5ನೇ ಟೆಸ್ಟ್ ರದ್ದಿನ ಬಗ್ಗೆ ಮೊದಲ ಬಾರಿಗೆ ತುಟಿ ಬಿಚ್ಚಿದ ವಿರಾಟ್ ಕೊಹ್ಲಿ

ಅಬುಧಾಬಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ರದ್ದಾಗಿರುವ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಮಾತನಾಡಿದ್ದಾರೆ. ಮ್ಯಾನ್ಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಲಿದ್ದ ಐದನೇ ಟೆಸ್ಟ್ ಪಂದ್ಯ ಕೋವಿಡ್-19 ಭೀತಿಯಿಂದ ರದ್ದಾಗಿತ್ತು. ಐದು ಪಂದ್ಯಗಳ ಟೆಸ್ಟ್ ಸರಣಿಯ ವಿಜೇತರನ್ನು ನಿರ್ಧರಿಸಲಿದ್ದ ಕೊನೇಯ ಟೆಸ್ಟ್ ರದ್ದಾದ ಬಳಿಕ ಭಾರತೀಯ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಲುವಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಪ್ರಯಾಣಿಸಿದ್ದಾರೆ.
ಟೀಮ್ ಇಂಡಿಯಾದ ಕ್ಯಾಂಪ್ನಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಟೆಸ್ಟ್ ಸರಣಿ ಪೂರ್ಣಗೊಳ್ಳದೆ ಕೊನೆಗೊಂಡಿತ್ತು. ಈ ಬಗ್ಗೆ ಮಾತನಾಡಿರುವ ವಿರಾಟ್ ಕೊಹ್ಲಿ, ಸರಣಿ ಮುಗಿಯುವುದಕ್ಕೂ ಮುನ್ನವೇ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿರುವ ಐಪಿಎಲ್ಗಾಗಿ ಯುಎಇಗೆ ತೆರಳಬೇಕಾಗಿ ಬಂದಿದ್ದು ದುರದೃಷ್ಟಕರ ಎಂದಿದ್ದಾರೆ.

ಕೋವಿಡ್-19 ಭೀತಿ ಇರುವಾಗ ಎಲ್ಲವೂ ಈಗ ಅನಿಶ್ಚಿತ
ಆರ್ಸಿಬಿ ಡಿಜಿಟಲ್ ಮೀಡಿಯಾ ವೇದಿಕೆ ಆರ್ಸಿಬಿ ಬೋಲ್ಡ್ ಡೈರೀಸ್ ಸರಣಿಯ ವಿಡಿಯೋವೊಂದರಲ್ಲಿ ಮಾತನಾಡಿರುವ ವಿರಾಟ್ ಕೊಹ್ಲಿ, "ಇಂಗ್ಲೆಂಡ್ನಲ್ಲಿ ನಾವು ಅವಧಿಗೂ ಮುನ್ನವೇ ಟೆಸ್ಟ್ ಸರಣಿ ಕೊನೆಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು ದುರದೃಷ್ಟಕರ. ಆದರೆ ಕೋವಿಡ್-19 ಸೋಂಕಿನ ಭೀತಿ ಇರುವಾಗ ಎಲ್ಲವೂ ಈಗ ಅನಿಶ್ಚಿತ. ಯಾವ ಕ್ಷಣದಲ್ಲಿ ಯಾವ ವಿಚಾರ ಬೇಕಾದರೂ ನಡೆಯಬಹುದು. ಆಶಾದಾಯಕವಾಗಿ, ನಾವು ಒಳ್ಳೆಯ, ಬಲಿಷ್ಠ ಮತ್ತು ಭದ್ರತೆಯಿರುವ ಪರಿಸರದಲ್ಲಿ ಈಗ ಇದ್ದೇವೆ. ಗುಣಮಟ್ಟದ ಐಪಿಎಲ್ನಲ್ಲಿ ನಾವೀಗ ಇದ್ದೇವೆ. ಐಪಿಎಲ್ ಈ ದ್ವಿತೀಯ ಹಂತದ ಪಂದ್ಯಗಳು ಉತ್ಸುಕತೆಯಿಂದ ಕೂಡಿರಲಿದೆ. ಈಗ ಆರ್ಸಿಬಿಗೆ ಮತ್ತು ಮುಂದೆ ಟಿ20 ವಿಶ್ವಕಪ್ ವೇಳೆ ಭಾರತೀಯ ತಂಡಕ್ಕೆ ಇಂಥ ಭದ್ರತೆಯ ಪರಿಸರ ತುಂಬಾ ಪ್ರಮುಖ ಸಂಗತಿಯಾಗಿರಲಿದೆ," ಎಂದು ಕೊಹ್ಲಿ ಹೇಳಿದ್ದಾರೆ.

