ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳ ಆತಿಥ್ಯ ವಹಿಸಲಿದೆ. ಈ ಪಂದ್ಯದ ಮೂಲಕ ಉಭಯ ದೇಶಗಳ ನಡುವಣ ಮೂರು ಟೆಸ್ಟ್ ಸರಣಿ ಆರಂಭವಾಗಲಿದೆ. ಗೆಲುವಿನ ಹುಮ್ಮಸ್ಸಿನಲ್ಲಿರುವ ಭಾರತ, ಜಯದ ಟ್ರ್ಯಾಕ್ ಮುಂದುವರೆಸಲು ಪ್ಲ್ಯಾನ್ ಮಾಡಿಕೊಂಡಿದೆ.
ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿರುವ ಟೀಮ್ ಇಂಡಿಯಾ, ತವರಿನಲ್ಲಿ ಮತ್ತೊಂದು ಸರಣಿ ಗೆಲುವಿನ ನಗೆ ಬೀರಲು ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ನ್ಯೂಜಿಲೆಂಡ್, ಶ್ರೀಲಂಕಾದಲ್ಲಿ ಕ್ಲೀನ್ ಸ್ವೀಪ್ ಸೋಲು ಕಂಡು ಬಂದಿದ್ದು, ಲಯಕ್ಕೆ ಮರಳಲು ರೂಪು ರೇಷೆ ಸಿದ್ಧಪಡಿಸಿಕೊಂಡಿದೆ. ನ್ಯೂಜಿಲೆಂಡ್ ಹಿಂದಿನ ಐದು ಟೆಸ್ಟ್ನಲ್ಲಿ ಒಂದೇ ಒಂದು ಪಂದ್ಯ ಗೆದ್ದಿಲ್ಲ. ಹೀಗಾಗಿ ಒತ್ತಡದಲ್ಲಿದೆ. ಭಾರತ ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಬೆಂಗಳೂರಿನಲ್ಲಿ 2022ರಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ಹಗಲು ರಾತ್ರಿ ಟೆಸ್ಟ್ ನಡೆದಿತ್ತು. ಈ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಸಂಘಟಿತ ಆಟದ ಪ್ರದರ್ಶನ ನೀಡಿ ಗೆಲುವು ದಾಖಲಿಸಿತ್ತು. ನ್ಯೂಜಿಲೆಂಡ್ ವಿರುದ್ಧವೂ ಇದೇ ಸಾಧನೆ ಮಾಡುವ ವಿಶ್ವಾಸವನ್ನು ಟೀಮ್ ಇಂಡಿಯಾ ಹೊಂದಿದೆ. ಅಲ್ಲದೆ ತವರಿನಲ್ಲಿ 19ನೇ ಸರಣಿ ಗೆಲುವಿನ ಆಸೆಗೆ ಬೆಂಗಳೂರಿನಲ್ಲಿ ನಾಂದಿ ಹಾಕಲು ಪ್ಲ್ಯಾನ್ ಮಾಡಿಕೊಂಡಿದೆ.
ಈಗಾಗಲೇ ಈ ಮೈದಾನದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಒಟ್ಟು ಮೂರು ಬಾರಿ ಮುಖಾಮುಖಿ ನಡೆಸಿದ್ದು, ಮೂರರಲ್ಲೂ ಭಾರತ ಜಯ ಸಾಧಿಸಿದೆ. ಈ ಅಂಗಳ ಭಾರತದ ಪಾಲಿಗೆ ಫೆವರೀಟ್ ಅಂಗಳಲ್ಲಿ ಒಂದಾಗಿದೆ. ಕಳೆದ 19 ವರ್ಷಗಳಿಂದ ಭಾರತ ಈ ಮೈದಾನದಲ್ಲಿ ಸೋಲು ಕಂಡೇ ಇಲ್ಲ.
ಉಭಯ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದು, ಅವರ ಮೇಲೆ ಕಣ್ಣು ನೆಟ್ಟಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಶ್ವಿನ್ ಅವರು ಹೊಸ ದಾಖಲೆಯನ್ನು ನಿರ್ಮಿಸುವ ಕನಸಿನಲ್ಲಿದ್ದಾರೆ. ಹೀಗಾಗಿ ಈ ಟೆಸ್ಟ್ ಮಹತ್ವ ಪಡೆದುಕೊಂಡಿದೆ. ಈಗಾಗಲೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಅಗ್ರ ಸ್ಥಾನದಲ್ಲಿರುವ ಟೀಮ್ ಇಂಡಿಯಾ, ಈ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ರಣ ತಂತ್ರವನ್ನು ಹೆಣೆದುಕೊಂಡಿದೆ.

ಬೆಂಗಳೂರಿನಲ್ಲಿ ಮಂಗಳವಾರ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಬುಧವಾರವೂ ಮಳೆ ಮುನ್ಸೂಚನೆ ನೀಡಲಾಗಿದೆ. ಪಂದ್ಯ ಆರಂಭವಾಗುವ ಅಕ್ಟೋಬರ್ 16ರಂದು ಮಳೆ ಆಗುವ ಸಾಧ್ಯತೆ ಹೆಚ್ಚಿದೆ. ಇನ್ನು ಹವಾಮಾನ ಇಲಾಖೆಯ ವರದಿಯಂತೆ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶುಕ್ರವಾರ ಮಳೆ ಕೊಂಚ ತನ್ನ ಕೆಲಸಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಇದೆ. ಉಳಿದಂತೆ ಮಳೆ ಈ ಟೆಸ್ಟ್ ಪಂದ್ಯದ ಮೇಲೆ ತನ್ನ ಕರಿ ನೆರಳು ಬೀರಲಿದೆ. ಹೀಗಾಗಿ ಅಭಿಮಾನಿಗಳ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿರುವುದಂತೂ ಸುಳ್ಳಲ್ಲ.