ಭಾರತ ಹಾಗೂ ಐರ್ಲೆಂಡ್ ತಮಡಗಳ ನಡುವಿನ ಟಿ20 ಸರಣಿ ಇಂದು(ಶುಕ್ರವಾರ) ಆರಂಭವಾಗುತ್ತಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡುವ ಸಾಧ್ಯತೆ ದಟ್ಟವಾಗಿದ್ದು ಸಾಕಷ್ಟು ವಿಚಾರಗಳಿಂದಾಗಿ ಈ ಪಂದ್ಯವನ್ನು ಎದುರು ನೋಡುತ್ತಿರುವ ಟೀಮ್ ಇಂಡಿಯಾ ಅಭಿಮಾನಿಗಳಿಗೆ ನಿರಾಸೆಯುಂಟು ಮಾಡುವ ಸಾಧ್ಯತೆ ಹೆಚ್ಚಿದೆ.
ಜಸ್ಪ್ರೀತ್ ಬೂಮ್ರಾ 10 ತಿಂಗಳ ಬಳಿಕ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡುತ್ತಿದ್ದು ಈ ದೃಷ್ಟಿಯಿಂದ ಭಾರತೀಯ ಅಭಿಮಾನಿಗಳು ಈ ಪಂದ್ಯವನ್ನು ಎದುರುನೋಡುತ್ತಿದ್ದರು. ಆದರೆ ಸದ್ಯದ ಪರಿಸ್ಥಿತಿ ಬೂಮ್ರಾ ಕಮ್ಬ್ಯಾಕ್ ಉತ್ಸಾಹಕ್ಕೆ ತಣ್ಣೀರೆರಚುವಂತೆ ಗೋಚರವಾಗುತ್ತಿದೆ. ಪಂದ್ಯದ ಹಿಂದಿನ ದಿನ ಭಾರತ ತಂಡ ಅಂದುಕೊಂಡಂತೆಯೇ ಮಳೆಯ ಅಡ್ಡಿಯಿಲ್ಲದೆ ಅಭ್ಯಾಸವನ್ನು ನಡೆಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಇಂದಿನ ಸ್ಥಿತಿ ಸಂಪೂರ್ಣವಾಗಿ ಭಿನ್ನವಾಗಿದೆ.

ಇನ್ನು ಈ ಪಂದ್ಯ ಮಳೆಗೆ ಆಹುತಿಯಾದರೆ ಫಿಟ್ನೆಸ್ ಸಾಬೀತುಪಡಿಸಲು ಕಾಯುತ್ತಿರುವ ನಾಯಕ ಜಸ್ಪ್ರೀತ್ ಬೂಮ್ರಾ ಹಾಗೂ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಹಿನ್ನಡೆಯಾಗಲಿದೆ. ಏಷ್ಯಕಪ್, ಹಾಗೂ ವಿಶ್ವಕಪ್ ದೃಷ್ಟಿಯಿಂದ ಈ ಇಬ್ಬರು ಆಟಗಾರರಿಗೂ ಇದು ಪ್ರಮುಖ ಎಂದು ಭಾವಿಸಲಾಗಿದೆ. ಇನ್ನು ಈ ಇಬ್ಬರು ವೇಗಿಗಳಲ್ಲದೆ ಈ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವ ಹಲವು ಯುವ ಆಟಗಾರರ ಮೇಲೆಯೂ ಸಾಕಷ್ಟು ನಿರೀಕ್ಷೆಯಿದೆ.
ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ಋತುರಾಜ್ ಗಾಯಕ್ವಾಡ್ ಹಾಗೂ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ, ಶಿವಂ ದುಬೆ, ರವಿ ಬಿಷ್ಣೋಯ್ ಹಾಗೂ ಯಶಸ್ವಿ ಜೈಸ್ವಾಲ್ ಕೂಡ ಈ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಎದುರು ನೋಡುತ್ತಿದ್ದಾರೆ.
ಇನ್ನು ಅಕ್ಯುವೆದರ್ ಮಾಹಿತಿಯ ಪ್ರಕಾರ ಡಬ್ಲಿನ್ನಲ್ಲಿ ಹಗಲಿನ ಸಂದರ್ಭದಲ್ಲಿ 92 ಶೇಕಡಾ ಮಳೆಯಾಗುವ ಸಾಧ್ಯತೆಯಿದ್ದರೆ ರಾತ್ರಿ 98 ಶೇಕಡಾ ಭಾಗ ಮಳೆಯಾಗುವ ಸಾಧ್ಯತೆಯಿದೆ ಎನ್ನುತ್ತಿದೆ. ಹೀಗಾಗಿ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡುವುದು ಸ್ಪಷ್ಟವಾಗಿದ್ದು ತಲಾ ಐದು ಓವರ್ಗಳ ಪಂದ್ಯ ಮಾತ್ರವೇ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೇರ್, ರಾಸ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್, ಕ್ರೇಗ್ ಯಂಗ್
ಭಾರತ ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.