಗ್ ಹ್ಯಾಮ್ ನಲ್ಲಿ ಆಗಸ್ಟ್ 01ರಿಂದ ಆರಂಭವಾಗಲಿದೆ.
ಈಗಿನ ಭಾರತ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಹೆಚ್ಚಿನ ಸಮಸ್ಯೆ ಇಲ್ಲ. ಭಾರತ ತಂಡ ಉತ್ತಮ ಮೊತ್ತ ಕಲೆ ಹಾಕುವ ವಿಶ್ವಾಸವಿದೆ. ಯುವ ವೇಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸರಣಿಯುದ್ದಕ್ಕೂ ಉತ್ತಮ ನಿರ್ವಹಣೆ ತೋರಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಮಿಂಚಿದರೆ ಸರಣಿ ಗೆಲುವು ಸುಲಭ ಎಂದಿದ್ದಾರೆ.
2014ರಲ್ಲಿ ಕೊಹ್ಲಿ ನಾಯಕತ್ವದಲ್ಲಿ ಪ್ರವಾಸ ಕೈಗೊಂಡಿದ್ದ ಭಾರತವು ಲಾರ್ಡ್ಸ್ ಟೆಸ್ಟ್ನಲ್ಲಿ ಸ್ಮರಣೀಯ ಜಯ ಕಂಡಿತ್ತು. ಆದರೆ, ಐದು ಪಂದ್ಯಗಳ ಸರಣಿಯಲ್ಲಿ 1-3 ರಿಂದ ಸೋಲು ಕಂಡಿತ್ತು.
1996ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ಸೌರವ್ ಗಂಗೂಲಿ ಜತೆಯಲ್ಲಿ ಟೆಸ್ಟ್ ರಂಗಕ್ಕೆ ಕಾಲಿರಿಸಿದ ರಾಹುಲ್ ದ್ರಾವಿಡ್ ಅವರು, ಈಗ ಇಂಡಿಯಾ ಎ ಹಾಗೂ ಅಂಡರ್ 19 ತಂಡದ ಕೋಚ್ ಆಗಿದ್ದಾರೆ.