ಬುಧವಾರ, ನವೆಂಬರ್ 15ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ನ ಗ್ರ್ಯಾಂಡ್ ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನ್ಯೂಜಿಲೆಂಡ್ ವಿರುದ್ಧ ಆತಿಥೇಯ ಭಾರತ ತಂಡ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.
2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಇದರಿಂದಾಗಿಯೇ ಟೀಮ್ ಇಂಡಿಯಾ ಅಜೇಯವಾಗಿ ಸೆಮಿಫೈನಲ್ ತಲುಪಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೆಮಿಫೈನಲ್ ಹಣಾಹಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲ್ಲಲು, ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಆಟಗಾರರು ಹೊಸ ಸಾಧನೆಯನ್ನು ಮಾಡಬೇಕಿದೆ.
ವಿಶೇಷವಾಗಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಇಬ್ಬರು ಶ್ರೇಷ್ಠ ಬ್ಯಾಟ್ಸ್ಮನ್ಗಳು ಐಸಿಸಿ ಏಕದಿನ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ರನ್ ಬರ ಅನುಭವಿಸಿದ್ದಾರೆ. ಇಷ್ಟೇ ಅಲ್ಲದೆ ಮಧ್ಯಮ ಕ್ರಮಾಂಕದ ಬಲಿಷ್ಠ ಬ್ಯಾಟರ್ ಕೆಎಲ್ ರಾಹುಲ್ ಕೂಡ ಸೆಮಿಫೈನಲ್ನಲ್ಲಿ ನಿರಾಸೆಯ ಕಾರ್ಮೋಡದಲ್ಲಿ ಅವಿತುಕೊಂಡಿದ್ದಾರೆ.
ಆದರೆ, ಭಾರತದ ಈ ಮೂವರು ದಿಗ್ಗಜ ಬ್ಯಾಟರ್ಗಳು ವಾಂಖೆಡೆಯಲ್ಲಿ ಹೊಸ ಇತಿಹಾಸ ಬರೆಯಬೇಕಿದೆ. ಅಲ್ಲದೆ ತಮಗೆ ಅಸಾಧ್ಯವಾದದ್ದು ಏನು ಇಲ್ಲ ಎಂಬುದನ್ನು ಸಾಬೀತುಪಡಿಸಬೇಕಿದೆ.

ವಿರಾಟ್ ಕೊಹ್ಲಿ ಪ್ರಸ್ತುತ ವಿಶ್ವದ ಅಸಾಧಾರಣ ಬ್ಯಾಟ್ಸ್ಮನ್. ಇವರು ತಮ್ಮ ವೃತ್ತಿಜೀವನದ ನಾಲ್ಕನೇ ಏಕದಿನ ವಿಶ್ವಕಪ್ ಆಡುತ್ತಿದ್ದಾರೆ. ವಿರಾಟ್ ಕೊಹ್ಲಿ ಕೂಡ ಭಾರತ ತಂಡಕ್ಕೆ ಅದೃಷ್ಟವಂತರು.
ಏಕೆಂದರೆ, ಅವರ ಕ್ರಿಕೆಟ್ ವೃತ್ತಿಜೀವನದ ಆರಂಭದಿಂದಲೂ ಟೀಮ್ ಇಂಡಿಯಾ ಪ್ರತಿ ವಿಶ್ವಕಪ್ನಲ್ಲಿಯೂ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಆದರೆ ವಿರಾಟ್ ಕೊಹ್ಲಿಯ ಬ್ಯಾಟ್ ಮಹತ್ವದ ಪಂದ್ಯದಲ್ಲಿ ಮೌನಕ್ಕೆ ಶರಣಾಗುತ್ತದೆ.
2011ರ ಏಕದಿನ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ತಮ್ಮ ಮೊದಲ ಸೆಮಿಫೈನಲ್ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಿದ್ದರು. ಇದರಲ್ಲಿ ಅವರು ಕೇವಲ 9 ರನ್ ಗಳಿಸಿ ಪೆವಿಲಿಯನ್ಗೆ ವಹಾಬ್ ರಿಯಾಜ್ ಬೌಲಿಂಗ್ನಲ್ಲಿ ಔಟಾದರು.

2015ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟ್ನಿಂದ ಬಂದಿದ್ದು ಕೇವಲ ಒಂದು ರನ್ ಮಾತ್ರ. ಎಡಗೈ ವೇಗಿ ಮಿಚೆಲ್ ಜಾನ್ಸನ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು.
2019ರ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ನಾಯಕನಾಗಿದ್ದ ವಿರಾಟ್ ಕೊಹ್ಲಿ ಕೇವಲ 1 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಟ್ರೆಂಟ್ ಬೌಲ್ಟ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಭಾರತ ತಂಡದ ಹಾಲಿ ನಾಯಕ ರೋಹಿತ್ ಶರ್ಮಾ ಅವರ ಸ್ಥಿತಿಯು ಸೆಮಿಫೈನಲ್ನಲ್ಲಿ ವಿರಾಟ್ ಕೊಹ್ಲಿಯಂತೆಯೇ ಇದೆ. 2015ರಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದ್ದರು. ಆದರೆ ಬಿಗ್ ಇನ್ನಿಂಗ್ಸ್ ಕಟ್ಟುವಲ್ಲಿ ಎಡವಿದರು. 2019ರಲ್ಲಿ ರೋಹಿತ್ ಶರ್ಮಾ ಕೇವಲ 1 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು.
ಇನ್ನು ಕೆಎಲ್ ರಾಹುಲ್ ಇದುವರೆಗೆ ಕೇವಲ ಒಂದು ಸೆಮಿಫೈನಲ್ ಪಂದ್ಯವನ್ನಾಡಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ರಾಹುಲ್ ಅವರ ಬ್ಯಾಟ್ ಒಂದಕ್ಕಿಂತ ಹೆಚ್ಚು ರನ್ ಕಂಡಿಲ್ಲ. ವಾಂಖೆಡೆಯಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಾದರೆ ಈ ಮೂವರು ಆಟಗಾರರು ದೊಡ್ಡ ಇನ್ನಿಂಗ್ಸ್ ಆಡಬೇಕಾಗಿರುವುದು ಸತ್ಯ.