ಭಾರತೀಯ ಕ್ಯಾಂಪ್ನಲ್ಲಿ ಸೋಂಕಿನ ಪ್ರಕರಣಗಳು
ಇಂಗ್ಲೆಂಡ್ಗೆ ಪ್ರವಾಸ ಹೋಗಿದ್ದ ಭಾರತ, ಅಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ಆಡುವುದರಲ್ಲಿತ್ತು. ನಾಲ್ಕು ಟೆಸ್ಟ್ ಪಂದ್ಯಗಳು ಈಗಾಗಲೇ ನಡೆದಿದ್ದವು. ಸರಣಿ 2-1ರಿಂದ ಭಾರತದ ವಶದಲ್ಲಿತ್ತು. ಆದರೆ ಮ್ಯಾನ್ಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಐದನೇ ಟೆಸ್ಟ್ ಪಂದ್ಯ, ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿದ್ದರಿಂದ ಅನಿರೀಕ್ಷಿತವಾಗಿ ರದ್ದಾಗಿತ್ತು. ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್, ಇಬ್ಬರು ಫಿಸಿಯೋಗಳು ಕೋವಿಡ್-19 ಸೋಂಕಿಗೆ ತುತ್ತಾಗಿದ್ದರು. ಅಸಲಿಗೆ ನಾಲ್ಕನೇ ಟೆಸ್ಟ್ ವೇಳೆಯೇ ಭಾರತದ ಮೂವರು ಕೋಚ್ಗಳು ಮತ್ತು ಒಬ್ಬ ಫಿಸಿಯೋಗೆ ಕೋವಿಡ್ ಸೋಂಕು ತಗುಲಿತ್ತು. ಅಂತಿಮ ಟೆಸ್ಟ್ಗೂ ಮುನ್ನ ಇದ್ದ ಮತ್ತೊಬ್ಬ ಫಿಸಿಯೋಗೂ ಸೋಂಕು ತಗುಲಿದ್ದರಿಂದ ಭೀತಿಗೊಂಡ ಭಾರತ ಆಟಗಾರರು ಕೊನೇ ಟೆಸ್ಟ್ ಆಡಲು ಹಿಂದೇಟು ಹಾಕಿದ್ದರು. ಹೀಗಾಗಿ ಕೊನೇ ಟೆಸ್ಟ್ ಪಂದ್ಯ ರದ್ದುಗೊಳಿಸಬೇಕಾದ ಇಕ್ಕಟ್ಟಿಗೆ ಬಿಸಿಸಿಐ ಮತ್ತು ಇಸಿಬಿ ಸಿಲುಕಿತ್ತು.

ದ್ವಿತೀಯ ಐಪಿಎಲ್ಗೆ ಯುಎಇಯಲ್ಲಿ ಆರ್ಸಿಬಿ ಸಿದ್ಧತೆ
ಸೆಪ್ಟೆಂಬರ್ 12ರ ಭಾನುವಾರ ಇಂಗ್ಲೆಂಡ್ನಿಂದ ಯುಎಇಗೆ ಆರ್ಸಿಬಿ ಆಟಗಾರರು ಇಳಿದಿದ್ದರು. ಟೆಸ್ಟ್ ಸರಣಿಗಾಗಿ ತೆರಳಿದ್ದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ, ವೇಗಿ ಮೊಹಮ್ಮದ್ ಸಿರಾಜ್, ಭಾನುವಾರ ಯುಎಇಗೆ ಬಂದಿದ್ದರು. ಚಾರ್ಟರ್ಡ್ ಫ್ಲೈಟ್ ಅನ್ನು ದುಬೈಗೆ ಕಳುಹಿಸಿಕೊಟ್ಟಿದ್ದ ಆರ್ಸಿಬಿ ಫ್ರಾಂಚೈಸಿ, ಮ್ಯಾನ್ಚೆಸ್ಟರ್ನಿಂದ ದುಬೈಗೆ ಆಟಗಾರರು ಸುರಕ್ಷಿತವಾಗಿ ತಲುಪುವಂತೆ ನೋಡಿಕೊಂಡಿತ್ತು. ಯುಎಇಗೆ ಬಂದ ಬಳಿಕ ತಂಡ ಸೇರುವ ಮುನ್ನ ಆಟಗಾರರು ಆರು ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಿದ್ದಾರೆ. ಐಪಿಎಲ್ ಸದ್ಯದ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿರುವ ಆರ್ಸಿಬಿ ಸೆಪ್ಟೆಂಬರ್ 20ರಂದು ಮೊದಲ ಪಂದ್ಯವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಸವಾಲು ಸ್ವೀಕರಿಸಲಿದೆ. ದ್ವಿತೀಯ ಹಂತದ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications